Home ರಾಜ್ಯ ಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿ: ಕನ್ನಡ ದಿನಪತ್ರಿಕೆಯೊಂದರ ವರದಿಗೆ ಆಹಾರ ಇಲಾಖೆ ಸ್ಪಷ್ಟನೆ

ಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿ: ಕನ್ನಡ ದಿನಪತ್ರಿಕೆಯೊಂದರ ವರದಿಗೆ ಆಹಾರ ಇಲಾಖೆ ಸ್ಪಷ್ಟನೆ

0

ಬೆಂಗಳೂರು: ಡಿಸೆಂಬರ್‌ 2, 2024 ರಂದು ಕನ್ನಡದ ದಿನಪತ್ರಿಕೆಯೊಂದರಲ್ಲಿ “ಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿ” ಎನ್ನುವ ಶೀರ್ಷಿಕೆಯ ಜೊತೆಗೆ ಸುದ್ದಿಯೊಂದು ಪ್ರಕಟವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯು ಸ್ಪಷ್ಟಿಕರಣವನ್ನು ನೀಡಿದೆ.

ಈ ಪತ್ರಿಕೆಯು ʼಅನ್ನಭಾಗ್ಯಕ್ಕೆ ಪಂಜಾಬ್ ಅಕ್ಕಿʼ ಎಂಬ ಶೀರ್ಷಿಕೆ ನೀಡಿ, ಎಂ.ಎಸ್.ಪಿ ದರಕ್ಕೆ ಹೋಲಿಸಿದರೆ ಮುಕ್ತ ಮಾರುಕಟ್ಟೆಯಲ್ಲಿ ಭತ್ತಕ್ಕೆ 300 ರಿಂದ 400 ರುಪಾಯಿ ಕಡಿಮೆ ಇದ್ದು, ಬೆಲೆ ಕುಸಿದಾಗ ಸರ್ಕಾರ ಮಧ್ಯಪ್ರವೇಶಿಸಿ ಬೆಲೆ ಸ್ಥಿರಗೊಳಿಸುವುದೇ ಎಂ.ಎಸ್.ಪಿ. ಯೋಜನೆಯ ಮುಖ್ಯ ಉದ್ದೇಶ ಎಂದು ಪ್ರಕಟಿಸಲಾಗಿತ್ತು.

“ಇದಕ್ಕೆ ಸಂಬಂಧಿಸಿದಂತೆ, ಕರ್ನಾಟಕ ರಾಜ್ಯವು ಡಿ.ಸಿ.ಪಿ. (De-Centralized procurement) ರಾಜ್ಯವಾಗಿದ್ದು, ಇದರಿಂದಾಗಿ ಕೇಂದ್ರ ಸರ್ಕಾರದ ಮಾರ್ಗಸೂಚಿಯನುಸಾರ ರಾಜ್ಯದ ರೈತರಿಂದ ಭತ್ತ, ರಾಗಿ ಮತ್ತು ಬಿಳಿಜೋಳ ಖರೀದಿಸಿ ಸಾರ್ವಜನಿಕ ವಿತರಣಾ ಪದ್ಧತಿಯಡಿ Central NFSA ಪಡಿತರ ಫಲಾನುಭವಿಗಳಿಗೆ ಮಾತ್ರ ಹಂಚಿಕೆ ಮಾಡಲು ಕ್ರಮವಹಿಸಬೇಕಾಗಿರುತ್ತದೆ. ಅದರಂತೆ 2024- 25ನೇ ಸಾಲಿನಲ್ಲಿ 2.24 ಲಕ್ಷ ಮೆಟ್ರಿಕ್‌ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರವು ಅನುಮತಿ ನೀಡಿದ್ದು, ರಾಜ್ಯ ಸರ್ಕಾರದಿಂದ ಇದಕ್ಕೆ ಸಂಬಂಧಿಸಿದಂತೆ ದಿನಾಂಕ 29-11-20248 ಆದೇಶವನ್ನು ಹೊರಡಿಸಲಾಗಿದ್ದು, ರೈತರ ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಎನ್.ಐ.ಸಿ. ಸಂಸ್ಥೆಗೆ ಅಗತ್ಯ ಸೂಚನೆ ನೀಡಲಾಗಿರುತ್ತದೆ.” ‌

“ಹಾಗೆಯೇ, ಕೇಂದ್ರ ಸರ್ಕಾರ ಅನುಮೋದಿತ ಖರೀದಿ ಅವಧಿ ಎಂದರೆ 01 ಜನವರಿ 2025 ರಿಂದ 31 ಮಾರ್ಚ್ 2025 ರವರಗೆ ಖರೀದಿಸಲು ಕ್ರಮವಹಿಸಲಾಗುತ್ತಿದೆ. ಭತ್ತ ಖರೀದಿಗೆ ಅಗತ್ಯವಿರುವ ಖರೀದಿ ಕೇಂದ್ರಗಳನ್ನು ಗುರುತಿಸಿ ಪ್ರಾರಂಭಿಸಲು ಈಗಾಗಲೇ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಜಿಲ್ಲಾಧಿಕಾರಗಳ ಅಧ್ಯಕ್ಷತೆಯಲ್ಲಿರುವ ಟಾಸ್ಕ್‌ ಫೋರ್ಸ್ ಸಮಿತಿಗಳಲ್ಲಿ ನಿರ್ಣಯಿಸಿ ಕ್ರಮವಹಿಸಲಾಗುತ್ತಿದೆ ಹಾಗೂ ವ್ಯಾಪಕ ಪ್ರಚಾರ ಕಾರ್ಯವನ್ನು ಸಹ ಜಿಲ್ಲಾ ಮಟ್ಟದಲ್ಲಿ ಕೈಗೊಳ್ಳಲಾಗಿದೆ. 2023-24ನೇ ಸಾಲಿನಲ್ಲಿ ಸಹ 2.24 ಲಕ್ಷ ಮೆಟ್ರಿಕ್ ಟನ್ ಭತ್ತ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿ, ಇದಕ್ಕಾಗಿ ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದರೂ ಕೂಡ ರೈತರಿಂದ ಭತ್ತ ಖರೀದಿಯಾಗಿರುವುದಿಲ್ಲ,” ಎಂದು ಇಲಾಖೆ ಸ್ಪಷ್ಟಿಕರಣವನ್ನು ನೀಡಿದೆ.

ಡಿ.ಸಿ.ಪಿ. ರಾಜ್ಯವು ಭತ್ತವನ್ನು ಖರೀದಿಸಿದಾಗ ಅದರಿಂದ ಪಡೆಯುವ ಭತ್ತ ಪರಿವರ್ತಿತ ಅಕ್ಕಿ ಪ್ರಮಾಣವನ್ನು ಕೇವಲ Central NFSA ಪಡಿತರ ಫಲಾನುಭವಿಗಳಿಗೆ ಮಾತ್ರ ಹಂಚಿಕೆ ಮಾಡಲು ಅವಕಾಶವಿರುತ್ತದೆ. ರಾಜ್ಯ NFSA ಪಡಿತರ ಫಲಾನುಭವಿಗಳಿಗೆ ಕೇಂದ್ರ NFSA ಫಲಾನುಭವಿಗಳಿಗೆ ನೀಡಿದಂತೆಯೇ ಪ್ರತಿ ತಿಂಗಳು ಪ್ರತಿ ಪಿಹೆಚ್.ಹೆಚ್ ಸದಸ್ಯರಿಗೆ 5 ಕೆ.ಜಿ. ಆಹಾರಧಾನ್ಯವನ್ನು ನೀಡುತ್ತಿದ್ದು, ಇದಕ್ಕಾಗಿ ಭಾರತೀಯ ಆಹಾರ ನಿಗಮದಿಂದ ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ (Open Market Sale Scheme- OMSS) ಅಕ್ಕಿಯನ್ನು ಖರೀದಿಸಲಾಗುತ್ತಿದೆ. ಪ್ರತಿ ಕ್ವಿಂಟಲ್ ಗೆ 2800 ರುಪಾಯಿ ಎಂದು ನಿಗಧಿಪಡಿಸಿ Excluding Transportation ಎಂದು ತಿಳಿಸಲಾಗಿರುತ್ತದೆ. ಇದರಿಂದಾಗಿ, ಜಿಲ್ಲೆಗಳಲ್ಲಿನ ಭಾರತೀಯ ಆಹಾರ ನಿಗಮದ ಗೋದಾಮುಗಳಲ್ಲಿ ಯಾವ ರಾಜ್ಯದ ಅಕ್ಕಿಯ ಲಾಟ್ ಲಭ್ಯವಿರುತ್ತದೆಯೋ ಅದರನ್ವಯ ನಿಗದಿತ ಬೆಲೆ 2800 ರುಪಾಯಿಯೊಂದಿಗೆ ಸಾಗಾಟ ದರವನ್ನು ಸೇರಿಸಿ ದರಗಳನ್ನು ನಿಗಧಿಪಡಿಸಲಾಗಿರುತ್ತದೆ.

