Friday, June 14, 2024

ಸತ್ಯ | ನ್ಯಾಯ |ಧರ್ಮ

ಪ್ರತಿಭಾ ನಂದಕುಮಾರ್ ಪೋಸ್ಟ್: ರೊಚ್ಚಿಗೆದ್ದ ಪತ್ರಕರ್ತರು, ಕಾನೂನು ಕ್ರಮದ ಎಚ್ಚರಿಕೆ

ಬೆಂಗಳೂರು: ನಾಡಿನ ಹಲವು ಪತ್ರಕರ್ತರ ಕುರಿತಾಗಿ ಲೋಕಾಯುಕ್ತರಿಗೆ ಸಲ್ಲಿಸಲಾಗಿದೆ ಎಂದು ಹೇಳಲಾದ ದೂರೊಂದನ್ನು ಪತ್ರಕರ್ತೆ, ಲೇಖಕಿ ಪ್ರತಿಭಾ ನಂದಕುಮಾರ್ ಅವರು ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದ್ದು, ಪೋಸ್ಟ್ ನಲ್ಲಿ ಉಲ್ಲೇಖಿಸಲಾದ ಹಲವು ಪತ್ರಕರ್ತರು ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ಪ್ರತಿಭಾ ನಂದಕುಮಾರ್‌ ಅವರು ದೀರ್ಘ ಪೋಸ್ಟ್‌ ಒಂದನ್ನು ವಾಟ್ಸಾಪ್ ನಲ್ಲಿ ಬಂದಿದ್ದು ಎಂದು ಉಲ್ಲೇಖಿಸಿ ಶೇರ್‌ ಮಾಡಿದ್ದರು. ಅದರಲ್ಲಿ ಕನ್ನಡದ ಹಲವು ಹಿರಿಯ ಪತ್ರಕರ್ತರು ಇದುವರೆಗೆ ಪಡೆದ ಭಕ್ಷೀಸು, ಭ್ರಷ್ಟಾಚಾರಗಳ ಕುರಿತು ಬರೆಯಲಾಗಿತ್ತು. ಹಕ್ಕಿಗೂಡು ಎಂಬ ಪತ್ರಿಕೆಯ ಸಂಪಾದಕ ನರೇಂದ್ರ ತೂದಳ್ಳಿ ಎನ್ನುವವರು ಲೋಕಾಯುಕ್ತ ಸಂಸ್ಥೆಗೆ ಪತ್ರಕರ್ತರ ಭ್ರಷ್ಟಾಚಾರದ ಕುರಿತು ನೀಡಲಾಗಿರುವ ದೂರಿನ ಪ್ರತಿ ಇದು ಎಂದು ಉಲ್ಲೇಖಿಸಲಾಗಿತ್ತು.

ದೂರಿನಲ್ಲಿ ಹಲವಾರು ಹಿರಿಯ ಪತ್ರಕರ್ತರುಗಳ ಹೆಸರಿದ್ದವು ಮಾತ್ರವಲ್ಲ ಗಂಭೀರ ಸ್ವರೂಪದ ಆರೋಪಗಳನ್ನೂ ಎಸಗಲಾಗಿತ್ತು.

