Home ರಾಜಕೀಯ ಸರ್ಕಾರಿ ವೆಚ್ಚದಲ್ಲಿ ಮನೆ ನವೀಕರಣ, ಖಾಸಗಿ ವಿಮಾನ ಪ್ರಯಾಣ ; ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಶಾಂತ್...

ಸರ್ಕಾರಿ ವೆಚ್ಚದಲ್ಲಿ ಮನೆ ನವೀಕರಣ, ಖಾಸಗಿ ವಿಮಾನ ಪ್ರಯಾಣ ; ಅರವಿಂದ್ ಕೇಜ್ರಿವಾಲ್ ವಿರುದ್ಧ ಪ್ರಶಾಂತ್ ಭೂಷಣ್ ಆರೋಪ

0

‘ಕಾಮನ್ ಮ್ಯಾನ್’ ಹಣೆಪಟ್ಟಿ ಹೊಂದಿ ಮನೆ ನವೀಕರಣ ಹಾಗೂ ಚುನಾವಣಾ ಪ್ರಚಾರಕ್ಕೆ ಖಾಸಗಿ ವಿಮಾನ ಪ್ರಯಾಣಕ್ಕೆ ಕೋಟಿ ಕೋಟಿ ಹಣ ವ್ಯಯಿಸುತ್ತಿರುವ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ತಮ್ಮ ಒಂದು ಕಾಲದ ಒಡನಾಡಿ ವಕೀಲ ಪ್ರಶಾಂತ್ ಭೂಷಣ್ ಕಟುವಾಗಿ ಟೀಕಿಸಿದ್ದಾರೆ.

ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಸಮೇತ ಪೋಸ್ಟ್ ಮಾಡಿರುವ ಪ್ರಶಾಂತ್ ಭೂಷಣ್ ಈ ಹಿಂದೆ ಕೇಜ್ರಿವಾಲ್ ಅವರ ದೆಹಲಿ ಮನೆ ನವೀಕರಣಕ್ಕೆ 45 ಕೋಟಿ ರೂಪಾಯಿ ಹಾಗೂ ಹಿಮಾಚಲ ಪ್ರದೇಶ ಹಾಗೂ ಗುಜರಾತ್ ಚುನಾವಣಾ ಪ್ರಚಾರಕ್ಕೆ ಖಾಸಗಿ ವಿಮಾನ ಪಡೆದಿರುವ ಬಗ್ಗೆ ಆರೋಪಿಸಿದ್ದಾರೆ.

ಸರಳತೆ ಮತ್ತು ಭ್ರಷ್ಟಾಚಾರ ರಹಿತ ಆಡಳಿತದ ಬಗ್ಗೆ ಪಾಠ ಮಾಡುತ್ತಿದ್ದ ಕೇಜ್ರಿವಾಲ್ ಈ ರೀತಿ ಕೋಟಿ ಕೋಟಿ ಹಣ ವ್ಯಯಿಸುತ್ತಿರುವ ಬಗ್ಗೆ ಟೀಕಿಸಿರುವ ಪ್ರಶಾಂತ್ ಭೂಷಣ್, ಕಾಮನ್ ಮ್ಯಾನ್ ಈಗ ರಾಜನಂತೆ ಬದಲಾಗಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಹಾಗೂ ಇದು ಆಮ್ ಆದ್ಮಿ ಪಕ್ಷದ ಧ್ಯೇಯೋದ್ದೇಶಕ್ಕೆ ವಿರುದ್ಧದ ನಡೆ ಎಂದಿದ್ದಾರೆ.

ಕೇಜ್ರಿವಾಲ್ ಅವರ ಹಿಂದಿನ ಆಡಳಿತ ಮಾದರಿಯನ್ನು ಹೋಲಿಸಿ, ಆರೋಪ ಮಾಡಿರುವ ಪ್ರಶಾಂತ್ ಭೂಷಣ್, “ಮೂರರಿಂದ ನಾಲ್ಕು ಕೋಣೆಗಳ ಮನೆಯಿಂದ, 44 ಕೋಟಿ ಮೌಲ್ಯದ ಅರಮನೆಗೆ, ಅದೂ ಸರ್ಕಾರಿ ವೆಚ್ಚದಲ್ಲಿ ವ್ಯಯಿಸಿರುವ ವ್ಯಕ್ತಿಯನ್ನು ‘ಆಮ್ ಆದ್ಮಿ’ ಎನ್ನಲು ಹೇಗೆ ಸಾಧ್ಯ ಎಂದು ಆರೋಪಿಸಿದ್ದಾರೆ. ಆ ಮೂಲಕ ಸಂಪೂರ್ಣ ಭ್ರಷ್ಟಾಚಾರ ವಿರೋಧಿ ಆಂದೋಲನದ ಧ್ಯೇಯ ಹೊಂದಿದ್ದ ಕೇಜ್ರಿವಾಲ್ ಅವರ ನಡೆಯ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಮನೆ ನವೀಕರಣ ವೆಚ್ಚದ ಜೊತೆಗೆ ಗುಜರಾತ್ ಹಾಗೂ ಹಿಮಾಚಲ ಪ್ರದೇಶದ ಚುನಾವಣೆಗೆಂದು ಪಂಜಾಬ್ ಸರ್ಕಾರದ ವತಿಯಿಂದ ಖಾಸಗಿ ವಿಮಾನ ಪಡೆದಿರುವ ಬಗ್ಗೆಯೂ ಪ್ರಸ್ತಾಪಿಸಿ ಪ್ರಶಾಂತ್ ಭೂಷಣ್ ಅವರು, ಕೇಜ್ರಿವಾಲ್ ಅವರನ್ನು ಟೀಕಿಸಿದ್ದಾರೆ.

You cannot copy content of this page

Exit mobile version