ಆಗಾಗ ಅವರಿವರಿಂದ ಬುದ್ಧಿ ಮಾತು ಹೇಳಿಸಿಕೊಳ್ಳುತ್ತಲೇ ಇರುವ ಸಂಸದ ತೇಜಸ್ವಿ ಸೂರ್ಯ ನಿನ್ನೆ ಸಚಿವ ಪ್ರಿಯಾಂಕ್ ಖರ್ಗೆಯವರಿಂದ ಬುದ್ಧಿ ಮಾತು ಹೇಳಿಸಿಕೊಂಡಿದ್ದಾರೆ.
ಅಮಿತ್ ಮಾಳವೀಯ ವಿರುದ್ಧ ಕಾಂಗ್ರೆಸ್ ಪಕ್ಷ ಹೂಡಿದ್ದ ಕೇಸಿನಲ್ಲಿ ವಾದ ಮಾಡಿ ತನಿಖೆಗೆ ತಡೆ ತಂದ ಜೋಷಿನಲ್ಲಿ ತೇಜಸ್ವಿ ಸೂರ್ಯ ಪ್ರಿಯಾಂಕ್ ಖರ್ಗೆಯವರಿಗೆ ಟ್ಯಾಗ್ ಮಾಡಿ , “ಅಟ್ಲೀಸ್ಟ್ ಇನ್ನಾದರೂ ನಿಮ್ಮ ಸೇಡಿನ ರಾಜಕಾರಣವನ್ನು ನಿಲ್ಲಿಸಿ ಸಚಿವ ಸ್ಥಾನದ ಮೇಲೆ ಗಮನ ಹರಿಸಿ” ಎಂದು ಪ್ರಿಯಾಂಕ್ ಖರ್ಗೆಯವರಿಗೆ ಟ್ವೀಟ್ ಮಾಡಿದ್ದರು.
ನಂತರ ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು ಯುವ ಸಂಸದರಿಗೆ “ನೀವು ಮೊದ್ಲು ವಿಮಾನದಲ್ಲಿ ಸರಿಯಾಗಿ ಕೂರೋದನ್ನ ಕಲೀರಿ ಆಮೇಲೆ ನಂಗೆ ಬುದ್ಧಿ ಹೇಳಿ” ಎಂದು ಕಿಚಾಯಿಸಿದ್ದಾರೆ.
ಪ್ರಿಯಾಂಕ್ ಖರ್ಗೆಯವರ ಟ್ವೀಟ್ ಈ ರೀತಿಯಿತ್ತು:
“ಪ್ರೀತಿಯ ತೇಜಸ್ವಿ ಸೂರ್ಯ ಅವರೇ, ಕರ್ನಾಟಕ ಅಥವಾ ನನ್ನ ಖಾತೆಗಳ ಬಗ್ಗೆ ಚಿಂತಿಸಬೇಡಿ, ಅದು ಸುರಕ್ಷಿತ ಕೈಗಳಲ್ಲಿದೆ. ನೀವು ತಪ್ಪು ಮಾಹಿತಿ ಹರಡಿದರೆ ನಿಮ್ಮ ಸಹೋದ್ಯೋಗಿಗಳು ಮತ್ತು ನೀವು ದೇಶದ ಕಾನೂನನ್ನು ಎದುರಿಸಬೇಕಾಗುತ್ತದೆ. ಕಾಂಗ್ರೆಸ್ ಸರ್ಕಾರದ ‘ರಾಜಕೀಯ ಸೇಡಿನ ವಿರುದ್ಧ ನೆರವು ಪಡೆಯಲು ನಿಮ್ಮ ಸಹಾಯವಾಣಿಗೆ ಎಷ್ಟು ಜನರು ಕರೆ ಮಾಡಿದ್ದಾರೆ ಎಂಬುದನ್ನು ದಯವಿಟ್ಟು ರಾಜ್ಯಕ್ಕೆ ತಿಳಿಸುವಿರಾ?’ ಎಂದು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ನೀವು ರಾಜ್ಯಕ್ಕಾಗಿ ಮಾಡಬೇಕಾಗಿರುವ ಪ್ರಮುಖ ವಿಷಯಗಳೇನಂದರೆ, ನಮಗೆ (ಕರ್ನಾಟಕ) ನೀಡಬೇಕಾದ ಹಣವನ್ನು ಬಿಡುಗಡೆ ಮಾಡಲು ಕೇಂದ್ರ ಸರ್ಕಾರವನ್ನು ಕೇಳಿ, ಇಲ್ಲಿ ರಾಜ್ಯದಲ್ಲಿ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿ, ಮತ್ತು ಇನ್ನಾದರೂ ವಿಮಾನದಲ್ಲಿ ಸರಿಯಾಗಿ ಕುಳಿತುಕೊಳ್ಳಲು ಕಲಿಯಿರಿ” ಎಂದು ಕಾಲೆಳೆದಿದ್ದಾರೆ.
ಈ ಹಿಂದೆ ತಮಿಳುನಾಡಿನಲ್ಲಿ ವಿಮಾನವೊಂದರಲ್ಲಿ ತುರ್ತು ನಿರ್ಗಮನದ ಬಾಗಿಲು ತೆರೆದು ನಂತರ ಆ ಕುರಿತು ಕ್ಷಮೆ ಕೇಳಿ ತೇಜಸ್ವಿ ಸೂರ್ಯ ಸುದ್ದಿಯಾಗಿದ್ದರು. ಆ ಸಂದರ್ಭದಲ್ಲಿ ಮಾಜಿ ಐಪಿಎಸ್ ಮತ್ತು ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಕೂಡಾ ಅವರೊಂದಿಗಿದ್ದರು.