Monday, June 17, 2024

ಸತ್ಯ | ನ್ಯಾಯ |ಧರ್ಮ

ವಿರೋಧ ಪಕ್ಷಗಳ ನಾಯಕರ ಐಫೋನ್‌ ಹ್ಯಾಕ್!:‌ ಆಪ್‌ ನಾಯಕ ರಾಘವ್‌ ಛಡ್ಡಾ ಹೇಳಿದ್ದೇನು?

ಬೆಂಗಳೂರು,ಅಕ್ಟೋಬರ್.‌31: ಆಪಲ್ ಕಂಪನಿ ಭಾರತದ ವಿರೋಧ ಪಕ್ಷಗಳ ನಾಯಕರನ್ನು ಹಾಗೂ ಕೆಲವು ಪತ್ರಕರ್ತರನ್ನು ಗುರಿಯಾಗಿಸಿ, ಅವರ  ಐಫೋನ್‌ಗಳನ್ನು ಹ್ಯಾಕ್‌ ಮಾಡುವ ಸಾಧ್ಯತೆಯ ಎಚ್ಚರಿಕೆಯ ಸಂದೇಶವೊಂದನ್ನು ಕಳಿಸಿದೆ. ಇದು ʼಸರ್ಕಾರಿ ಪ್ರಾಯೋಜಿತ ದಾಳಿಕೋರರʼ ಕೃತ್ಯ ಎಂದು ಆರೋಪಿಸಿದ್ದು, ಈ ಬಗ್ಗೆ ಅನೇಕ ನಾಯಕರು ಕೇಂದ್ರ ಸರ್ಕಾರದ ಮೇಲೆ ಆರೋಪವನ್ನು ಹೊರಿಸಿದ್ದಾರೆ.

ತಮಗೆ ಬಂದ ಆಪಲ್‌ ನೋಟಿಫಿಕೇಷನ್‌ ಬಗ್ಗೆ ತಮ್ಮ X ನಲ್ಲಿ ಬರೆದುಕೊಂಡಿರುವ ಆಮ್‌ ಆದ್ಮಿ ಪಾರ್ಟಿಯ ನಾಯಕ ರಾಘವ್‌ ಛಡ್ಡಾ: “ಇಂದು ಮುಂಜಾನೆ ನಂಗೆ ಆಪಲ್‌ನಿಂದ ಮೆಸೆಜ್‌ ಬಂತು. ನನ್ನ ಫೋನ್‌ನಲ್ಲಿ ಸಂಭಾವ್ಯ ಸರ್ಕಾರಿ-ಪ್ರಾಯೋಜಿತ ಸ್ಪೈವೇರ್ ದಾಳಿಯ ಕುರಿತು ನನಗೆ ಎಚ್ಚರಿಕೆ‌ ಅದು ನೀಡಿದೆ. “ನಿಮ್ಮ ಡಿವೈಸ್ ಸರ್ಕಾರಿ ಪ್ರಾಯೋಜಿತ ದಾಳಿಕೋರರ ಜೊತೆಗೆ ರಾಜಿ ಮಾಡಿಕೊಂಡರೆ, ಅವರು ನಿಮ್ಮ ಸೂಕ್ಷ್ಮ ಡೇಟಾ, ಸಂವಹನಗಳು ಅಥವಾ ಕ್ಯಾಮರಾ ಮತ್ತು ಮೈಕ್ರೊಫೋನ್ ಮೇಲೆ ದೂರದಿಂದಲೇ ಹಿಡಿತ ಸಾಧಿಸಲು ಸಾಧ್ಯವಾಗುತ್ತದೆ” ಎಂದು ಆ ಮೆಸೆಜ್‌ನಲ್ಲಿ ಹೇಳಲಾಗಿದೆ.”

“ನನ್ನ ಸಂಸದೀಯ ಕರ್ತವ್ಯಗಳನ್ನು ನಿರ್ವಹಿಸಲು,  ನನ್ನ ಕ್ಷೇತ್ರದ ಜನರೊಂದಿಗೆ ತೊಡಗಿಸಿಕೊಳ್ಳಲು, ಮನವಿಗಳನ್ನು ಸ್ವೀಕರಿಸಲು ಮತ್ತು ನೆರವಾಗಲು ನಾನು ನನ್ನ ಸ್ಮಾರ್ಟ್‌ಫೋನ್ ಅನ್ನು ಬಳಸುತ್ತೇನೆ. ಕೇಂದ್ರ ಸರ್ಕಾರದ ಸರ್ವಾಧಿಕಾರಿ ಧೋರಣೆಗಳನ್ನು ಪ್ರಶ್ನಿಸಲು ನಾನು ಅದನ್ನು ಬಳಸುತ್ತೇನೆ. ಇದು ನನ್ನ ಪಕ್ಷದ ಸಹೋದ್ಯೋಗಿಗಳು, ಕಾರ್ಯಕರ್ತರು ಮತ್ತು ಚುನಾವಣಾ ಸ್ವಯಂಸೇವಕರೊಂದಿಗೆ ಮಾತುಕತೆ ನಡೆಸಲು ನಾನು ಬಳಸುವ ಸಾಧನ. ನನ್ನ ಮಿಡಿಯಾ ಅಪಿಯರೆನ್ಸ್‌ ಸಂಯೋಜಿಸಲು ನಾನು ಸ್ಮಾರ್ಟ್‌ಫೋನ್‌ ಬಳಸುತ್ತೇನೆ. ಇದು ನನ್ನ ಮೇಲೆ ನಡೆಯುತ್ತಿರುವ ಹಲವಾರು ದಾವೆಗಳ ಬಗ್ಗೆ ವಕೀಲರೊಂದಿಗೆ ಕಾನೂನು ಕಾರ್ಯತಂತ್ರಗಳನ್ನು ಚರ್ಚಿಸಲು ಬಳಸುವ ಸಾಧನವಾಗಿದೆ.”

ಇದನ್ನೂ ಓದಿ: ಪೆಗಾಸಸ್‌ ಮಾದರಿಯಲ್ಲಿ ವಿರೋಧ ಪಕ್ಷದ ನಾಯಕರ ಫೋನ್‌ಗಳ ಮೇಲೆ ಕೇಂದ್ರದ ಕಣ್ಗಾವಲು?: ಆಪಲ್‌ ಎಚ್ಚರಿಕೆ

“ಹಾಗಾಗಿ, ಇದು ನನ್ನ ಸ್ಮಾರ್ಟ್‌ಫೋನ್ ಮೇಲೆ ಮಾತ್ರವಲ್ಲ, ನಮ್ಮ ದೇಶದ ಪ್ರಜಾಸತ್ತಾತ್ಮಕ ಹಿತಾಸಕ್ತಿಗಳ ಮೇಲೂ ನಡೆಸಿದ ದಾಳಿಯಾಗಿದೆ. ಈ ನೋಟಿಫಿಕೇಷನ್ ಬಿಜೆಪಿಯನ್ನು ಟೀಕಿಸುವ ಅನೇಕ ಧ್ವನಿಗಳನ್ನು ಗುರಿಯಾಗಿಸಿ ನಡೆಸಿದ ಪೆಗಾಸಸ್ ಸ್ಪೈವೇರ್ ಹಗರಣವನ್ನು ನೆನಪಿಸುತ್ತದೆ. ಈ ದಾಳಿಯಲ್ಲೂ ನಾನೊಬ್ಬನೇ ವಿರೋಧ ಪಕ್ಷದ ನಾಯಕನಾಗಿರಲಿಲ್ಲ, ಪ್ರತಿಪಕ್ಷಗಳ ಬಹು ದನಿಗಳು ಗುರಿಯಾಗಿದ್ದವು.”

“ಸಾರ್ವತ್ರಿಕ ಚುನಾವಣೆಗೆ ಕೇವಲ ತಿಂಗಳುಗಳಿರುವಾಗ ಈ ಸ್ನೂಪಿಂಗ್ ನಡೆಯುತ್ತಿದೆ. ತನಿಖಾ ಸಂಸ್ಥೆಗಳು, ರಾಜಕೀಯ ಪ್ರೇರಿತ ಕ್ರಿಮಿನಲ್ ಪ್ರಕರಣಗಳು ಮತ್ತು ಸೆರೆವಾಸದಿಂದ ಪಟ್ಟುಬಿಡದ ದಬ್ಬಾಳಿಕೆಯನ್ನು ಎದುರಿಸುತ್ತಿರುವ ಪ್ರತಿಪಕ್ಷಗಳ ಮೇಲಿನ ವ್ಯಾಪಕ ದಾಳಿಯೊಳಗೆ ಇದನ್ನು ಇರಿಸಿ ನೋಡಬೇಕು.”

“ಈ ದಾಳಿಗಳು ಒಬ್ಬ ವ್ಯಕ್ತಿಯಾಗಿ ಅಥವಾ ಒಂದು ವಿರೋಧ ಪಕ್ಷವಾಗಿ ನನ್ನ ಮೇಲೆ ಮಾತ್ರವಲ್ಲ, ಭಾರತದ ಸಾಮಾನ್ಯ ಜನರ ಮೇಲೆ ನಡೆದ ದಾಳಿ. ಇದು ನನ್ನ ಫೋನ್ ಅಥವಾ ನನ್ನ ಡೇಟಾಗೆ ಮಾತ್ರ ಸಂಬಂಧಿಸಿದ್ದಲ್ಲ, ಪ್ರತಿಯೊಬ್ಬ ಭಾರತೀಯನೂ ಚಿಂತಿಸಬೇಕಾದ ವಿಚಾರ. ಏಕೆಂದರೆ ಇಂದು  ನನಗೆ ಆಗಿದ್ದು, ನಾಳೆ ನಿಮಗೂ ಆಗಬಹುದು.”

Related Articles

ಇತ್ತೀಚಿನ ಸುದ್ದಿಗಳು