ಮಹಿಳೆಗೆ ಲೈಂಗಿಕ ಕಿರುಕುಳ: ಸುಬ್ರಹ್ಮಣ್ಯದ ಮಾಜಿ ಪಂಚಾಯತ್‌ ಸದಸ್ಯ ಪ್ರಶಾಂತ್‌ ಭಟ್ ಅರೆಸ್ಟ್‌

ಸುಬ್ರಮಣ್ಯ: ವಿವಾಹಿತ ಮಹಿಳೆಯೊಬ್ಬರಿಗೆ ಸಂಗೀತ ಕ್ಷೇತ್ರದಲ್ಲಿ ಅವಕಾಶ ನೀಡುವ ನೆಪದಲ್ಲಿ ಸ್ನೇಹ ಬೆಳೆಸಿ, ನಂತರ ಆಕೆಯನ್ನು ಬಲವಂತದಿಂದ ಲೈಂಗಿಕವಾಗಿ ಬಳಸಿಕೊಂಡು, ಹಣಕ್ಕಾಗಿ ಮಹಿಳೆ ಮತ್ತು ಆಕೆಯ ಕುಟುಂಬವನ್ನು ಪೀಡಿಸಿದ ಆರೋಪದ ಮೇಲೆ ಪುತ್ತೂರು ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ.

ಬಂಧಿತ ಆರೋಪಿಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಮಾಜಿ ಸದಸ್ಯ ದೇವಾಲಯ ಹಿತರಕ್ಷಣಾ ವೇದಿಕೆಯ ಸದಸ್ಯ ಪ್ರಶಾಂತ್ ಭಟ್ ಮಾಣಿಲ ಎಂದು ಗುರುತಿಸಲಾಗಿದೆ. ಪೊಲೀಸ್‌ ವಶದಲ್ಲಿರುವ ಆರೋಪಿಯು ಮಹಿಳೆ ನಗ್ನ ಚಿತ್ರ ತೆಗೆದಿಟ್ಟುಕೊಂಡಿದ್ದ ಎನ್ನಲಾಗಿದೆ. ಪುತ್ತೂರು ಮೂಲದ ಈತ ಸುಬ್ರಹ್ಮಣ್ಯವನ್ನು ತನ್ನ ಕಾರ್ಯಕ್ಷೇತ್ರವನ್ನಾಗಿಸಿಕೊಂಡಿದ್ದ.

ಕ್ಲಬ್‌ ಹೌಸ್‌ ಅಪ್ಲಿಕೇಷನನ್ನಿನಲ್ಲಿ ಪರಸ್ಪರ ಪರಿಚಯವಾಗಿದ್ದ ಸಂತ್ರಸ್ಥೆ ಹಾಗೂ ಆರೋಪಿಯು ನಂತರ ಪರಿಚಯ ಬೆಳೆಸಿಕೊಂಡು ಫೇಸ್‌ಬುಕ್‌ ಗೆಳೆತನ ಮಾಡಿ ಅಲ್ಲಿಯೂ ಮಾತನಾಡಿಕೊಂಡಿದ್ದರು. ನಂತರ ಅವರ ನಡುವೆ ಪ್ರೇಮವೂ ಚಿಗುರಿತ್ತು.

ಈ ನಡುವೆ ಆರೋಪಿಯು ಸಂತ್ರಸ್ಥೆಯ ಬಳಿ ಸಲುಗೆ ಬೆಳೆಸಿಕೊಂಡು ಆಕೆಗೆ ಸಂಗೀತ ಕ್ಷೇತ್ರದಲ್ಲಿ ಇರುವ ಆಸಕ್ತಿಯನ್ನು ಗಮನಿಸಿ ಆಕೆಗೆ ಅರ್ಕೆಸ್ಟ್ರಾದಲ್ಲಿ ಹಾಡಲು ಚಾನ್ಸ್‌ ಕೊಡಿಸುವುದಾಗಿ ಹೇಳಿ ಶಿರಸಿಗೆ ಕರೆಸಿಕೊಂಡಿದ್ದಾನೆ. ಇದನ್ನು ನಂಬಿದ ಆಕೆ ಶಿರಸಿಗೆ ತೆರಳಿದ್ದಾರೆ. ಆಕೆಯೊಡನೆ ಪ್ರಶಾಂತ್‌ ಅಲ್ಲಿ ಬಲಂವತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ನಂತರ ಸಂತ್ರಸ್ಥೆಯೊಡನೆ ಆ ಸಂದರ್ಭದ ಫೋಟೊ ತೆಗೆದಿಟ್ಟುಕೊಂಡು ಆಕೆಯನ್ನು ಬ್ಲಾಕ್‌ ಮೇಲ್‌ ಮಾಡುತ್ತಿದ್ದ.

