Home ಬೆಂಗಳೂರು ರಾಷ್ಟ್ರಗೀತೆ ನುಡಿಸುವಾಗ ಹೊರನಡೆದ ಯುಪಿ ಸ್ಪೀಕರ್ ಸತೀಶ್ ಮಹಾನಾ: ಬಿಜೆಪಿ, ಆರೆಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ...

ರಾಷ್ಟ್ರಗೀತೆ ನುಡಿಸುವಾಗ ಹೊರನಡೆದ ಯುಪಿ ಸ್ಪೀಕರ್ ಸತೀಶ್ ಮಹಾನಾ: ಬಿಜೆಪಿ, ಆರೆಸ್ಸೆಸ್ ವಿರುದ್ಧ ಪ್ರಿಯಾಂಕ್ ಖರ್ಗೆ ವಾಗ್ದಾಳಿ

0

ರಾಷ್ಟ್ರಗೀತೆ ಪ್ರಸಾರವಾಗುತ್ತಿದ್ದ ವೇಳೆ ಉತ್ತರ ಪ್ರದೇಶ ವಿಧಾನಸಭೆಯ ಸ್ಪೀಕರ್ ಹಾಗೂ ಬಿಜೆಪಿ ಶಾಸಕ ಸತೀಶ್ ಮಹಾನಾ ಅವರು ಎದ್ದು ಹೊರನಡೆದಿದ್ದಾರೆ ಎಂದು ಆರೋಪಿಸಿ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿರುವ ಪ್ರಿಯಾಂಕ್ ಖರ್ಗೆ, “ಹಾಗಾದರೆ ‘ಮೋಟಾ ಭಾಯ್’ ಅಮಿತ್ ಶಾ ಅವರು ಇವರನ್ನು ದೇಶದ್ರೋಹಿ ಎಂದು ಯಾವಾಗ ಘೋಷಿಸುತ್ತಾರೆ? ಸ್ವಘೋಷಿತ ನಾನ್-ಬಯೋಲಾಜಿಕಲ್ ನರೇಂದ್ರ ಮೋದಿ ಅವರು ದೇಶವನ್ನು ಗೌರವಿಸುವ ಬಗ್ಗೆ ಇವರಿಗೆ ಯಾವಾಗ ಉಪದೇಶ ನೀಡಲಿದ್ದಾರೆ? ‘ದೇಶಭಕ್ತ’ ಮೋಹನ್ ಭಾಗವತ್ ಅವರು ಇವರ ದೇಶಭಕ್ತಿಯ ಪ್ರಮಾಣಪತ್ರವನ್ನು ಯಾವಾಗ ರದ್ದುಗೊಳಿಸುತ್ತಾರೆ? ಮತ್ತು ಅರ್ನಾಬ್ ನೇತೃತ್ವದ ನಮ್ಮ ಪ್ರೈಮ್-ಟೈಮ್ ರಾಷ್ಟ್ರವಾದಿಗಳು ಇದರ ಬಗ್ಗೆ ಕೂಗಾಡುವ ಚರ್ಚೆಯನ್ನು ಯಾವಾಗ ನಡೆಸಲಿದ್ದಾರೆ?” ಎಂದು ಪ್ರಶ್ನಿಸಿದ್ದಾರೆ.

ಬಿಜೆಪಿ ಮತ್ತು ಆರೆಸ್ಸೆಸ್ ವ್ಯವಸ್ಥೆಗೆ ರಾಷ್ಟ್ರೀಯತೆ ಎಂಬುದು ಇತರರನ್ನು ಪ್ರಶ್ನಿಸಲು ಬಳಸುವ ಅಸ್ತ್ರ ಮಾತ್ರವೇ ಹೊರತು, ಆ ಮಾನದಂಡಗಳನ್ನು ಅವರು ಎಂದಿಗೂ ತಮಗೆ ಅನ್ವಯಿಸಿಕೊಳ್ಳುವುದಿಲ್ಲ ಎಂದು ಖರ್ಗೆ ಟೀಕಿಸಿದ್ದಾರೆ. ಇತಿಹಾಸದಲ್ಲಿ ಅವರು ಎಂದಿಗೂ ರಾಷ್ಟ್ರಧ್ವಜ, ರಾಷ್ಟ್ರಗೀತೆ, ರಾಷ್ಟ್ರಗಾನ ಅಥವಾ ಸಂವಿಧಾನವನ್ನು ಗೌರವಿಸಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version