Friday, June 14, 2024

ಸತ್ಯ | ನ್ಯಾಯ |ಧರ್ಮ

ರಾಹುಲ್ ಗಾಂಧಿ ವಿಚಾರಣೆ-ಅಮಿತ್‌ ಶಾ ವಕೀಲರಾಗಿದ್ದ ನ್ಯಾಯಾಧೀಶರು!

ಮೋದಿ ಉಪನಾಮೆ ಹೇಳಿಕೆಗೆ ಸಂಬಂಧಿಸಿ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ರಾಹುಲ್‌ ಗಾಂಧಿ  ಸಲ್ಲಿಸಿದ ಅರ್ಜಿಯನ್ನು ಸೂರತ್‌ನ ಸೆಷನ್ಸ್‌ ನ್ಯಾಯಾಲಯವು ಇಂದು (ಎಪ್ರಿಲ್ 20) ತಿರಸ್ಕರಿಸಿದೆ. ಒಂದು ರೀತಿಯಲ್ಲಿ ಇದು ನಿರೀಕ್ಷಿತ ತೀರ್ಪೇ ಆಗಿದೆ. ಈ ಹಿನ್ನೆಲೆಯಲ್ಲಿ, ಈ ಪ್ರಕರಣದಲ್ಲಿ ನ್ಯಾಯಾಧೀಶರು ಹಾಗೂ ಅಮಿತ್‌ ಶಾ ಅವರಿಗೆ ಇರುವ ನಂಟಿನ ಕುರಿತು ʼದಿ ವೈರ್‌ʼ ಗೆ ಬರೆದ ಲೇಖನ ತುಂಬಾ ಮಹತ್ವದ್ದಾಗಿದ್ದು, ಅದನ್ನು ಸಂಜಯ್‌ ಅನುವಾದಿಸಿದ್ದಾರೆ.  

ಮೋದಿ ಉಪನಾಮೆ ಉಲ್ಲೇಖಿಸಿ ರಾಹುಲ್ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಮಾನಹಾನಿ ಪ್ರಕರಣದ ಮೇಲ್ಮನವಿಯನ್ನು ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರಾದ ರಾಬಿನ್ ಪಾಲ್ ಮೊಗೆರಾ ಅವರು ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಮೇಲಿದ್ದ 2006ರ ತುಳಸಿರಾಮ್ ಪ್ರಜಾಪತಿ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಶಾ ಅವರಿಗೆ ವಕೀಲರಾಗಿದ್ದವರು.

ರಾಹುಲ್ ಅವರು, 2019ರ ಮಾನಹಾನಿ ಪ್ರಕರಣದಲ್ಲಿ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿರುವ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದಾರೆ. ಬಾರ್ ಅಂಡ್ ಬೆಂಚ್ ಪ್ರಕಾರ ರಾಹುಲ್ ಗಾಂಧಿ ಅವರು ಶಿಕ್ಷೆಗೆ ತಡೆಯಾಜ್ಞೆ ನೀಡಬೇಕು ಎಂದು ಕೋರಿ ಸಲ್ಲಿಸಿದ ಅರ್ಜಿಯನ್ನು ನ್ಯಾಯಾಧೀಶ ಮೊಗೆರಾ ಅವರು ಏಪ್ರಿಲ್ 13 ರ ಮಂಗಳವಾರ ವಿಚಾರಣೆ ನಡೆಸಿದರು.

ಆರ್.ಪಿ.ಮೊಗೆರಾ ಅವರು ಜನವರಿ 2018ರಲ್ಲಿ ನ್ಯಾಯಾಧೀಶರಾಗಿ ನೇಮಕ ಆಗುತ್ತಾರೆ. ಮೊಗೆರಾರವರು ಸೂರತ್‍ನ 8ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು. ಇವರು ವಕೀಲರಾಗಿದ್ದಾಗ ಶಾ ವಿರುದ್ಧದ 2006ರ ನಕಲಿ ಎನ್‍ಕೌಂಟರ್ ಪ್ರಕರಣದಲ್ಲಿ ಶಾ ಅವರ ಪರವಾಗಿ ವಾದ ಮಾಡಿದರು. ಈ ನಕಲಿ ಎನ್‍ಕೌಂಟರ್ ಪ್ರಕರಣ ಆಗ ಇಡೀ ದೇಶದ ಗಮನ ಸೆಳೆದಿತ್ತು. ನಂತರ ಶಾ ಅವರು ಗುಜರಾತ್ ಗೃಹ ಮಂತ್ರಿ ಆದರು. ಅಮಿತ್ ಶಾ ವಿರುದ್ಧದ ನಕಲಿ ಎನ್‍ಕೌಂಟರ್ ಪ್ರಕರಣ ಮುಂಬೈನ ಸಿಬಿಐ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದ್ದ ಸಮಯದಲ್ಲಿ ಮೊಗೆರಾ ಅವರು 2014ವರೆಗೂ ಶಾ ಅವರ ಪರವಾಗಿ ವಾದ ಮಂಡಿಸಿದ್ದಾರೆ.

ಈ ಹಿಂದೆ ಹಿಂದಿ ದಿನಪತ್ರಿಕೆ ʼಜನಸತ್ತಾʼ ಕೂಡ ನಕಲಿ ಎನ್‍ಕೌಂಟರ್ ಕೇಸ್ ನಲ್ಲಿ ಸಿಬಿಐ ಕೋರ್ಟ್‌ನಲ್ಲಿ 2014ರಲ್ಲಿ ಶಾ ಪರವಾಗಿ ಮೊಗೆರಾ ಅವರು ವಾದ ಮಂಡಿಸಿದ್ದಾರೆ ಎಂದು ವರದಿ ಮಾಡಿತ್ತು.

ʼದಿ ಹಿಂದುʼ ಪತ್ರಿಕೆಯು 2014ರಲ್ಲಿ ಹೀಗೆ ವರದಿ ಮಾಡಿತ್ತು- ನ್ಯಾಯಾಲಯದ ವಿಚಾರಣೆಗಳಿಗೆ ಶಾ ರವರು ಖುದ್ದು ಹಾಜರಿರಬೇಕು ಎಂಬುದಕ್ಕೆ ಶಾ ಅವರಿಗೆ ವಿನಾಯಿತಿ ನೀಡಬೇಕು ಎಂದು ಮೊಗೆರಾ ಅವರು ಸಿಬಿಐ ಕೋರ್ಟ್‍ಗೆ ಮನವಿ ಸಲ್ಲಿಸಿದ್ದರು. ಆದರೆ ಮನವಿಯಲ್ಲಿ ವಿನಾಯಿತಿಗೆ ಯಾವುದೇ ಕಾರಣಗಳನ್ನು ನೀಡದಿರುವುದರಿಂದ ಸಿಬಿಐ ಕೋರ್ಟ್ ಶಾ ಪರ ವಕೀಲ ಮೊಗೆರಾ ಅವರನ್ನು ತರಾಟೆಗೆ ತೆಗೆದುಕೊಂಡಿತ್ತು. ಹಲವು ಬಿಜೆಪಿ ಮುಖಂಡರ ಪರವಾಗಿ ಕೋರ್ಟ್ ವಿಚಾರಣೆಗಳಿಗೆ ಖುದ್ದು ಹಾಜರಿರಬೇಕು ಎಂಬುದಕ್ಕೆ ವಿನಾಯಿತಿ ಕೋರಿ ಮೊಗೆರಾ ಅವರು ಸಲ್ಲಿಸಿದ್ದ ಹಲವು ಮನವಿಗಳಲ್ಲಿ ಇದೂ ಒಂದು.

ಕಾಂಗ್ರೆಸ್ ಪಕ್ಷವು ರಾಹುಲ್ ಗಾಂಧಿಯವರಿಗೆ ಜೈಲು ಶಿಕ್ಷೆ ಮತ್ತು ಲೋಕಸಭೆಯಿಂದ ಅನರ್ಹಗೊಳಿಸಿದ್ದನ್ನು ಬಿಜೆಪಿಯ ಪ್ರತೀಕಾರದ ರಾಜಕೀಯ ಎಂದು ಹೇಳಿದೆ. ಎರಡು ಪಕ್ಷಗಳ ಹಿತಾಸಕ್ತಿಯ ಸಂಘರ್ಷದ ಕಾರಣದಿಂದ ನ್ಯಾಯಾಧೀಶ ಮೊಗೆರಾ ಅವರಿಂದ ಕಾಂಗ್ರೆಸ್ ನಾಯಕರ ವಿರುದ್ಧ ಪ್ರತಿಕೂಲ ಆದೇಶಗಳು ಬರಲೂ ಬಹುದು.

