Thursday, August 29, 2024

ಸತ್ಯ | ನ್ಯಾಯ |ಧರ್ಮ

ರಾಹುಲ್‌ ಗಾಂಧಿ ರಾಜಕೀಯದಲ್ಲಿ ತಮ್ಮದೇ ಆದ ಛಾಪು ಮೂಡಿಸುತ್ತಿದ್ದಾರೆ, ಅವರಿಗೆ ಗೆಲುವಿನ ರುಚಿ ಸಿಕ್ಕಿದೆ: ಸ್ಮೃತಿ ಇರಾನಿ ಹೊಗಳಿಕೆ

ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಯುವರಾಜ ಎಂದು ವಿರೋಧಿಗಳ ಟೀಕೆಗೆ ಗುರಿಯಾಗಿದ್ದ ರಾಹುಲ್ ಗಾಂಧಿ ಈಗ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿ ಧೂಳು ಎಬ್ಬಿಸುತ್ತಿದ್ದಾರೆ. ಈ ಹಿಂದೆ ಸಂಸತ್ತಿಗೆ ಬಾರದೆ ಟೀಕೆ ಎದುರಿಸುತ್ತಿದ್ದ ರಾಹುಲ್ ಈಗ ನಿಯಮಿತವಾಗಿ ಹಾಜರಾಗಿ ಆಡಳಿತ ಪಕ್ಷವನ್ನು ಟೀಕಿಸುತ್ತಿದ್ದಾರೆ.

ಇದೆಲ್ಲವೂ ಅವರಲ್ಲಿನ ಬದಲಾವಣೆಯ ಸಂಕೇತ ಎಂದು ದೇಶದ ಬಹುಪಾಲು ಜನರು ಭಾವಿಸುತ್ತಾರೆ. ಈಗ ಆ ಜನರ ಜೊತೆಗೆ ಅವರ ರಾಜಕೀಯ ಪ್ರತಿಸ್ಪರ್ಧಿ, ಹಿಂದೆ ಅವರನ್ನು ಸೋಲಿಸಿದ ಸ್ಮೃತಿ ಇರಾನಿ ಕೂಡ ಸೇರಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ರಾಹುಲ್ ಗಾಂಧಿ ಅವರನ್ನು ಹೊಗಳಿದ್ದಾರೆ. ರಾಹುಲ್ ಗಾಂಧಿಯಲ್ಲಿ ಕಂಡುಬರುತ್ತಿರುವ ಬದಲಾವಣೆಯ ಪ್ರಶ್ನೆಗೆ ಅವರು ನೀಡಿದ ಉತ್ತರಗಳು ಈಗ ಅವರದೇ ಪಕ್ಷದ ಬಿಜೆಪಿ ನಾಯಕರನ್ನೂ ಬೆಚ್ಚಿಬೀಳಿಸಿದೆ.

ಅಮೇಠಿಯಲ್ಲಿ ಒಮ್ಮೆ ರಾಹುಲ್ ಗಾಂಧಿಯನ್ನು ಸೋಲಿಸಿದ್ದ ಸ್ಮೃತಿ ಇರಾನಿ, ಇತ್ತೀಚಿನ ಚುನಾವಣೆಯಲ್ಲಿ ಕಾಂಗ್ರೆಸ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಕಿಶೋರಿ ಲಾಲ್ ಶರ್ಮಾರಿಂದ ಸೋಲಿಸಲ್ಪಟ್ಟರು. ಸ್ಮೃತಿ ಅವರ ಬದಲಾವಣೆಗೆ ಕಾರಣ ಏನೆಂದು ಗೊತ್ತಿಲ್ಲ, ಆದರೆ ರಾಹುಲ್ ಬಗ್ಗೆ ಸ್ಮೃತಿ ಇರಾನಿ ಅವರ ಹೇಳಿಕೆಗಳು ಈಗ ವೈರಲ್ ಆಗುತ್ತಿವೆ.

ರಾಹುಲ್ ಗಾಂಧಿ ರಾಜಕೀಯದಲ್ಲಿ ಬದಲಾವಣೆ ಕಾಣುತ್ತಿದೆ ಎಂದು ಸ್ಮೃತಿ ಇರಾನಿ ತಮ್ಮ ಸಂದರ್ಶನದಲ್ಲಿ ಹೇಳಿದ್ದಾರೆ. ರಾಹುಲ್ ಗೆಲುವಿನ ರುಚಿಯನ್ನು ಅನುಭವಿಸಿದ್ದಾರೆ ಎಂದು ಅವರು ಹೇಳಿದರು. ರಾಹುಲ್ ಹಿಂದೆಂದೂ ಕಾಣದ ರೀತಿಯಲ್ಲಿ ಎಲ್ಲೆಲ್ಲಿಯೂ ಜಾತಿಯ ಬಗ್ಗೆ ಮಾತನಾಡುತ್ತಿದ್ದಾರೆ, ಅಷ್ಟೇ ಅಲ್ಲ ರಾಜಕೀಯದಲ್ಲಿ ಅದು ಎಷ್ಟು ಮುಖ್ಯ ಎಂಬುದನ್ನು ತೋರಿಸುತ್ತಿದ್ದಾರೆ. ಸಂಸತ್ತಿನಲ್ಲಿ ಬಿಳಿ ಟಿ-ಶರ್ಟ್ ಧರಿಸುವ ಮೂಲಕ ಯುವಕರಿಗೆ ಸಂದೇಶ ನೀಡಲು ಪ್ರಯತ್ನಿಸುತ್ತಿದ್ದಾರೆ ಎಂದು ಇರಾನಿ ಹೇಳಿದರು. ನಮಗೆ ಇಷ್ಟವಿರಲಿ, ಇಲ್ಲದಿರಲಿ ರಾಹುಲ್ ಬೇರೆಯದೇ ರೀತಿಯ ರಾಜಕೀಯ ಮಾಡುತ್ತಿರುವುದಂತೂ ಹೌದು ಎಂದು ಅವರು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page