ಒಂದು ಹೆಣ್ಣು ಮಗುವಿನ ತಂದೆಯಾಗಿರುವ 35 ವರ್ಷದ ಪ್ರಶಾಂತ್‌ ಭಟ್‌ ದಾಂಪತ್ಯದಲ್ಲಿ ಮನಸ್ಥಾಪವಿತ್ತು ಎನ್ನಲಾಗಿದೆ. ದಂಪತಿಗಳ ನಡುವೆ ವಿಚ್ಛೇದನವೂ ಆಗಿದೆ.

ನಂತರ ದಿನಗಳಲ್ಲಿ ಪ್ರಶಾಂತ್‌ ತಮ್ಮಿಬ್ಬರ ಫೋಟೊ ಇಟ್ಟುಕೊಂಡು ಪ್ರಶಾಂತ್‌ ಮಹಿಳೆಯನ್ನು ಹಣಕ್ಕಾಗಿ ಬ್ಲಾಕ್‌ ಮೇಲ್‌ ಮಾಡಲು ಆರಂಭಿಸಿದ್ದಾನೆ. ಆಕೆ ಹೇಗೋ ಧೈರ್ಯ ಮಾಡಿ ಗಂಡನಿಗೆ ವಿಷಯ ತಿಳಿಸಿ ಗಂಡನಿಂದ ಅವನಿಗೆ 25,000 ರೂಪಾಯಿ ಹಣವನ್ನು ಗೂಗಲ್‌ ಪೇ ಮಾಡಿಸಿದ್ದಾಳೆ. ಆ ಮಹಿಳೆ ಇದು ಇಲ್ಲಿಗೆ ಮುಗಿಯಿತು ಎಂದುಕೊಂಡಿದ್ದಳು.

ಆದರೆ ಪ್ರಶಾಂತ ಮತ್ತೆ ಹಣಕ್ಕಾಗಿ ಬೇಡಿಕೆಯಿಟ್ಟಿದ್ದಾನೆ. ಈ ಬಾರಿ ಅವನು ಆಕೆಯ ಪತಿಯ ಬಳಿ ಏಳು ಲಕ್ಷ ರೂಪಾಯಿಗಳಿಗೆ ಡಿಮ್ಯಾಂಡ್‌ ಇಟ್ಟಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ. ಕೊನೆಗೆ ಮಹಿಳೆ ತನ್ನ ಕುಟುಂಬದೊಡನೆ ಚರ್ಚಿಸಿ ಇದಕ್ಕೊಂದು ಅಂತ್ಯ ಹಾಡಬೇಕೆಂದು ಪೊಲೀಸರಿಗೆ ಕಂಪ್ಲೇಂಟ್‌ ಕೊಟ್ಟಿದ್ದಾರೆ.

ಪ್ರಸ್ತುತ ಪೊಲೀಸರು ಪ್ರಶಾಂತ್‌ ಭಟ್‌ ಮಾಣಿಲ ವಿರುದ್ಧ ಕಾರವಾರದ ಪೊಲೀಸರು ಪ್ರಕರಣ ದಾಖಲಿಸಿದ್ದು, ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆರೋಪಿಯ ವಿರುದ್ಧ ಕಾರವಾರ ಮಹಿಳಾ ಪೋಲಿಸ್ ಠಾಣೆಯಲ್ಲಿ ಐಪಿಸಿ 376,376(N), 504,506,503,384 ಮತ್ತು IT Act 2008ರ 67(A) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ತಕ್ಷಣವೇ ಸಂತ್ರಸ್ತೆಯ ದೂರಿಗೆ ಸ್ಪಂದಿಸಿದ ಕಾರವಾರ ಪೊಲೀಸರು ಕಾರ್ಯಾಚರಣೆ ನಡೆಸಿ ಪ್ರಶಾಂತ್ ಭಟ್ ಮಾಣಿಲನನ್ನು ಬಂಧಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು