Saturday, June 21, 2025

ಸತ್ಯ | ನ್ಯಾಯ |ಧರ್ಮ

ಲೋಕ ಚುನಾವಣೆ | ಕಾಂಗ್ರೆಸ್ಸಿಗೆ ಹೆದರಿ ಮೈಸೂರು ಬಿಟ್ಟು ಮಂಗಳೂರಿಗೆ ಓಡಲಿದೆಯೇ ಸಿಂಹ?

ಮೈಸೂರು: ಲೋಕಸಭಾ ಚುನಾವಣೆಯ ಚಟುವಟಿಕೆಗಳು ಗರಿಗೆದರತೊಡಗಿದಂತೆ ಮೈಸೂರು ಕಡೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರುತ್ತಿದೆ.

ಈ ಬಾರಿಯ ವಿಧಾನಸಭಾ ಚುನಾವಣೆ ಸಮಯದಲ್ಲಿ ಮೈಸೂರು ಈ ಹಿಂದೆ ಎಂದೂ ಕಾಣದ ರೀತಿ ತೀವ್ರತೆಯನ್ನು ಕಂಡಿತ್ತು. ಮುಖ್ಯಮಂತ್ರಿ ಸಿದ್ಧರಾಮಯ್ಯನವರೆದುರು ನಿಂತಿದ್ದ ಸೋಮಣ್ಣನವರನ್ನು ಗೆಲ್ಲಿಸಿಕೊಳ್ಳಲೇಬೇಕಂದು ಸಂತೋಷಕೂಟ ಅದರಲ್ಲೂ ಸಂಸದ ಪ್ರತಾಪ್‌ ಸಿಂಹ ಬಹಳವಾಗಿ ಪ್ರಯತ್ನಿಸಿ ದೊಡ್ಡ ಮಟ್ಟದ ಮುಖಭಂಗವನ್ನೂ ಎದುರಿಸಿದ್ದರು.

ಆ ಚುನಾವಣೆಯಲ್ಲಿ ಸೋತು ಮನೆ ಸೇರಿರುವ ಸೋಮಣ್ಣ ತನ್ನ ಸೋಲಿ ಗಾಯಗಳನ್ನು ನೆಕ್ಕುತ್ತಾ ಆಗಾಗ ಬಿಜೆಪಿ ನಾಯಕರ ವಿರುದ್ಧ ಕೆರಳುತ್ತಲೇ ಇದ್ದಾರೆ.

ಆದರೆ ಈ ನಡುವೆ ಅಲ್ಲಿನ ಸಂಸದ ಪ್ರತಾಪ ಸಿಂಹ ಆಗಾಗ ಕಾಂಗ್ರೆಸ್ಸಿನವರ ನಾಲಗೆಯ ಅಡಕತ್ತರಿಗೆ ಸಿಲುಕಿ ಪೇಚಾಡುತ್ತಲೇ ಇದ್ದಾರೆ. ಜೊತೆಗೆ ಹತ್ತು ವರ್ಷಗಳ ನಿರಂತರ ಆಡಳಿದ ನಂತರವೂ ಜನರ ನಡುವೆ ಜನಪ್ರಿಯವಾಗಿ ಉಳಿದುಕೊಳ್ಳುವುದು ಅವರಿಗೆ ಕಷ್ಟವಾಗುತ್ತಿದೆ.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಪ್ರತಾಪ ಸಿಂಹ ಮಂಗಳೂರು ಕಡೆ ಮುಖ ಮಾಡಿದ್ದಾರೆನ್ನುವ ಮಾತುಗಳು ರಾಜಕೀಯ ಪಡಸಾಲೆಗಳಲ್ಲಿ ಕೇಳಿಬರತೊಡಗಿದೆ.

ಇದಕ್ಕೆ ಇಂಬು ಕೊಡುವಂತೆ ದಕ್ಷಿಣಕನ್ನಡದ ಸಂಸದ ನಳಿನ್‌ ಕುಮಾರ್‌ ಕಟೀಲು ಇಂದು ಯಾರಿಗೂ ಬೇಡವಾಗಿ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲಾಗದಂತಹ ಸ್ಥಿತಿಯನ್ನು ತಂದಿಟ್ಟುಕೊಂಡಿದ್ದಾರೆ.

ಪಕ್ಷದ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಕೊಲೆಯ ನಂತರವಂತೂ ಕಟೀಲ್‌ ವಿರದ್ಧ ಕುದಿವ ಕಾವಲಿಯಾಗಿದ್ದಾರೆ. ಪ್ರವೀಣ್‌ ಸಾವಿನ ಸಂದರ್ಭದಲ್ಲಿ ನಡೆದ ಘೇರಾವ್‌ನಿಂದ ಅವರು ತಪ್ಪಿಸಿಕೊಂಡು ಬಂದಿದ್ದೇ ಒಂದು ಸಾಹಸ. ಹೀಗಿರುವಾಗ ಅಲ್ಲಿಂದ ನಳಿನ್‌ ಸ್ಪರ್ಧಿಸಿದರೆ ಬಿಜೆಪಿಗೆ ಸೋಲು ಕಟ್ಟಿಟ್ಟ ಬುತ್ತಿ.