ಪ್ರಜಾಪತಿ ಒಬ್ಬ ಸಾಧಾರಣ “ಕ್ರಿಮಿನಲ್” ಆಗಿದ್ದ. ಆತನನ್ನು ನಕಲಿ ಎನ್‍ಕೌಂಟರ್‌ ನಲ್ಲಿ ಸಾಯಿಸುವಾಗ ಆತನ ವಯಸ್ಸು ಕೇವಲ 28. ಆ ವರ್ಷ ಕೇಂದ್ರ ತನಿಖಾ ಸಂಸ್ಥೆ (ಸಿಬಿಐ) ಇದು ಅಂತಾರಾಜ್ಯ ರಾಜಕಾರಣಿಗಳು ಮತ್ತು ಪೊಲೀಸರು ಸೇರಿ ನಡೆಸಿದ್ದು ಎಂದು ಹೇಳಿತ್ತು.

ಸೊಹ್ರಾಬುದ್ದೀನ್, ಕೌಸರ್‌ ಬೀ, ತುಳಸಿರಾಮ್ ಪ್ರಜಾಪತಿ ಅವರ ಹತ್ಯೆ ಪ್ರಕರಣದಲ್ಲಿ, ಸಿಬಿಐ ಚಾರ್ಜ್‍ಶೀಟ್ ನಲ್ಲಿ (ದೋಷ ಆರೋಪಣ ಪಟ್ಟಿ) 37 ಜನರ ಹೆಸರುಗಳನ್ನು ಸೇರಿಸಿತ್ತು. ಜಾರ್ಜ್‍ಶೀಟ್ ನಲ್ಲಿ ಅಮಿತ್ ಶಾ, ರಾಜಸ್ತಾನದ ಮಾಜಿ ಉಪಮುಖ್ಯಮಂತ್ರಿ ಗುಲಾಬ್ ಚಂದ್ ಕಟಾರಿಯಾ, ಗುಜರಾತ್, ರಾಜಸ್ತಾನ್, ಆಂಧ್ರ ಪ್ರದೇಶದ ಹಲವು ಐಪಿಎಸ್ ಅಧಿಕಾರಿಗಳು ಮತ್ತು ಕೆಳಹಂತದ ಪೊಲೀಸ್ ಅಧಿಕಾರಿಗಳು ಇದ್ದರು. ನಂತರ ಎಲ್ಲಾ ರಾಜಕಾರಣಿಗಳ ಹೆಸರನ್ನು ಮತ್ತು ಹಿರಿಯ ಐಪಿಎಸ್ ಅಧಿಕಾರಗಳ ಹೆಸರನ್ನು ಪ್ರಕರಣದಿಂದ ತೆಗೆಯಲಾಯಿತು. ಕೇವಲ ಕೆಳಹಂತದ ಪೊಲೀಸರ ವಿರುದ್ಧ ವಿಚಾರಣೆಯನ್ನು ನಡೆಸಲಾಯಿತು.

