Home ರಾಜಕೀಯ ರಾಜಸ್ಥಾನ : ಕಾಂಗ್ರೆಸ್ ಬಿರುಕಿಗೆ ಕಮಲ್ ನಾಥ್ ಮಧ್ಯಸ್ಥಿಕೆ

ರಾಜಸ್ಥಾನ : ಕಾಂಗ್ರೆಸ್ ಬಿರುಕಿಗೆ ಕಮಲ್ ನಾಥ್ ಮಧ್ಯಸ್ಥಿಕೆ

0

ಒಂದು ಕಡೆ ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದರೆ ಇನ್ನೊಂದು ಕಡೆ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಬಿರುಕು ಹೆಚ್ಚುತ್ತಿದೆ. ಸಧ್ಯ ಬಿರುಕಿಗೆ ತೇಪೆ ಹಚ್ಚಲು ಕಾಂಗ್ರೆಸ್ ನ ‘ಟ್ರಬಲ್ ಶೂಟರ್’ ಖ್ಯಾತಿಯ ಕಮಲ್ ನಾಥ್ ಮಧ್ಯಸ್ಥಿಕೆ ವಹಿಸಿದ್ದಾರೆ.

ರಾಜಸ್ಥಾನ ಕಾಂಗ್ರೆಸ್ ಈಗ ಅಶೋಕ್ ಗೆಹ್ಲೋಟ್ ಮತ್ತು ಸಚಿನ್ ಪೈಲಟ್ ನಡುವಿನ ಬಣಗಳ ಮೂಲಕ ದೊಡ್ಡ ಬಿರುಕು ಉಂಟಾಗಿದೆ. ರಾಜ್ಯ ರಾಜಕೀಯದಲ್ಲಿ ಈ ಬಗ್ಗೆ ಬಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರಮುಖವಾಗಿ ಅಶೋಕ್ ಗೆಹ್ಲೋಟ್ ಅವರ ಉತ್ತರಾಧಿಕಾರಿಯಾಗಿ ಸಚಿನ್ ಪೈಲಟ್ ಅವರನ್ನು ರಾಜಸ್ಥಾನದ ಮುಖ್ಯಮಂತ್ರಿಯನ್ನಾಗಿ ಮಾಡುವ ಬಗ್ಗೆ ಚರ್ಚೆ ನಡೆಯುತ್ತಿದೆ.

ಈ ನಡುವೆ ಸಚಿನ್ ಪೈಲಟ್ ಅವರನ್ನು ಉತ್ತರಾಧಿಕಾರಿ ಮಾಡುವ ನಿರ್ಧಾರಕ್ಕೆ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದು ಬಂಡಾಯದ ಬೆದರಿಕೆ ಹಾಕಿದ್ದಾರೆ. ಒಂದು ವೇಳೆ ಅಶೋಕ್ ಗೆಹ್ಲೋಟ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದರೂ ಕೂಡ ಮುಖ್ಯಮಂತ್ರಿಯಾಗಿಯೂ ಮುಂದುವರೆಯುವಂತೆ ಗೆಹ್ಲೋಟ್ ಬೆಂಬಲಿಗ 90 ಕ್ಕೂ ಹೆಚ್ಚು ಶಾಸಕರು ಒತ್ತಡ ಹಾಕುತ್ತಿದ್ದಾರೆ.

ನಿನ್ನೆಯ ದಿನ ಕಾಂಗ್ರೆಸ್ ಪಕ್ಷದ ಮುಂದಿನ ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಲು ಸಭೆ ಕರೆಯಲಾಗಿತ್ತು. ಕಾಂಗ್ರೆಸ್ ಸೇರಿದಂತೆ ಸರ್ಕಾರವನ್ನು ಬೆಂಬಲಿಸುವ ಪಕ್ಷೇತರ ಶಾಸಕರನ್ನೂ ಸಹ ಸಭೆಗೆ ಆಹ್ವಾನಿಸಲಾಗಿತ್ತು. ಮೂಲಗಳ ಪ್ರಕಾರ, ಗೆಹ್ಲೋಟ್ ಬೆಂಬಲಿಗ ಶಾಸಕರು ಇಲ್ಲಿನ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಿಲ್ಲ. ಈ ಬೆಳವಣಿಗೆ ನಂತರ ಶಾಸಕಾಂಗ ಪಕ್ಷದ ಸಭೆಯನ್ನು ಮುಂದೂಡಲಾಗಿದೆ ಎಂದು ಹೇಳಲಾಗುತ್ತಿದೆ.

ಸಧ್ಯ ಈ ಬಿರುಕು ಮತ್ತು ಬಂಡಾಯದ ಬಿಸಿ ತಣ್ಣಗಾಗಿಸಲು ಪಕ್ಷದ ಪ್ರಮುಖ ನಾಯಕ ಕಮಲ್ ನಾಥ್ ಅವರು ಮಧ್ಯಸ್ಥಿಕೆ ವಹಿಸಿದ್ದಾರೆ. ಈ ನಡುವೆ ಭಾರತ್ ಜೋಡೋ ಯಾತ್ರೆಯಲ್ಲಿ ಇದ್ದ ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರು ತುರ್ತಾಗಿ ಇಂದು ದೆಹಲಿಯ ಸೋನಿಯಾ ಗಾಂಧಿಯವರ ನಿವಾಸಕ್ಕೆ ಭೇಟಿ ನೀಡಿ ರಾಜಸ್ಥಾನದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ವಿವರಿಸಿದ ಬಗ್ಗೆ ಮಾಹಿತಿ ಲಭ್ಯವಾಗಿದೆ

ಇಂದು ಸಂಜೆಯ ವೇಳೆಗೆ ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಯ ಹೆಸರು ಘೋಷಣೆಯಾಗಲಿದೆ. ಆದರೂ ಈ ಬಿರುಕು ಬೂದಿ ಮುಚ್ಚಿದ ಕೆಂಡದಂತಿದ್ದು, ಮುಂದಿನ ರಾಜಕೀಯ ಬೆಳವಣಿಗೆ ಯಾವ ಹಂತಕ್ಕೆ ಮುಟ್ಟಲಿದೆ ಎಂಬುದನ್ನು ಕಾದು ನೋಡಬೇಕಿದೆ.

You cannot copy content of this page

Exit mobile version