ದೂರಿನ ಕೊನೆಯಲ್ಲಿ 1) ನಾನು ಎಲ್ಲಾ ಪತ್ರಕರ್ತರ ವಿಳಾಸ ಮತ್ತು ದೂರವಾಣಿ ಸಂಖ್ಯೆಯ ವಿವರಗಳನ್ನು ಪ್ರತ್ಯೇಕ ಅನುಬಂಧದಲ್ಲಿ ಒದಗಿಸಿದ್ದೇನೆ. (ಅನುಬಂಧ -1), 2) ಅನುಬಂಧ 2 ರಲ್ಲಿ ನನ್ನ ಅಫಿಡವಿಟ್ 3) ಕೆಲವು ಪತ್ರಕರ್ತರ ಸಂಪತ್ತಿನ ವಿವರಗಳು. (ಅನುಬಂಧ-3),” ಎಂದು ಹೇಳಲಾಗಿದೆಯಾದರೂ ಅಂತಹ ಯಾವುದೇ ದಾಖಲೆಗಳನ್ನು ಅಲ್ಲಿ (ಫೇಸ್‌ಬುಕ್‌ ಪೋಸ್ಟಿನಲ್ಲಿ) ಒದಗಿಸಲಾಗಿರಲಿಲ್ಲ. ಪೋಸ್ಟಿನಲ್ಲಿ ಹೇಳಲಾಗಿರುವ ದೂರಿನ ಸತ್ಯಾಸತ್ಯತೆಯ ಕುರಿತು ಇನ್ನಷ್ಟೇ ತಿಳಿದು ಬರಬೇಕಿದೆ. ನಿಜವಾಗಿಯೂ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆಯೇ? ಅಥವಾ ಪತ್ರಕರ್ತರ ತೇಜೋವಧೆಗೆ ಇಂಥದ್ದೊಂದು ಬರೆಹ ಪೋಸ್ಟ್ ಮಾಡಲಾಗಿದೆಯೇ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಪತ್ರಕರ್ತರು ಆದಾಯದ ಪ್ರಮಾಣವನ್ನು ಮೀರಿ ದೊಡ್ಡ ದೊಡ್ಡ ಮನೆ ಕಟ್ಟಿಕೊಂಡಿದ್ದಾರೆನ್ನುವುದರಿಂದ ಹಿಡಿದು, ಸೈಟು, ಹಣ, ವಿದೇಶ ಪ್ರವಾಸ, ಮಧ್ಯವರ್ತಿತನ ಹೀಗೆ ಹಲವು ಆರೋಪಗಳನ್ನು ಹೊರಿಸಲಾಗಿದೆ.