“ಇದರಿಂದಾಗಿ ರಾಜ್ಯ ಸರ್ಕಾರದಿಂದ ಯಾವುದೇ ಇತರೇ ರಾಜ್ಯಗಳಿಂದ ನೇರವಾಗಿ ಅಕ್ಕಿಯನ್ನು ಖರೀದಿಸದೇ, ಕೇಂದ್ರ ಸರ್ಕಾರದ ಯೋಜನೆಯಾದ OMSS ರಡಿ ಭಾರತ ಆಹಾರ ನಿಗಮದಿಂದ ಖರೀದಿಸಲಾಗುತ್ತಿದೆ. ರಾಜ್ಯವು ಕೇಂದ್ರ ಸರ್ಕಾರದ FCI ನಿಂದ ಖರೀದಿ ಮಾಡಿದ ಅಕ್ಕಿಯ ಮೂಲ ತಿಳಿದಿರುವುದಿಲ್ಲ. FCI ಗೋದಾಮಿನಿಂದ ಖರೀದಿಸಿದ ಅಕ್ಕಿಯನ್ನು ನಮ್ಮ ರಾಜ್ಯದ ಸಗಟು ಮಳಿಗೆಗಳಿಗೆ ಕೊಂಡೊಯ್ದು, ಅಲ್ಲಿಂದ ಸಾರ್ವಜನಿಕ ಪಡಿತರ ವ್ಯವಸ್ಥೆ ಮೂಲಕ ಜನರಿಗೆ ಹಂಚಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಈ ಪತ್ರಿಕೆಯಲ್ಲಿ ವರದಿಯಾಗಿರುವಂತೆ ಆಹಾರ ಭದ್ರತೆ ಯೋಜನೆಯಡಿ ರಾಜ್ಯದ ಅನ್ನಭಾಗ್ಯ ಫಲಾನುಭವಿಗಳಿಗೆ ಪಂಜಾಬ್, ಹರಿಯಾಣ, ಒಡಿಶಾ, ಉತ್ತರವದೇಶ ಇತ್ಯಾದಿ ಅಕ್ಕಿ ಭಾಗ್ಯ ಲಭಿಸುತ್ತಿದೆ ಎಂದು ಪ್ರಕಟಿಸಿರುವುದು ಸತ್ಯಕ್ಕೆ ದೂರವಾದ ವಿಷಯವಾಗಿರುತ್ತದೆ,” ಎಂದು ಆಹಾರ ಇಲಾಖೆ ಸ್ಪಷ್ಟನೆ ನೀಡಿದೆ.

You cannot copy content of this page

Exit mobile version