ಬರೋಬ್ಬರಿ ಆರು ತಿಂಗಳ ಹಗ್ಗಜಗ್ಗಾಟ, ತಿಣುಕಾಟಗಳ ನಂತರ ಈಗ ಬಿಜೆಪಿ ಪಕ್ಷ ಹೊಸ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕನ ಆಯ್ಕೆ ಮಾಡಿದೆ. ಆದರೆ ಈ ಆಯ್ಕೆ ಹಿನ್ನೆಲೆಯಲ್ಲಿ ಬಿಜೆಪಿಯಲ್ಲೇ ಬಿನ್ನಮತದ ಅಪಸ್ವರ ಎದುರಾಗಿದೆ. ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಯಡಿಯೂರಪ್ಪ ಪುತ್ರ ವಿಜಯೇಂದ್ರ ವಿರುದ್ಧ ಈಗ ಶಾಸಕ ರಮೇಶ್ ಜಾರಕಿಹೊಳಿ ಅಸಮಾಧಾನ ಹೊರಹಾಕಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷನ ಆಯ್ಕೆ ಹಿರಿತನದ ಆಧಾರದಲ್ಲಿ ಮಾಡಬೇಕಿತ್ತು. ಆದರೆ ಬಿಜೆಪಿಯಲ್ಲಿ ಹೀಗಾಗಿಲ್ಲ. ಕೇವಲ ಯಡಿಯೂರಪ್ಪ ಪುತ್ರ ಎನ್ನುವ ಕಾರಣಕ್ಕೆ ಆದ ಆಯ್ಕೆಯ ಜೊತೆಗೆ ತಮಗಿಂತ ಕಿರಿಯ ವಯಸ್ಸಿನವರ ಕೆಳಗೆ ಕೆಲಸ ಮಾಡೋದು ಹೇಗೆ ಎಂದು ವರಿಷ್ಠರ ಮುಂದೆ ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ಅದೇ ವಿಜಯೇಂದ್ರ ಬದಲಾಗಿ ಯಡಿಯೂರಪ್ಪನವರಿಗೆ ರಾಜ್ಯಾಧ್ಯಕ್ಷ ಹುದ್ದೆ ನೀಡಿದ್ದರೆ ಒಪ್ಪಬಹುದಿತ್ತು. ಆದರೆ ಈ ಆಯ್ಕೆ ಅಷ್ಟು ಸೂಕ್ತ ಅಲ್ಲ ಎಂದು ಶಾಸಕ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ಕೇವಲ ಯಡಿಯೂರಪ್ಪ ಮಾತ್ರವಲ್, ಬಿಜೆಪಿ ಪಕ್ಷದಲ್ಲಿ ಹಲವಷ್ಟು ಹಿರಿಯ ನಾಯಕರುಗಳು ಪಕ್ಷ ಮುನ್ನಡೆಸುವ ನಿಟ್ಟಿನಲ್ಲಿ ಸಬಲರಿದ್ದಾರೆ. ಆದರೆ ಅನುಭವ ಮತ್ತು ವಯಸ್ಸು ಎರಡರಲ್ಲೂ ಕಿರಿಯ ಎನ್ನಿಸಿಕೊಳ್ಳುವ ವಿಜಯೇಂದ್ರ ಆಯ್ಕೆ ಹಿನ್ನೆಲೆಯಲ್ಲಿ ತಮ್ಮ ಅಸಮಾಧಾನವನ್ನು ರಮೇಶ್ ಜಾರಕಿಹೊಳಿ ಹೊರಹಾಕಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್, ಎಸ್.ಟಿ.ಸೋಮಶೇಖರ್, ಅರವಿಂದ್ ಬೆಲ್ಲದ, ಸಿ.ಟಿ.ರವಿ, ವಿ.ಸೋಮಣ್ಣ, ಕೆ.ಎಸ್.ಈಶ್ವರಪ್ಪ, ಡಾ.ಕೆ.ಸುಧಾಕರ್ ನಂತರ ಈಗ ರಮೇಶ್ ಜಾರಕಿಹೊಳಿ ಸಹ ವಿಜಯೇಂದ್ರ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದು, ಬಿಜೆಪಿ ಒಳಗಿನ ಅಸಮಾಧಾನದ ಬೇಗುದಿ ರಾಜ್ಯಾಧ್ಯಕ್ಷನ ಆಯ್ಕೆಯ ನಂತರ ಮತ್ತಷ್ಟು ಹೆಚ್ಚಾಗಿದೆ. ಒಬ್ಬೊಬ್ಬ ನಾಯಕನೂ ಕೊಡುವ ಪ್ರತಿಕ್ರಿಯೆಗಳು ಮುಂದಿನ ದಿನಗಳಲ್ಲಿ ಪಕ್ಷವನ ಸಂಘಟಿಸುವ ಬದಲು ಇನ್ನಷ್ಟು ಕಂದಕ ಸೃಷ್ಟಿಯಾಗಬಹುದು ಎನ್ನಲಾಗಿದೆ.