ಇನ್ನು ರಾಜ್ಯ ಬಿಜೆಪಿಯಂತೆಯೇ ಒಡೆದು ಚೂರಾಗಿರುವ ದಕ್ಷಿಣಕನ್ನಡ ಬಿಜೆಪಿಯಲ್ಲಿ ಅಲ್ಲಿನ ಯಾರಿಗೆ ಟಿಕೆಟ್‌ ಕೊಟ್ಟರೂ ಬೆಂಕಿ ಹೊತ್ತಿ ಉರಿಯುವುದು ಗ್ಯಾರಂಟಿ. ಬಿಜೆಪಿ ಬಂಡಾಯದ ಬೆಂಕಿ ಚೆಂಡು ಪುತ್ತಿಲ ಕೂಡಾ ಲೋಕಸಭಾ ಟಿಕೆಟ್‌ ಆಕಾಂಕ್ಷಿ ಎನ್ನಲಾಗುತ್ತಿದೆ. ಹೀಗಿರುವಾಗ ಯಾರಿಗೆ ಟಿಕೆಟ್‌ ಕೊಟ್ಟರೂ ಭಿನ್ನಮತವೆನ್ನುವುದು ಭುಗಿಲೆದ್ದು ಸುಡಲಿದೆ.

ಹೀಗಾಗಿಯೇ ತನ್ನ ಬರಹಗಳು ಮತ್ತು ಹಿಂದುತ್ವವಾದ ಹಾಗೂ ಸೋ ಕಾಲ್ಡ್‌ ಅಭಿವೃದ್ಧಿಯ ಮೂಲಕ ಕರಾವಳಿ ಜಿಲ್ಲೆಯಲ್ಲಿ ಸಾಕಷ್ಟು ಜನಪ್ರಿಯವಾಗಿರುವ ಪ್ರತಾಪ್‌ ಸಿಂಹರನ್ನು ಪಕ್ಷ ಕಣಕ್ಕಿಳಿಸಲು ಯೋಚಿಸುತ್ತಿದೆ ಎನ್ನಲಾಗುತ್ತಿದೆ.

ಇದರಿಂದ ಪಕ್ಷದ ತಳಮಟ್ಟದ ಕಾರ್ಯಕರ್ತರು ಒಟ್ಟಾಗಿ ಕೆಲಸ ಮಾಡಲಿದ್ದಾರೆನ್ನುವುದು ಪಕ್ಷದ ಲೆಕ್ಕಾಚಾರ. ಆದರೆ ಇದರಿಂದ ಅಧ್ಯಕ್ಷ ಸ್ಥಾನವನ್ನೂ ಕಳೆದುಕೊಳ್ಳಲಿರುವ ಕಟೀಲ್‌ ಸುಮ್ಮನಿರುತ್ತಾರೆಯೇ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ.

ಇತ್ತ ಮೈಸೂರು ಮತ್ತು ಕೊಡಗಿನ ಸಂಸತ್‌ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆಚ್ಚು ಕಾಂಗ್ರೆಸ್‌ ಶಾಸಕರೇ ಇರುವುದು ಪ್ರತಾಪ್‌ ಸಿಂಹರಿಗೆ ನುಂಗಲಾರದ ತುತ್ತಾಗಿದೆ. ಅಲ್ಲದೆ ಸಿದ್ಧರಾಮಯ್ಯನವರ ಅಭಿಮಾನಿಗಳು ವಿಧಾನಸಭಾ ಚುನಾವಣೆ ಸಮಯದ ಕಿಚ್ಚನ್ನು ಇನ್ನೂ ಮನಸ್ಸಿನಲ್ಲಿ ಇಟ್ಟುಕೊಂಡಿರುವುದರಿಂದಾಗಿ ಅವರೂ ತನ್ನ ವಿರುದ್ಧ ತೊಡೆ ತಟ್ಟುವುದು ಗ್ಯಾರಂಟಿ ಎನ್ನುವುದು ಸಿಂಹರನ್ನು ಕಾಡುತ್ತಿರುವ ಭಯ.

ಜೊತೆಗೆ ಯತೀಂದ್ರ ಸಿದ್ಧರಾಮಯ್ಯವರಿಗೆ ಈ ಬಾರಿ ಲೋಕಸಭೆಯ ಟಿಕೆಟ್‌ ಕೊಡಬೇಕೆನ್ನುವ ಆಗ್ರಹವೂ ಹೆಚ್ಚುತ್ತಿದ್ದು, ಒಂದು ವೇಳೆ ಅವರು ನಿಂತರೆ ಸ್ವತಃ ಮುಖ್ಯಮಂತ್ರಿಯೇ ಮುಂದೆ ನಿಂತು ತನ್ನ ಮಗನನ್ನು ಗೆಲ್ಲಿಸಿಕೊಳ್ಳಲು ಬರಬಹುದೆನ್ನುವ ಭಯವೂ ಹಾಲಿ ಸಂಸದರನ್ನು ಕಾಡುತ್ತಿದೆ ಎನ್ನಲಾಗುತ್ತಿದೆ. ಅದೂ ಸಾಲದೆ ಸಂತೋಷಕೂಟದ ವಿರುದ್ಧ ಲಿಂಗಾಯತರು ಈ ಬಾರಿ ಕಾಂಗ್ರೆಸ್ಸಿಗೆ ಮತ ಹಾಕುವ ಸಾಧ್ಯತೆ ಹೆಚ್ಚು ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಎಲ್ಲ ಪಕ್ಷದ ನಾಯಕರೊಡನೆಯೂ ಅಂತರಂಗದಲ್ಲಿ ಆಪ್ತವಾಗಿದ್ದುಕೊಂಡು ಬಹಿರಂಗದಲ್ಲಿ ವಿರೋಧಿಸಿ ಹೇಳಿಕೆಗಳನ್ನು ಕೊಡುತ್ತಿದ್ದ ಪ್ರತಾಪ್‌ ಸಿಂಹ ಈ ಬಾರಿ ಮೈಸೂರು ಬಹುತೇಕೆ ಖಚಿತವೆನ್ನುತ್ತಿವೆ ರಾಜಕೀಯ ಲೆಕ್ಕಾಚಾರಿಗಳ ಲೆಕ್ಕಗಳು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page