ಈ ಕುರಿತು ಹಿರಿಯ ಪತ್ರಕರ್ತ ಬಿ.ಎ.ಹನೀಫ್ ತಮ್ಮ ಫೇಸ್ ಬುಕ್ ನಲ್ಲಿ ಖಾರವಾಗಿ ಪ್ರತಿಕ್ರಿಯಿಸಿದ್ದು, ಪತ್ರಕರ್ತನಾಗಿ 38 ವರ್ಷಗಳ ಕಾಲ ಮಾನವಂತನಾಗಿ ಕೆಲಸ ಮಾಡಿದ್ದೇನೆ, ಭ್ರಷ್ಟಾಚಾರದ ಆರೋಪ ಹೊತ್ತುಕೊಳ್ಳುತ್ತಿರುವುದು ಇದೇ ಮೊದಲು. ನಿಮ್ಮ ಮತಿಗೇಡಿತನಕ್ಕೆ ಸುಮ್ಮನೆ ಕುಳಿತುಕೊಳ್ಳಬಹುದಿತ್ತು, ಆದರೆ ಸ್ನೇಹಿತರ ವಲಯದಲ್ಲಿ ತಪ್ಪು ಸಂದೇಶ ಹೋಗುತ್ತಿರುವುದರಿಂದ ಪ್ರತಿಕ್ರಿಯೆ ನೀಡುತ್ತಿದ್ದೇನೆ ಎಂದು ತಮ್ಮ ವೃತ್ತಿ ಜೀವನದ ಸಂದರ್ಭದ ಎಲ್ಲ ಆರ್ಥಿಕ‌ ವಿಷಯಗಳ ವಿವರಗಳನ್ನು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇನ್ನೋರ್ವ ಹಿರಿಯ ಪತ್ರಕರ್ತ ರುದ್ರಣ್ಣ ಹರ್ತಿಕೋಟೆ, ಭ್ರಷ್ಟಾಚಾರದ ವಿರುದ್ಧ ತನಿಖೆ ನಡೆಸಲು ರಚಿತವಾಗಿರುವ ಸಂಸ್ಥೆ ಲೋಕಾಯುಕ್ತ. ಇದಕ್ಕೆ ಯಾವುದೇ ಭಾರತೀಯ ಪ್ರಜೆ ದೂರು ನೀಡಬಹುದು. ಈ ದೂರನ್ನು ಆಧರಿಸಿ ಲೋಕಾಯುಕ್ತ ತನಿಖೆ ನಡೆಸುತ್ತದೆ. ಇಂತಹ ತನಿಖೆಗೆ ನಾನು ಸಿದ್ಧ. ಅದೇ ರೀತಿ ದೂರು ನೀಡಿದ ವ್ಯಕ್ತಿ ತಾನು ಮಾಡಿದ ಆರೋಪಗಳ ಬಗ್ಗೆ ಲೋಕಾಯುಕ್ತಕ್ಕೆ ಸಾಕ್ಷಿ ಒದಗಿಸಬೇಕಾಗುತ್ತದೆ. ಇದು ಲೋಕಾಯುಕ್ತ ಕಾಯಿದೆಯಲ್ಲಿ ಸ್ಪಷ್ಷವಾಗಿದೆ. ಪ್ರಚಾರ ಅಥವಾ ತೆವಲುಗಳುಗಾಗಿ ದೂರು ಸಲ್ಲಿಸಿ ಸುಮ್ಮನೆ ಕೂರುವಂತಿಲ್ಲ.ಲೋಕಾಯುಕ್ತದ ಮುಂದೆ ವಿವರ ನೀಡಬೇಕು ತಪ್ಪಿದಲ್ಲಿ ಸುಳ್ಳು, ಪ್ರಚಾರದ ಕಾರಣಕ್ಕೆ ದೂರು ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲಿಸಬಹುದು. ಅಲ್ಲದೆ ಸುಳ್ಳು ದೂರು ನೀಡಿದ ವ್ಯಕ್ತಿ ಯನ್ನು ಶಿಕ್ಷೆಗೆ ಒಳಪಡಿಸಬಹುದು ಎಂಬುದು ಕಾನೂನಿನಲ್ಲಿ ಸ್ಪಷ್ಟವಾಗಿದೆ. ಈ ಕಾರ್ಯ ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ.

ಮತ್ತೋರ್ವ ಹಿರಿಯ ಪತ್ರಕರ್ತ ಲಕ್ಷ್ಮಿನಾರಾಯಣ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ನಾನು ತನಿಖೆಗೆ ಸಿದ್ದ. ವೈಯಕ್ತಿಕ ತೇಜೋವಧೆ ಯಾರಿಗೂ ಶೋಭೆಯಲ್ಲ. ದಾಖಲೆ ಒದಗಿಸಲಿ. ಸುಮ್ಮನೆ ಮತ್ತೊಬ್ಬರ ಜೀವನ , ವೃತ್ತಿ ವಿಚಾರದಲ್ಲಿ ಹುಡುಗಾಟ ಸಲ್ಲ. ಆರೋಪ ಮಾಡುವುದು ಸುಲಭ ಅದರಿಂದ ಆಗುವ ಪರಿಣಾಮಗಳ ಬಗ್ಗೆ ಯೋಚಿಸಬೇಕು ಎಂದು ನುಡಿದಿದ್ದಾರೆ.

ಸತ್ಯಾಸತ್ಯತೆ ನೋಡದೆ ವ್ಯಕ್ತಿಗತ ದ್ವೇಷದಿಂದ ಕೆಸರು ಎರಚುವ ದುರುದ್ದೇಶ ಇದರ ಹಿಂದೆ ಇದೆ. ತನಿಖೆ ನಡೆಯಲಿ. ಹಾಗೆಯೇ ಲೋಕಾಯುಕ್ತಕ್ಕೆ ದೂರು ಕೊಟ್ಟು, ದೂರಿನ ಪ್ರತಿಯನ್ನು ಗ್ರೂಪ್ ಗಳಿಗೆ ಶೇರ್ ಮಾಡುತ್ತಿರುವ ಕಾರಣ ತೇಜೋವಧೆ ಅಲ್ಲದೆ ಇನ್ನೇನು ಅಲ್ಲ ಎಂದು ಹಿರಿಯ ಪತ್ರಕರ್ತ ಸಮಿಯುಲ್ಲಾ ಬೆಳಗೂರು ಹೇಳಿದ್ದಾರೆ.

