ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ವಿವಾದಾತ್ಮಕವಾಗಿ ಪ್ರತಿಕ್ರಯಿಸಿದ್ದಾರೆ. ರೈತರನ್ನು ‘ಬೊಗಳುವ ನಾಯಿಗಳು’ ಎನ್ನುವ ಮೂಲಕ ಹೊಸ ವಿವಾದವನ್ನು ತನ್ನ ಮೇಲೆ ಎಳೆದುಕೊಂಡಿದ್ದಾರೆ.
ಕಳೆದ ವಾರ ಉತ್ತರ ಪ್ರದೇಶದ ಲಕಿಂಪುರ ಕೇರಿಯಲ್ಲಿ ರಾಕೇಶ್ ಟಿಕಾಯತ್ ನೇತೃತ್ವದ ಭಾರತೀಯ ಕಿಸಾನ್ ಒಕ್ಕೂಟ ನಿರಂತರ 75 ಗಂಟೆಗಳ ಕಾಲ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ವಿದ್ಯುತ್ ಕಾಯ್ದೆ ತಿದ್ದುಪಡಿ ವಾಪಸಾತಿ ಸೇರಿದಂತೆ ಕೇಂದ್ರ ಸಚಿವ ಅಜಯ್ ಮಿಶ್ರಾ ಅವರನ್ನು ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
2021 ರ ಅಕ್ಟೋಬರ್ 3 ರಂದು ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಉತ್ತರ ಪ್ರದೇಶದ ಲಕಿಂಪುರ ಕೇರಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದರು. ಈ ಸಂದರ್ಭದಲ್ಲಿ ಕೇಂದ್ರ ಸಚಿವ ಅಜಯ್ ಮಿಶ್ರಾರ ಪುತ್ರನಿದ್ದ SUV ರೈತರ ಮೇಲೆ ಹರಿದು 4 ರೈತರು ಮೃತಪಟ್ಟಿದ್ದರು. ಇದೇ ಕಾರಣಕ್ಕೆ ರೈತರು ವಿವಿಧ ಬೇಡಿಕೆಗಳ ಈಡೇರಿಕೆ ಜೊತೆಗೆ ಕೇಂದ್ರ ಸಚಿವ ಅಜಯ್ ಮಿಶ್ರಾ ರಾಜಿನಾಮೆಗೂ ಒತ್ತಾಯಿಸಿ ಪ್ರತಿಭಟಿಸಲಾಗಿತ್ತು.
‘ಕಾರಿನಲ್ಲಿ ಹೋಗುವಾಗ ದಾರಿಯಲ್ಲಿ ನಾಯಿಗಳು ಬಂದು ಬೊಗಳುತ್ತವೆ, ಕಾರನ್ನೂ ಹಿಂಬಾಲಿಸುತ್ತವೆ ಅದಕ್ಕೆ ನಾವು ಪ್ರತಿಕ್ರಯಿಸಬೇಕಾ? ಅವುಗಳ ಬೊಗಳುವಿಕೆಗೆ ಪ್ರತಿಕ್ರಯಿಸುವ ಅಗತ್ಯವಿಲ್ಲ’ ಎಂದು ಮತ್ತು ‘ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡ ಎರಡು ಕಾಸಿಗೆ ಕಿಮ್ಮತ್ತಿಲ್ಲದ ವ್ಯಕ್ತಿಯ ಮಾತನ್ನು ಗಣನೆಗೆ ತಗೆದುಕೊಳ್ಳುವ ಅಗತ್ಯವಿಲ್ಲ..’ ಎನ್ನುವ ಮೂಲಕ ಪ್ರತಿಭಟನಾ ನಿರತ ರೈತರನ್ನು ಬೊಗಳುವ ನಾಯಿಗಳು ಎಂದು, ರೈತ ನಾಯಕನನ್ನು ಕೇವಲವಾಗಿ ಅಜಯ್ ಮಿಶ್ರಾ ಜರಿದಿದ್ದಾರೆ.