ಪುದುಚೇರಿಯಲ್ಲಿ ಸೌರವ್ ದಾಸ್ ಮನೆಗೆ ಪೊಲೀಸರು: ‘ಇದಕ್ಕೆಲ್ಲಾ ನಾವು ಹೆದರುವುದಿಲ್ಲ’ ಎಂದ ಸಿಜೆಪಿ ವಕ್ತಾರ

ಪುದುಚೇರಿ: ಕಾಕ್ರೋಚ್ ಜನತಾ ಪಾರ್ಟಿಯ (CJP) ರಾಷ್ಟ್ರೀಯ ವಕ್ತಾರ ಸೌರವ್ ದಾಸ್ ಅವರ ಪುದುಚೇರಿಯಲ್ಲಿರುವ ನಿವಾಸಕ್ಕೆ ಬುಧವಾರ ಪೊಲೀಸರು ಭೇಟಿ ನೀಡಿ ಅವರ ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಈ ಕುರಿತು ಎಕ್ಸ್ (X) ಪ್ಲಾಟ್‌ಫಾರ್ಮ್‌ನಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಸೌರವ್ ದಾಸ್, “ಇದು ನನ್ನನ್ನು ಮತ್ತು ನನ್ನ ಕುಟುಂಬವನ್ನು ಹೆದರಿಸಲು ಬಿಜೆಪಿ ಸರ್ಕಾರ ಮಾಡುತ್ತಿರುವ ಪ್ರಯತ್ನ. ಆದರೆ ಇಂತಹ ಹಪಾಹಪಿಗೆ ನಾನು ಬೆದರುವುದಿಲ್ಲ, ಬದಲಾಗಿ ನಮ್ಮ ಹೋರಾಟದ ನಿರ್ಧಾರ ಇನ್ನಷ್ಟು ಗಟ್ಟಿಯಾಗುತ್ತದೆ” ಎಂದು ಹೇಳಿದ್ದಾರೆ.

ಸೌರವ್ ದಾಸ್ ಪೋಸ್ಟ್‌ನಲ್ಲಿ ಏನಿದೆ?

“ಎರಡು ಗಂಟೆಗಳ ಹಿಂದೆ ಪೊಲೀಸರು ನನ್ನ ಮನೆಗೆ ಬಂದು ಕುಟುಂಬಸ್ಥರನ್ನು ವಿಚಾರಣೆ ನಡೆಸಿದ್ದಾರೆ. ಈ ತನಿಖೆಗೆ ಆದೇಶಿಸಿದ್ದು ಯಾರು ಮತ್ತು ಇದರ ಉದ್ದೇಶವೇನು? ಬಿಜೆಪಿಯ ಕೇಂದ್ರ ಸರ್ಕಾರದ ಸಮ್ಮತಿಯಿಂದಲೇ ನನ್ನ ಕುಟುಂಬವನ್ನು ಹೆದರಿಸುವ ಕೆಲಸವಾಗುತ್ತಿದೆ. ನನ್ನನ್ನು ಹೆದರಿಸಿ ಮೌನಗೊಳಿಸುವುದು ನಿಮ್ಮ ಉದ್ದೇಶವಾಗಿದ್ದರೆ, ಅದು ಎಂದಿಗೂ ನಡೆಯುವುದಿಲ್ಲ. ಪೊಲೀಸರು ಗೂಂಡಾಗಳಂತೆ ವರ್ತಿಸದೆ ಕಾನೂನನ್ನು ಗೌರವಿಸುವಂತಹ ಉತ್ತಮ ವ್ಯವಸ್ಥೆಯನ್ನು ನಿರ್ಮಿಸಲು ಈ ಘಟನೆ ನಮಗೆ ಮತ್ತಷ್ಟು ಬಲ ನೀಡುತ್ತದೆ,” ಎಂದು ಸೌರವ್ ಆಕ್ರೋಶ ಹೊರಹಾಕಿದ್ದಾರೆ.

ಇದು ‘ರೂಟೀನ್ ಸೆಕ್ಯೂರಿಟಿ ಚೆಕ್’ ಎಂದ ಪೊಲೀಸರು:

ಸೌರವ್ ದಾಸ್ ಅವರ ಆರೋಪಗಳನ್ನು ಪುದುಚೇರಿ ರಾಜ್ಯ ಪೊಲೀಸರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಈ ಕುರಿತು ಸ್ಪಷ್ಟನೆ ನೀಡಿರುವ ಕ್ರೈಂ ಮತ್ತು ಇಂಟೆಲಿಜೆನ್ಸ್ ವಿಭಾಗದ ಹಿರಿಯ ಅಧಿಕಾರಿ ನಿತ್ಯಾ ರಾಧಾಕೃಷ್ಣನ್, “ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಇದು ಸಾಮಾನ್ಯ ಭದ್ರತಾ ಪರಿಶೀಲನೆಯಾಗಿದೆ (Routine Security Check). ಯಾವುದೇ ನಿರ್ದಿಷ್ಟ ವ್ಯಕ್ತಿ ಅಥವಾ ಕುಟುಂಬವನ್ನು ಗುರಿಯಾಗಿಸಿಕೊಂಡು ನಾವು ಭೇಟಿ ನೀಡಿಲ್ಲ,” ಎಂದು ತಿಳಿಸಿದ್ದಾರೆ.

ಪುದುಚೇರಿಯ ವೈಟ್ ಟೌನ್ ಪ್ರದೇಶದಲ್ಲಿ ರಾಜ್ಯಪಾಲರ (ಎಲ್.ಜಿ) ನಿವಾಸವಿದ್ದು, ಅದೇ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪಥಸಂಚಲನದ ಪೂರ್ವಾಭ್ಯಾಸವೂ (Rehearsal) ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆ ರಸ್ತೆಯ ಪ್ರತಿಯೊಂದು ಮನೆಗಳಲ್ಲೂ ಸಾಮಾನ್ಯ ಪರಿಶೀಲನೆ ನಡೆಸಲಾಗಿದೆ. ಪೊಲೀಸರು ಸೌರವ್ ಅವರ ಮನೆಯ ಒಳಗೂ ಪ್ರವೇಶಿಸಿಲ್ಲ, ಕೇವಲ ಬಾಗಿಲ ಬಳಿ ನಿಂತು ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು