ಕರ್ನಾಟಕ ಸರ್ಕಾರದ ಐಟಿಬಿಟಿ ಸಚಿವರಾದ ಪ್ರಿಯಾಂಕ್ ಖರ್ಗೆಯವರ ಅಮೇರಿಕಾ ಪ್ರವಾಸ ನಿರ್ಬಂಧಿಸಿದ ನಂತರ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಬಿದ್ದ ಬೆನ್ನಲ್ಲೇ ನಿರ್ಬಂಧ ತೆರವುಗೊಳಿಸಿ ಆದೇಶ ಹೊರಡಿಸಿದೆ.
ರಾಜ್ಯಕ್ಕೆ ಆದಾಯ ತರುವ ಉದ್ದೇಶದಿಂದ ನಾವು ಅಮೇರಿಕಾ ಪ್ರವಾಸ ಹೊರಟಿದ್ದು, ಆಟ ಆಡಲು ಅಲ್ಲ ಎಂದು ಪ್ರಿಯಾಂಕ್ ಖರ್ಗೆ ಮಾಧ್ಯಮಗಳಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು. ಇದರ ಜೊತೆಗೆ ಅಮೇರಿಕಾ ಭೇಟಿ ರಾಜಕೀಯ ಅನುಮತಿ ನಿರಾಕರಿಸಿದ್ದಕ್ಕೆ ಖಾರವಾಗಿಯೇ ಈ ಬೆಳವಣಿಗೆಗೆ ಸ್ಪಷ್ಟನೆ ಕೋರಿ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಗೆ ಪತ್ರ ಬರೆದಿದ್ದರು.
ಇದು ರಾಜ್ಯದ ಹಿತಾಸಕ್ತಿಗಳಿಗೆ ವಿರುದ್ಧವಾಗಿದೆ. ಮಾತ್ರವಲ್ಲದೆ, ಸಹಕಾರಿ ಒಕ್ಕೂಟ ವ್ಯವಸ್ಥೆಯ ಚೈತನ್ಯವನ್ನು ಸಹ ಕಡೆಗಣಿಸುತ್ತದೆ. ಸಚಿವಾಲಯವು ಆದಷ್ಟು ಶೀಘ್ರವೇ ಸ್ಪಷ್ಟವಾದ ಲಿಖಿತ ಸ್ಪಷ್ಟೀಕರಣವನ್ನು ನೀಡುತ್ತದೆ ಎಂದು ನಾನು ಆಶಿಸುತ್ತೇನೆ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದೀಗ ಪ್ರವಾಸದ ನಿರ್ಬಂಧ ತೆರವು ಮಾಡಿ ಕೇಂದ್ರ ಸರ್ಕಾರ ಮರು ಅದೇಶ ಹೊರಡಿಸಿದೆ.
ನಾನು ಕರ್ತವ್ಯಬದ್ಧನಾಗಿರುವ ನನ್ನ ಕರ್ನಾಟಕದ ಜನತೆ ಕುರಿತಾದ ಹೊಣೆಗಾರಿಕೆಯ ಪ್ರಜ್ಞೆಯೊಂದಿಗೆ ಈ ನಡೆ ಅನುಸರಿಸಿದ್ದೇನೆ. ಈ ಭೇಟಿಯು ಸಹಯೋಗಗಳನ್ನು ಬಲಪಡಿಸುವುದು, ಹೂಡಿಕೆಗಳನ್ನು ಆಕರ್ಷಿಸುವುದು ಮತ್ತು ರಾಜ್ಯಕ್ಕೆ ಉದ್ಯೋಗಾವಕಾಶಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಿತ್ತು. ಕ್ಯಾಬಿನೆಟ್ ಮಂತ್ರಿ ಹಾಗೂ ವಿಶ್ವದ ಅತಿದೊಡ್ಡ ತಂತ್ರಜ್ಞಾನ ಸಮೂಹಗಳಲ್ಲಿ ಒಂದಾಗಿರುವ ರಾಜ್ಯದ ಸಚಿವರಿಗೆ, ಯಾವುದೇ ವಿವರಣೆಯಿಲ್ಲದೆ ತನ್ನ ಅಧಿಕೃತ ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ನಿರಾಕರಿಸುವುದು ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತದೆ ಎಂದು ಪ್ರಿಯಾಂಕ್ ಖರ್ಗೆ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು.