ಭಾರತ ಪಾಕಿಸ್ತಾನ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆ ಎರಡೂ ದೇಶಗಳ ಡಿಜಿಎಂಒ ಮಟ್ಟದ ಅಧಿಕಾರಿಗಳ ಮಹತ್ವದ ಸಭೆ ಕರೆಯಲಾಗಿದೆ. ಇದರ ಜೊತೆಗೆ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ.
ಪಹಲ್ಗಾಮ್ ದಾಳಿಯ ನಂತರ ಪ್ರಧಾನಿ ನರೇಂದ್ರ ಮೋದಿ ಅಭಿಪ್ರಾಯದ ಬಗ್ಗೆ ಬಹಳ ನಿರೀಕ್ಷೆ ಇತ್ತು. ದೇಶದ ಬಗ್ಗೆ ಪ್ರಧಾನಿ ಅವರ ಅಭಿಪ್ರಾಯ ಏನು, ಪಾಕಿಸ್ತಾನದ ನಡೆಯ ವಿರುದ್ಧ ಅವರು ಯಾವ ಅಭಿಪ್ರಾಯ ಹೊಂದಿದ್ದಾರೆ, ಯುದ್ಧ ಘೋಷಣೆ ಸಂಬಂಧ ಸರ್ಕಾರದ ನಿಲುವುಗಳ ಬಗ್ಗೆ ಸ್ವತಃ ಪ್ರಧಾನಿಯವರ ಮಾತಿನ ಬಗ್ಗೆ ದೇಶವೇ ಜಾತಕ ಪಕ್ಷಿಯಂತೆ ಕಾದಿತ್ತು.
ಅಷ್ಟೇ ಅಲ್ಲದೆ ಆಪರೇಷನ್ ಸಿಂಧೂರ್ ನಂತರ ಕರೆದ ಸರ್ವಪಕ್ಷಗಳ ಸಭೆಯಲ್ಲೂ ಪ್ರಧಾನಿ ನರೇಂದ್ರ ಮೋದಿ ಗೈರು ಎದ್ದು ಕಂಡಿತ್ತು. ನರೇಂದ್ರ ಮೋದಿ ಈ ವಿಚಾರದಲ್ಲಿ ಯಾವ ನಿಲುವು ಹೊಂದಿದ್ದಾರೆ ಎಂಬ ಬಗ್ಗೆಯೂ ಚರ್ಚೆ ನಡೆದಿತ್ತು.
ಈ ಎಲ್ಲಾ ಕುತೂಹಲಗಳ ನಡುವೆ ಇಂದು ರಾತ್ರಿ 8 ಗಂಟೆಗೆ ಪ್ರಧಾನಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.