ದೆಹಲಿ ವಿಶ್ವವಿದ್ಯಾನಿಲಯದ ಮಾಜಿ ಪ್ರಾಧ್ಯಾಪಕ ಜಿಎನ್ ಸಾಯಿಬಾಬಾ ಅವರು ಇಂದು ನಾಗ್ಪುರ ಸೆಂಟ್ರಲ್ ಜೈಲಿನಿಂದ ಬಿಡುಗಡೆಯಾದರು. ಎರಡು ದಿನಗಳ ಹಿಂದೆ ಬಾಂಬೆ ಹೈಕೋರ್ಟ್ ಮಾವೋವಾದಿಗಳೊಂದಿಗೆ ಸಂಪರ್ಕ ಹೊಂದಿದ್ದ ಪ್ರಕರಣದಲ್ಲಿ ಅವರನ್ನು ಖುಲಾಸೆಗೊಳಿಸಿತ್ತು.
ಮಹಾರಾಷ್ಟ್ರ ಪೊಲೀಸರು 2014ರಲ್ಲಿ ಸಾಯಿಬಾಬಾ ಅವರನ್ನು ಬಂಧಿಸಿ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಚಾರ್ಜ್ ಶೀಟ್ ದಾಖಲಿಸಿದ್ದರು. 2017ರಲ್ಲಿ ಗಡ್ಚಿರೋಲಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಸಾಯಿಬಾಬಾ ಮತ್ತು ಇತರ ಐವರಿಗೆ ಜೀವಾವಧಿ ಶಿಕ್ಷೆ ವಿಧಿಸಿತು.
ನಂತರ ಸಾಯಿಬಾಬಾರವರು ದೆಹಲಿ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸವನ್ನೂ ಕಳೆದುಕೊಂಡರು. ಆದರೆ, ಸಾಯಿಬಾಬಾ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದರು. ಯುಎಪಿಎ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ನಿಯಮಗಳನ್ನು ಪಾಲಿಸದ ಕಾರಣ ಬಾಂಬೆ ಹೈಕೋರ್ಟ್ 2022ರಲ್ಲಿ ಸಾಯಿಬಾಬಾ ವಿರುದ್ಧದ ಪ್ರಕರಣವನ್ನು ವಜಾಗೊಳಿಸಿತ್ತು.
ನಂತರ ಮಹಾರಾಷ್ಟ್ರ ಸರ್ಕಾರ ಈ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್ಗೆ ಮೇಲ್ಮನವಿ ಸಲ್ಲಿಸಿತ್ತು. ಇದರಿಂದಾಗಿ ಸಾಯಿಬಾಬಾ ಬಿಡುಗಡೆಗೆ ತಡೆ ನೀಡಲಾಗಿತ್ತು. ಸಾಯಿಬಾಬಾರವರ ಪ್ರಕರಣವನ್ನು ಮರು ವಿಚಾರಣೆ ನಡೆಸುವಂತೆ ಬಾಂಬೆ ಹೈಕೋರ್ಟ್ಗೆ ಸೂಚಿಸಲಾಯಿತು. ತನಿಖೆ ನಡೆಸಿದ ಬಾಂಬೆ ಹೈಕೋರ್ಟ್ ಸಾಯಿಬಾಬಾ ಸೇರಿದಂತೆ ಎಲ್ಲ ಆರು ಮಂದಿಯ ಬಿಡುಗಡೆಗೆ ಆದೇಶ ನೀಡಿತ್ತು.