ಇದನ್ನೂ ಓದಿ http://ರಾಹುಲ್‌ ಅನರ್ಹತೆ | ಮಹತ್ವದ ತಿರುವು

ಇಂಥ ಗಂಭೀರ ಪ್ರಕರಣದಲ್ಲಿ ಮೊಗೆರಾ ಅವರು ಅಮಿತ್ ಶಾಗೆ ವಕೀಲರಾಗಿದ್ದವರು. ರಾಹುಲ್ ಗಾಂಧಿ ಅವರಿಗೆ ನ್ಯಾಯಾಲಯದಲ್ಲಿ ಶಿಕ್ಷೆ ಪ್ರಕಟ ಆದ ಮೇಲೆ ಕೇಂದ್ರ ಸಚಿವ ರಾಮದಾಸ್ ಬಂಡು ಅಠಾವಳೆ ಅವರು ರಾಹುಲ್ ಕ್ಷಮೆ ಕೋರಿದ್ದರೆ ಅನರ್ಹರಾಗುತ್ತಿರಲಿಲ್ಲ ಎಂದು ಹೇಳಿಕೆ ನೀಡಿದರು. ಪ್ರತಿಯಾಗಿ ರಾಹುಲ್ ಅವರು ಕ್ಷಮೆ ಕೇಳಲು ನನ್ನ ಹೆಸರು ಸಾವರ್ಕರ್ ಅಲ್ಲ ಅಂದರು. ಲೋಕಸಭೆಯಿಂದ ಅನರ್ಹಗೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಪುನಃ ಮೋದಿ ಮತ್ತು ಅದಾನಿ ಸಂಬಂಧ ಪ್ರಶ್ನೆ ಎತ್ತಿದರು. 20,000ಕೋಟಿ ರೂಪಾಯಿ ಅದಾನಿ ಕಂಪನಿಗೆ ಎಲ್ಲಿಂದ ಬಂತು? ಎಂದು ಪ್ರಶ್ನಿಸಿದರು.

ರಾಹುಲ್ ಅವರಿಗೆ ಎರಡು ವರ್ಷ ಜೈಲು ಶಿಕ್ಷೆ ಮತ್ತು ಸಂಸದ ಸ್ಥಾನದಿಂದ ಅನರ್ಹಗೊಳಿಸಿರುವುದು ಅವರ ಧ್ವನಿಯನ್ನು ಅಡಗಿಸುವುದಕ್ಕಾಗಿ. ರಾಹುಲ್ ಅವರು ತಮ್ಮ ಧ್ವನಿಯನ್ನು ಅಡಗಿಸಿಕೊಳ್ಳುತ್ತಾರಾ ಇಲ್ಲವಾ ಅನ್ನುವುದು ಬಿಜೆಪಿಗೆ ಮುಖ್ಯ ಆಗಿದೆ. ಅವರು ತಮ್ಮ ಧ್ವನಿಯನ್ನು ಅಡಗಿಸಿಕೊಂಡರೆ ಕೆಲ ಕಾಲ ನಂತರ ಎಲ್ಲವು ‘ಸರಿ’ ಆಗಬಹುದು. ಅವರ ಅನರ್ಹತೆ ಮರುಪರಿಶೀಲನೆ ಆಗಬಹುದು ಕೂಡ. ಧ್ವನಿ ಹೆಚ್ಚು ಮಾಡಿದರೆ ಜಾಮೀನು ರದ್ದಾಗಬಹುದು. ಯಾಕೆಂದರೆ ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಅಮಿತ್ ಶಾ ಅವರಿಗೂ ನ್ಯಾಯಾಧೀಶ ಮೊಗೆರಾ ಅವರಿಗೂ ಬಲವಾದ ನಂಟಿದೆ. ನ್ಯಾಯಾಲಯ ಕೂಡ ಬಿಜೆಪಿ ಪಕ್ಷದ ಸಾಧನವಾಗಿ ಬಳಕೆಯಾಗಿದೆ. ದೇಶದಲ್ಲಿ ನ್ಯಾಯಾಂಗದ ಮೇಲೆ ನಂಬಿಕೆ ಇಡಲಾಗಿತ್ತು. ಆದರೆ ನ್ಯಾಯಾಂಗ ವ್ಯವಸ್ಥೆಯು ನಂಬಿಕೆಯನ್ನು ಪೂರ್ತಿ ಕಳೆದುಕೊಳ್ಳುತ್ತಿದೆ.

ಮೂಲ: ಅಜೋಯ್ ಆಶೀರ್ವಾದ್ ಮಹಾಪ್ರಶಾಸ್ತಾ (ದಿ ವೈರ್)

ಅನುವಾದ: ಸಂಜಯ್

ಇದನ್ನೂ ಓದಿhttp://ವಿದ್ಯಾರ್ಥಿಗಳ ಗಮನಕ್ಕೆ : ನಾಳೆ‌ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟ

Related Articles

ಇತ್ತೀಚಿನ ಸುದ್ದಿಗಳು