ಹೊಸದಿಲ್ಲಿ: ಸದನದಲ್ಲಿ ತಮ್ಮ ವಿರುದ್ಧ ನೀಡಲಾದ ಅವಹೇಳನಕಾರಿ ಹೇಳಿಕೆಗಳನ್ನು ತೆಗೆದುಹಾಕುವಂತೆ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸ್ಪೀಕರ್ ಒಂಬಿರ್ಲಾ ಅವರಿಗೆ ಕೋರಿದ್ದಾರೆ. ಅವರು ಬುಧವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದರು.
ಈ ಸಂದರ್ಭದಲ್ಲಿ ಸಂಸತ್ತಿನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ರಾಹುಲ್ ಗಾಂಧಿ ‘ನಾನು ಸ್ಪೀಕರ್ ಓಂ ಬಿರ್ಲಾ ಅವರನ್ನು ಭೇಟಿ ಮಾಡಿದ್ದೆ. ಸದನದಲ್ಲಿ ನನ್ನ ವಿರುದ್ಧ ನೀಡಲಾಗಿರುವ ಅವಹೇಳನಕಾರಿ ಹೇಳಿಕೆಗಳನ್ನು ತೆಗೆದುಹಾಕುವಂತೆ ನಾನು ಅವರಲ್ಲಿ ಮನವಿ ಮಾಡಿದೆ. ಸ್ಪೀಕರ್ ಈ ಮನವಿಯನ್ನು ಪರಿಗಣಿಸುತ್ತಾರೆ ಎಂಬ ಅಭಿಪ್ರಾಯ ನನ್ನದು. ಸುಗಮ ಸಭೆ ಮತ್ತು ಚರ್ಚೆ ನಡೆಸುವುದು ನಮ್ಮ ಉದ್ದೇಶ. ನನ್ನ ಬಗ್ಗೆ ಏನೇ ಹೇಳಿದರೂ ಡಿಸೆಂಬರ್ 13ರಂದು ಸದನದಲ್ಲಿ ಚರ್ಚಿಸಲು ಬಯಸುತ್ತೇವೆ. ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧದ ಆರೋಪಗಳ ಬಗ್ಗೆ ಬಿಜೆಪಿ ಸದನದಲ್ಲಿ ಚರ್ಚೆ ಬಯಸುವುದಿಲ್ಲ. ಈ ವಿಷಯದಲ್ಲಿ ನಾವು ಬಿಡುವುದಿಲ್ಲ. ನಮ್ಮ ಮೇಲೆ ಆರೋಪ ಮಾಡುತ್ತಲೇ ಇರುತ್ತಾರೆ. ಆದರೆ ಸಂಸತ್ ಸಭೆ ನಡೆಯಲಿದೆ’ ಎಂದರು.
ಇದೇ ವೇಳೆ ಲೋಕಸಭೆಯಲ್ಲಿ ಬಿಜೆಪಿ ಸಂಸದರು ರಾಹುಲ್ ಗಾಂಧಿ ವಿರುದ್ಧ ಟೀಕೆ ಮಾಡುತ್ತಲೇ ಇದ್ದಾರೆ. ಇತ್ತೀಚೆಗೆ ಲೋಕಸಭೆಯಲ್ಲಿ ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವರು ‘ಕಾಂಗ್ರೆಸ್ ಕಾ ಹಾತ್, ಸೊರೊಸ್ ಕೆ ಸಾಥ್’ ಎಂದು ಪ್ರತಿಕ್ರಿಯಿಸಿದ್ದರು. ಬಿಜೆಪಿ ಸಂಸದ ಸಂಬಿತ್ ರಾಹುಲ್ ಗಾಂಧಿ ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ.