ಬೆಂಗಳೂರು: ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ನಡೆದ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯಕ್ರಮಕ್ಕೆ ಭಾಗವಹಿಸಿದ್ದಕ್ಕೆ 500 ರೂಪಾಯಿ ಕೊಡುವುದಾಗಿ ಭರವಸೆ ನೀಡಿ ಕೊಡದೇ ಯಾಮಾರಿಸಿದ್ದಕ್ಕೆ 40 ಕ್ಕೂ ಹೆಚ್ಚು ಕೂಲಿಕಾರರ ಗುಂಪು ಬಿಜೆಪಿ ನಾಯಕರ ಮೇಲೆ ಆರೋಪ ಮಾಡಿದೆ. ಆ ಮೂಲಕ ಒಂದು ದಿನದ ಕೂಲಿ ಲೆಕ್ಕದಂತೆ ಮೋದಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸುತ್ತಲಿನ ಜನಸಾಮಾನ್ಯರಿಗೆ ಹಣದ ಭರವಸೆ ಮೂಲಕ ಕರೆತರಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟದ 40 ಕ್ಕೂ ಹೆಚ್ಚು ಕೂಲಿಕಾರರ ಗುಂಪು ಬಿಜೆಪಿ ನಾಯಕರ ಮೇಲೆ ಶನಿವಾರ ಗಂಭೀರ ಆರೋಪ ಮಾಡಿದೆ. ಶಿಡ್ಲಘಟ್ಟದಲ್ಲಿ ಪ್ರತಿಭಟನೆ ನಡೆಸಿದ ಕೂಲಿ ಕಾರ್ಮಿಕರ ಗುಂಪು ಮಾಧ್ಯಮಗಳೊಂದಿಗೆ ಮಾತನಾಡಿ, ತಮ್ಮನ್ನು ಕರೆದೊಯ್ಯುವ ವ್ಯಕ್ತಿ ಒಂದು ದಿನದ ಸಂಪಾದನೆಯನ್ನು ನೀಡುವುದಾಗಿ ಹೇಳಿದ್ದರು. ಆದರೆ ಕಾರ್ಯಕ್ರಮ ಮುಗಿದ ನಂತರ ನಮ್ಮ ಸಂಪರ್ಕಕ್ಕೆ ಆ ವ್ಯಕ್ತಿ ಸಿಗುತ್ತಿಲ್ಲ. ಇತ್ತ ನಮಗೆ ಆ ದಿನದ ಕೆಲಸವೂ ಇಲ್ಲ, ಕೂಲಿ ಸಂಬಳದ ಭರವಸೆ ಕೂಡ ಈಡೇರಿಸಿಲ್ಲ ಎಂದು ಆರೋಪಿಸಿದರು.
“ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ ನಮಗೆ ಉಪಹಾರ ನೀಡಲಾಯಿತು ಆದರೆ ಮದ್ಯಾಹ್ನದ ಊಟ ಕೂಡ ನೀಡಿಲ್ಲ. ದಿನದ ಕೊನೆಯಲ್ಲಿ, ನಮ್ಮನ್ನು ಕರೆದೊಯ್ದ ವ್ಯಕ್ತಿ ನಮಗೆ ₹ 100 ನೀಡಲು ಬಂದಿದ್ದ. ಕೊಟ್ಟ ಭರವಸೆಯಂತೆ 500 ರೂಪಾಯಿ ಕೊಡಲು ಕೇಳಿದರೆ ನಮಗೆ ಅವಮಾನಿಸಿ ಕಳಿಸಿದ್ದಾನೆ ಎಂದು ಗುಂಪಿನ ಪ್ರಮುಖ ವ್ಯಕ್ತಿಯೊಬ್ಬರು ಮಾದ್ಯಮಗಳಿಗೆ ತಿಳಿಸಿದರು.
ಸಧ್ಯಕ್ಕೆ ಈ ಕೂಲಿ ಕಾರ್ಮಿಕರ ಗುಂಪು ಪೊಲೀಸರಿಗೆ ದೂರು ನೀಡಲು ಪ್ರಯತ್ನಿಸಿದೆ ಎಂದು ಮೂಲಗಳು ತಿಳಿಸಿವೆ. ಆದರೆ, ಅಂತಹ ಯಾವುದೇ ಗುಂಪು ದೂರು ನೀಡಿಲ್ಲ ಎಂದು ಶಿಡ್ಲಘಟ್ಟ ಪೊಲೀಸರು ಸ್ಪಷ್ಟಪಡಿಸಿದ್ದಾರೆ.