ರಾಜಸ್ತಾನದಿಂದ ಬೆಂಗಳೂರಿನ ಮೆಜೆಸ್ಟಿಕ್ ರೈಲ್ವೆ ಸ್ಟೇಷನ್ಗೆ ಬಂದಿದ್ದ ಮಾಂಸದ ಬಾಕ್ಸ್ಗಳಲ್ಲಿ ನಾಯಿ ಮಾಂಸ ಇದೆ ಆರೋಪಿಸಿ, ಗಲಾಟೆ ದಾಂಧಲೆ ಎಬ್ಬಿಸಿದ ಹಿನ್ನೆಲೆಯಲ್ಲಿ ಪುನೀತ್ ಕೆರೆಹಳ್ಳಿ ಎಂಬ ಪುಡಾರಿಯೊಬ್ಬನನ್ನು ಬೆಂಗಳೂರು ಪೊಲೀಸರು ಶುಕ್ರವಾರ ತಡರಾತ್ರಿ ಬಂಧಿಸಿದ್ದಾರೆ.
ಮಾಂಸದ ವ್ಯಾಪಾರಿ ಅಬ್ದುಲ್ ರಜಾಕ್ ಮತ್ತು ಅವರ ಸಹವರ್ತಿಗಳಿಗೆ ಸಂಬಂಧಿಸಿದ 90 ಮಾಂಸದ ಬಾಕ್ಸ್ ಗಳಲ್ಲಿ ನಾಯಿ ಮಾಂಸ ಇದೆ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿ ಗಲಾಟೆ ಎಬ್ಬಿಸಿದ್ದ. ಅಲ್ಲಿ ನಡೆದ ಮಾತಿನ ಚಕಮಕಿಯ ನಂತರ ರೈಲ್ವೆ ನಿಲ್ದಾಣಕ್ಕೆ ಬಂದಿದ್ದ ಒಟ್ಟು 90 ಥರ್ಮಾಕೋಲ್ ಬಾಕ್ಸ್ ಗಳು ಸೀಜ್ ಮಾಡಲಾಗಿದೆ. ಒಂದೊಂದರಲ್ಲಿ 30ರಿಂದ 40ಕೆಜಿ ಮಾಂಸ ತರಿಸಲಾಗಿತ್ತು ಎನ್ನಲಾಗಿದೆ. ಎಲ್ಲದರಲ್ಲೂ ಬೇರೆ ಬೇರೆ ಮಾಂಸವನ್ನು ಹಾಕಲಾಗಿದೆ. ಅದರಲ್ಲಿ ವಿಶೇಷವಾಗಿ ನಾಯಿ ಮಾಂಸ ಇದೆ ಎಂದು ಆರೋಪಿಸಲಾಗಿತ್ತು.
ಒಂದು ಬಾಕ್ಸ್ ನಲ್ಲಿ ತಲೆ, ಮತ್ತೊಂದು ಬಾಕ್ಸ್ ನಲ್ಲಿ ದೇಹ, ಒಂದೊಂದು ಬಾಕ್ಸ್ ನಲ್ಲಿ ಕಾಲು ಗಳು ಪತ್ತೆಯಾಗಿದೆ. ಎಲ್ಲದರ ಬಗ್ಗೆ ಮಾಹಿತಿ ಪಡೆದಿರುವ ಆಹಾರ ಇಲಾಖೆ, ಪೊಲೀಸರ ಭದ್ರತೆಯಯಲ್ಲಿ ಕೋಲ್ಡ್ ಸ್ಟೋರೇಜ್ ಗೆ ನಾಲ್ಕು ವಾಹನಗಳ ಮೂಲಕ ರವಾನೆ ಮಾಡಲಾಗಿದೆ. ಪೊಲೀಸರ ವಶದಲ್ಲಿದ್ದ ಮಾಂಸ ಸಾಗಾಟದ ನಾಲ್ಕು ವಾಹನಗಳನ್ನು ಮೆಜೆಸ್ಟಿಕ್ ನಿಂದ ಕೋಲ್ಡ್ ಸ್ಟೋರೇಜ್ ಗೆ ರವಾನೆ ಮಾಡಲಾಗಿದೆ.
ಬೇರೆ ರಾಜ್ಯದಿಂದ ಬೆಂಗಳೂರಿಗೆ ಮಾಂಸ ಸಾಗಾಟ ಪ್ರಕರಣದ ಸಂಬಂಧ ಕಾಟನ್ ಪೇಟೆ ಪೊಲೀಸರು ಬಿಎನ್ಎಸ್ 132 ಆ್ಯಕ್ಟ್ (ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ), 351 (2) ಅಡಿಯಲ್ಲಿ ಪುನೀತ್ ಕೆರೆಹಳ್ಳಿ ಬಂಧನ ಮಾಡಿದ್ದಾರೆ. ಅಷ್ಟೇ ಅಲ್ಲದೆ ಪುನೀತ್ ಕೆರೆಹಳ್ಳಿ ರೋಲ್ ಕಾಲ್ ಗೆ ಇಳಿದು ನಮ್ಮಿಂದ ಹಣ ಕೀಳುವ ಯೋಜನೆ ರೂಪಿಸಿದ್ಧ ಎಂದು ಮಾಂಸ ವ್ಯಾಪಾರಿ ಅಬ್ದುಲ್ ರಜಾಕ್ ದೂರಿದ್ದಾರೆ.
ಪುನೀತ್ ಕೆರೆಹಳ್ಳಿ ಈಗಾಗಲೇ ಹಲವು ಅಕ್ರಮ ಚಟುವಟಿಕೆಗಳ ಮೂಲಕವೇ ಸಮಾಜದಲ್ಲಿ ಅಪಖ್ಯಾತಿ ಪಡೆದಿದ್ದು, ಗಲಾಟೆ, ದೋಂಬಿ, ಕೊಲೆ ಬೆದರಿಕೆ, ಕೊಲೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸದವನಾಗಿದ್ದು ಹಲವು ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿವೆ. ‘ಪಿಂಪ್’ ಎನ್ನುವ ಮೂಲಕವೇ ಪುನೀತ್ ಕೆರೆಹಳ್ಳಿಯನ್ನು ಆರೋಪಿಸಿದ ಮಾಂಸ ವ್ಯಾಪಾರಿ ಅಬ್ದುಲ್ ರಜಾಕ್ ಇದೊಂದು ವ್ಯವಸ್ಥಿತ ಪಿತೂರಿ ಎಂದು ಆರೋಪಿಸಿದ್ದಾರೆ.
ಇನ್ನು ಪುನೀತ್ ಕೆರೆಹಳ್ಳಿ ಬಂಧನದ ನಂತರ ತೀವ್ರ ಅಸ್ವಸ್ಥಗೊಂಡವನಂತೆ ವರ್ತಿಸಿದ್ದು ತಕ್ಷಣವೇ ಆತನನ್ನು ಆಸ್ಪತ್ರೆಗೆ ವೀಲ್ ಚೇರ್ ಮೂಲಕ ರವಾನಿಸಲಾಗಿದೆ.