ಇದು ಅಪಪ್ರಚಾರ. ಗಾಳಿಯಲ್ಲಿ ಗುಂಡು ಹಾರಿಸುವ ಯತ್ನ. ಇದರಲ್ಲಿ ಹುರುಳಿಲ್ಲ. ತನಿಖೆಗೆ ನಾನೂ ಸಿದ್ಧ ಎಂದು ಹಿರಿಯ ಪತ್ರಕರ್ತ ಆರ್.ಟಿ.ವಿಠ್ಠಲಮೂರ್ತಿ ಸವಾಲೊಡ್ಡಿದ್ದಾರೆ.

ಕೆಸರು ಎರಚುವುದು, ಮಸಿ ಬಳಿಯುವುದು ಮಾಮೂಲಿಯಾಗಿದೆ. ಒಮ್ಮೆ ಸಂಪೂರ್ಣವಾಗಿ ತನಿಖೆ ನಡೆಯಲಿ, ಮಾಧ್ಯಮ ಲೋಕದ ಕೊಳೆ ತೊಳೆಯಲಿ. ನಾನಂತೂ ತನಿಖೆಗೆ ಸದಾ ಸಿದ್ಧ ಎಂದು ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ.

ಕಳೆದ ವಾರ ಮುಖ್ಯಮಂತ್ರಿಗಳ ಕಚೇರಿಯಿಂದ ದೀಪಾವಳಿ ಉಡುಗೊರೆಯ ನೆಪದಲ್ಲಿ ಸಿಹಿತಿಂಡಿಯೊಂದಿಗೆ ಕೆಲವು ಆಯ್ದ ಪತ್ರಕರ್ತರಿಗೆ ಲಕ್ಷಗಟ್ಟಲೆ ಕ್ಯಾಶ್ ನೀಡಿದ ಪ್ರಕರಣದ ಕುರಿತು ಪೀಪಲ್ ಮೀಡಿಯಾ ಪ್ರಕಟಿಸಿತ್ತು. ಈ ಹಿನ್ನೆಲೆಯಲ್ಲಿ ಮಾಧ್ಯಮ ಭ್ರಷ್ಟಾಚಾರದ ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿತ್ತು. ಈ ಮಧ್ಯೆ ಯಾವುದೇ ಸಾಕ್ಷ್ಯಾಧಾರಗಳನ್ನು, ದಾಖಲೆಗಳನ್ನು ಒದಗಿಸದೆ ಪತ್ರಕರ್ತರ ಮೇಲೆ ಹಲವಾರು ಆರೋಪ ಹೊರೆಸಿದ ದೂರೊಂದು ಲೇಖಕಿ ಪ್ರತಿಭಾ ನಂದಕುಮಾರ್ ಅವರ ಫೇಸ್ ಬುಕ್ ಗೋಡೆಯಲ್ಲಿ ಕಾಣಿಸಿಕೊಂಡಿದೆ. ಈ ರೀತಿ ಗಾಳಿಯಲ್ಲಿ ಗುಂಡುಹೊಡೆಯುವುದರಿಂದ ನಿಜವಾಗಿಯೂ ಆಗಬೇಕಿದ್ದ ಚರ್ಚೆ ಹಿನ್ನೆಲೆಗೆ ಸರಿಯುತ್ತದೆ ಎಂಬುದು ಹಿರಿಯ ಪತ್ರಕರ್ತರ ಅಭಿಪ್ರಾಯವಾಗಿದೆ.

Related Articles

ಇತ್ತೀಚಿನ ಸುದ್ದಿಗಳು