ಶಿರಸಿ: ತಾಲೂಕಿನ ಹಳ್ಳಿಯೊಂದರಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಹವ್ಯಕ ಬ್ರಾಹ್ಮಣ ಸಮುದಾಯದ ವಿಶ್ವನಾಥ್ ಹೆಗಡೆ (40) ಎಂಬಾತ ಅತ್ಯಾಚಾರ ಎಸಗಿರುವ ಘಟನೆ ಬೆಳಕಿಗೆ ಬಂದಿದೆ. ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಏಳನೇ ತರಗತಿ ವ್ಯಾಸಂಗ ಮುಗಿಸಿ ಬೇಸಿಗೆ ರಜೆಯ ಕಾರಣ ಮನೆಯಲ್ಲಿಯೇ ಇದ್ದ ಬಾಲಕಿ ಮೇಲೆ ವಿಶ್ವನಾಥ್ ಹೆಗಡೆ ಎಂಬಾತ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ಬಳಿಕ ಮಗು ತನ್ನ ತಾಯಿಗೆ ಈ ವಿಷಯವನ್ನು ತಿಳಿಸಿದ್ದು, ತಾಯಿ ಆರೋಪಿಯ ಮನೆ ಬಾಗಿಲಿಗೆ ಹೋಗಿ ಕೇಳಿದ್ದಾರೆ. ಆದರೆ, ಆರೋಪಿ “ನಾನು ಹಾಗೇನೂ ಮಾಡಿಲ್ಲ. ನಾನೇ ಮಾಡಿದ್ದೇನೆ ಎನ್ನುವುದಕ್ಕೆ ನಿನ್ನ ಹತ್ತಿರ ಸಾಕ್ಷಿ ಇದೆಯೇ” ಎಂದು ಉಡಾಪೆಯಿಂದ ಮಾತಾಡಿದ್ದಾನೆ. ನಂತರ ತಾಯಿ, ಮಗುವಿನ ಮೇಲೆ ಅತ್ಯಾಚಾರ ಎಸಗಿರುವುದಾಗಿ ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪೋಕ್ಸೊ ಪ್ರಕರಣದಡಿ ದೂರು ನೀಡಿದ್ದಾರೆ. ದೂರು ನೀಡಿದ ಮೂರ್ನಾಲ್ಕು ದಿನಗಳ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದರೆ ದೌರ್ಜನ್ಯ ಪ್ರಕರಣವೆಂದು ದೂರು ದಾಖಲಿಸಿಕೊಂಡಿದ್ದು, ದೂರುದಾರರಿಗೆ ಪೊಲೀಸರು ಎಫ್ಐಆರ್ ಪ್ರತಿಯನ್ನೂ ಕೂಡ ನೀಡದೆ ಕಳುಹಿಸಿದ್ದಾರೆ ಎನ್ನಲಾಗಿದೆ. ಮಗುವನ್ನು ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿರುವುದಾಗಿ ತಿಳಿದುಬಂದಿದೆ.
ಬುಧವಾರ ಬೆಳಿಗ್ಗೆ ಪೊಲೀಸರು ಗ್ರಾಮಕ್ಕೆ ಭೇಟಿ ನೀಡುವ ಕುರುಹು ತಿಳಿದ ಆರೋಪಿ ಪರಾರಿಯಾಗಿದ್ದಾನೆ. ಇಡೀ ದಿನ ಮನೆಗೆ ಬಾರದೆ ತಲೆಮರೆಸಿಕೊಂಡಿದ್ದಾನೆಂದು ಸ್ಥಳೀಯರಿಂದ ಮಾಹಿತಿ ಲಭ್ಯವಾಗಿದೆ. ಆರೋಪಿ ತನ್ನ ಪ್ರಭಾವ ಬಳಸಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.