Saturday, June 21, 2025

ಸತ್ಯ | ನ್ಯಾಯ |ಧರ್ಮ

ಹೊಸ ಸುದ್ದಿ: ತೆಲಂಗಾಣದ ರಾಜ್ಯಪಾಲರಾಗ್ತಾರಂತೆ ಸೂಪರ್‌ ಸ್ಟಾರ್‌ ರಜನಿ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಇತ್ತೀಚಿನ ವದಂತಿಗಳ
ನಂಬುವುದಾದರೆ ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೆ ಶೀಘ್ರದಲ್ಲೇ ಸಾಂವಿಧಾನಿಕ ಹುದ್ದೆಯೊಂದು ಸಿಗಲಿದೆ.

ತಮಿಳುನಾಡಿನ ಸೂಪರ್ ಸ್ಟಾರ್ ರಜನಿಕಾಂತ್ ಅವರನ್ನು ತೆಲಂಗಾಣ ರಾಜ್ಯಪಾಲರನ್ನಾಗಿ ನೇಮಿಸುವ ಸಾಧ್ಯತೆ ಇದೆಯೆಂದು ವರದಿಯಾಗಿದೆ. ಆದರೆ ಇದನ್ನು ಬಿಜೆಪಿಯಾಗಲೀ, ರಜನಿಯಾಗಲೀ ಸ್ಪಷ್ಟಪಡಿಸಿಲ್ಲ. ಆದರೆ ಈ ಕುರಿತು ಬಹಳಷ್ಟು ಊಹಾಪೋಹಗಳು ಹರಿದಾಡುತ್ತಿವೆ. ಸದ್ಯದಲ್ಲೇ ಚಿತ್ರರಂಗದಿಂದ ನಿವೃತ್ತಿ ಹೊಂದಲು ಮುಂದಾಗಿರುವ ರಜನಿಕಾಂತ್ ಅವರಿಗೆ ಬಿಜೆಪಿ ರಾಷ್ಟ್ರೀಯ ನಾಯಕತ್ವ ಈ ಬಂಪರ್ ಆಫರ್ ನೀಡಿದೆ ಎನ್ನಲಾಗುತ್ತಿದೆ.

ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ರಾಜಕೀಯ ಮೈಲೇಜ್ ಪಡೆಯಲು ತಮಿಳು ಸೂಪರ್ ಸ್ಟಾರ್ ನೆರವಾಗಲಿದ್ದಾರೆ ಎಂದು ಬಿಜೆಪಿ ನಾಯಕತ್ವ ಅಭಿಪ್ರಾಯಪಟ್ಟಿರುವಂತಿದೆ. ಅಷ್ಟೇ ಅಲ್ಲ, ತಮಿಳುನಾಡಿನಲ್ಲೂ ಪಕ್ಷದ ಜನಪ್ರಿಯತೆಯ ಮೇಲೆ ಸ್ವಲ್ಪ ಪ್ರಭಾವ ಬೀರಲಿದೆ ಎನ್ನುವುದು ಅದರ ಲೆಕ್ಕಾಚಾರ ಎನ್ನಲಾಗುತ್ತಿದೆ. “ರಜನಿಕಾಂತ್ ಅವರಿಗೆ ರಾಜ್ಯಪಾಲರ ಹುದ್ದೆ ನೀಡಿ ಗೌರವಿಸುವ ಮೂಲಕ, ಬಿಜೆಪಿಯು ಇಡೀ ದಕ್ಷಿಣ ಭಾರತದ ಜನರ ವಿಶ್ವಾಸವನ್ನು ಗಳಿಸುವ ಭರವಸೆ ಹೊಂದಿದೆ” ಎಂದು ಮೂಲಗಳು ತಿಳಿಸಿವೆ. ರಜನಿಕಾಂತ್ ಅವರ ಸಹೋದರ ಸತ್ಯನಾರಾಯಣ ರಾವ್ ಗಾಯಕ್ವಾಡ್ ಅವರು ಸೂಪರ್‌ಸ್ಟಾರ್ ಶೀಘ್ರದಲ್ಲೇ ಭಾರತದ ರಾಜ್ಯವೊಂದರ ಗವರ್ನರ್ ಆಗಲಿದ್ದಾರೆ ಎಂಬ ವದಂತಿಗಳಿಗೆ ಕೆಲವು ದಿನಗಳ ಹಿಂದೆ ಉತ್ತೇಜನ ನೀಡುವ ಹೇಳಿಕೆ ನೀಡಿದ್ದರು.

ಈ ಮೂಲಕ ರಜನಿಕಾಂತ್ ರಾಜಕೀಯಕ್ಕೆ ಬರಲು ಯೋಚಿಸುತ್ತಿದ್ದಾರೆ ಎಂಬ ಊಹಾಪೋಹಗಳಿಗೆ ಮತ್ತಷ್ಟು ಮೆರಗು ಬಂದಿದೆ. ಸತ್ಯನಾರಾಯಣ ರಾವ್ ಅವರು ನೇರ ರಾಜಕೀಯಕ್ಕೆ ಬರದೇ ಇರಬಹುದು, ಆದರೆ ಖಂಡಿತಾ ರಾಜ್ಯದ ರಾಜ್ಯಪಾಲರಾಗುತ್ತಾರೆ ಎಂದಿದ್ದರು. ರಜನಿಕಾಂತ್ ಅವರು ಇತ್ತೀಚೆಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದ ನಂತರ ಅವರು ಭಾರತೀಯ ಜನತಾ ಪಕ್ಷಕ್ಕೆ ಹತ್ತಿರವಾಗುತ್ತಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.

ರಜನಿ ಅಂದು ಆದಿತ್ಯನಾಥ್ ಅವರ ಪಾದ ಮುಟ್ಟಿ ನಮಸ್ಕರಿಸಿದ್ದರು. ಬಿಜೆಪಿ ತನ್ನ ಮುಂಬರುವ ಚುನಾವಣಾ ಪ್ರಚಾರಕ್ಕಾಗಿ ದಕ್ಷಿಣದ ಚಲನಚಿತ್ರ ತಾರೆಯರನ್ನು ಸೆಳೆಯುವತ್ತ ಗಮನ ಹರಿಸುತ್ತಿದೆ. ಹಾಗಾಗಿ ರಜನಿಕಾಂತ್ ಅವರನ್ನು ಮೋದಿ ಸರ್ಕಾರ ಎಂದಾದರೂ ರಾಜ್ಯಪಾಲರನ್ನಾಗಿಸಿದರೆ ಆಶ್ಚರ್ಯವಿಲ್ಲ. ಮುಂದಿನ ದಿನಗಳಲ್ಲಿ ಏನಾಗುತ್ತೋ ಕಾದು ನೋಡಬೇಕು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page