Saturday, June 21, 2025

ಸತ್ಯ | ನ್ಯಾಯ |ಧರ್ಮ

ಉದಯನಿಧಿ ಸ್ಟಾಲಿನ್‌ | ಸನಾತನ ಧರ್ಮವೋ..? ಸಾಮಾಜಿಕ ನ್ಯಾಯವೋ..?

ತಮಿಳುನಾಡಿನ ಆಡಳಿತಾರೂಢ ಡಿಎಂಕೆಯ ಯುವ ಸಚಿವ ಉದಯನಿಧಿ ಸ್ಟಾಲಿನ್ ದೇಶದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದ್ದಾರೆ. ಇತ್ತೀಚೆಗೆ ಪ್ರಗತಿಪರ ಸಾಹಿತಿಗಳ ಸಮಾವೇಶದಲ್ಲಿ ತಮಿಳುನಾಡಿನಲ್ಲಿ ಸನಾತನಧರ್ಮ ನಿರ್ಮೂಲನೆಗಾಗಿ ಮಹಾದಿನ ಕಾರ್ಯಕ್ರಮದ ಕುರಿತು ಉದಯನಿಧಿ ಸ್ಟಾಲಿನ್ ಅವರು ಹೇಳಿದ ಮಾತುಗಳು ಹೊಸದಾಗಿ ಬಲಗೊಂಡಿರುವ ಪ್ರತಿಪಕ್ಷಗಳ ಮೈತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಅದೇ ಸಮಯದಲ್ಲಿ, ಈ ಕಾಮೆಂಟ್‌ ಕೇಂದ್ರದಲ್ಲಿ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಮತ್ತು ಅದರ ಹಿಂದಿರುವ ಹಿಂದುತ್ವ ಶಕ್ತಿಗಳಾದ ಆರ್‌ಎಸ್‌ಎಸ್ ವಿಶ್ವ ಹಿಂದೂ ಪರಿಷತ್‌ಗೆ ಹೊಸ ಅಸ್ತ್ರವನ್ನು ನೀಡಿದೆ.

ಈ ಸಂದರ್ಭದಲ್ಲಿ ಉದಯನಿಧಿ ಸ್ಟಾಲಿನ್ ಅವರು ಸನಾತನ ಧರ್ಮದ ಬಗ್ಗೆ ತಮ್ಮ ವೈಚಾರಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಸನಾತನ ಧರ್ಮದ ನಿರ್ಮೂಲನೆಯಾಗಬೇಕು, ದೇಶದಲ್ಲಿ ಜನರನ್ನು ಕಾಡುತ್ತಿರುವ ಡೆಂಗ್ಯೂ, ಕಾಲರಾ, ಮಲೇರಿಯಾದಂತಹ ದೀರ್ಘಕಾಲದ ಕಾಯಿಲೆಗಳು ನಿರ್ಮೂಲನೆಯಾಗುವುದು ಎಷ್ಟು ಮುಖ್ಯವೋ, ಸನಾತನ ಧರ್ಮವೂ ಸಂಪೂರ್ಣವಾಗಿ ನಿರ್ಮೂಲನೆಯಾಗಬೇಕಿರುವುದೂ ಮುಖ್ಯ ಎಂದು ಹೇಳಿದರು.

ಉದಯನಿಧಿ ಸ್ಟಾಲಿನ್ ಅವರ ಹರಿತ ದಾಳಿ ಸಾಮಾನ್ಯವಾದುದರಲಿಲ್ಲ. ಅದು ಇಂದು ಹುಟ್ಟಿದ್ದಲ್ಲ. ಪ್ರಾಚೀನ ಭಾರತೀಯ ಸಂಸ್ಕೃತಿಯಲ್ಲಿ ಈ ವಿಚಾರಗಳು ನಿರಂತರವಾಗಿ ತಿಕ್ಕಾಟ ನಡೆಸಿವೆ. ಚಾರ್ವಾಕರ ಕಾಲದಿಂದ ಹಿಡಿದು ಬುದ್ಧ, ಫುಲೆ, ಪೆರಿಯಾರ್ ಮತ್ತು ಅಂಬೇಡ್ಕರ್ ತನಕ ನಮ್ಮ ಭಾರತೀಯ ಸಂಸ್ಕೃತಿ ಪರಂಪರೆಯಲ್ಲಿ ಎರಡು ಚಿಂತನೆಗಳ ನಡುವೆ ಪರಸ್ಪರ ಘರ್ಷಣೆ ನಡೆದಿದೆ. ವೇದಗಳು, ಪುರಾಣಗಳು, ಉಪನಿಷತ್ತುಗಳು, ಮಹಾಕಾವ್ಯಗಳು ಇತ್ಯಾದಿಯನ್ನು ಮೂಲವಾಗಿಟ್ಟುಕೊಂಡು ಸಮಾಜ ನಿರ್ಮಾಣ ಮಾಡುವ ವಿಧಾನವನ್ನೇ ಸನಾತನ ಧರ್ಮ ಎನ್ನುತ್ತಾರೆ.

ಇನ್ನೊಂದು ವಿಧಾನವೆಂದರೆ ಈ ಸಾಂಪ್ರದಾಯಿಕತೆಯನ್ನು ವಿರೋಧಿಸುವ ವಿಧಾನವಾಗಿದೆ ಮತ್ತು ಇದು ಕಾರ್ಯ-ಕಾರಣ, ಸಾಮಾಜಿಕ ನ್ಯಾಯ ಮತ್ತು ಭೌತಿಕ ವಿಜ್ಞಾನವನ್ನು ಆಧರಿಸಿದೆ. ಈ ಎರಡು ಚಿಂತನೆಯ ಶಾಲೆಗಳ ನಡುವಿನ ಸಂಘರ್ಷವು ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಉದಯನಿಧಿ ಸ್ಟಾಲಿನ್ ಈ ಎರಡನೇ ಚಿಂತನೆಯ ಪರಂಪರೆಗೆ ಸೇರಿದವರು.

20ನೇ ಶತಮಾನದಲ್ಲಿ ತಮಿಳುನಾಡಿನಲ್ಲಿ ಪೆರಿಯಾರ್ ರಾಮಸ್ವಾಮಿಯವರು ಆರ್ಯ ಸಂಸ್ಕೃತಿಯ ಪಾರಮ್ಯವನ್ನು ಕುರಿತು ರಚಿಸಿದ ದೊಡ್ಡ ಹೋರಾಟವು ದೇಶದಾದ್ಯಂತ ಸನಾತನ ಧರ್ಮದ ವಿರುದ್ಧ ಚಳುವಳಿಗಳು ಮತ್ತು ಹೋರಾಟಗಳಿಗೆ ಭದ್ರ ಬುನಾದಿ ಹಾಕಿತು. ಪೆರಿಯಾರ್ ಅವರ ಪರಂಪರೆಯ ಉಸ್ತುವಾರಿಯನ್ನು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ವಹಿಸಿಕೊಂಡರು, ನಂತರ ಅವರ ಮಗ ಪ್ರಸ್ತುತ ತಮಿಳುನಾಡಿನ ಮುಖ್ಯಮಂತ್ರಿಯಾಗಿರುವ ಸ್ಟಾಲಿನ್, ಮತ್ತು ಅವರ ಮಗ ಉದಯನಿಧಿ ಸ್ಟಾಲಿನ್ ನಾಲ್ಕು ಹೀಗೆ ತಲೆಮಾರುಗಳಿಂದ ಮುಂದುವರಿಸಿದ್ದಾರೆ.

ತಮಿಳುನಾಡಿನಲ್ಲಿ ಸನಾತನ ಧರ್ಮದ ವಿರುದ್ಧದ ಹೋರಾಟವೆಂದರೆ ವರ್ಣ ಧರ್ಮದ ವಿರುದ್ಧದ ಹೋರಾಟ. ಅಂದರೆ ಮನುಸ್ಮೃತಿ ಸೃಷ್ಟಿಸಿದ ಅಸಮಾನತೆಯ ತಳಹದಿಯ ಆಧಾರದ ಮೇಲೆ ಕಟ್ಟಲಾಗಿರುವ ಈ ದೇಶದ ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ. ವರ್ಣಧರ್ಮ ವ್ಯವಸ್ಥೆಯು ಕೆಲವು ಸಮುದಾಯಗಳಿಗೆ ಪ್ರಾಬಲ್ಯದ ಸ್ಥಾನವನ್ನು ಮತ್ತು ಇತರರಿಗೆ ಗುಲಾಮಗಿರಿಯ ಸ್ಥಾನವನ್ನು ನಿರ್ದೇಶಿಸುತ್ತದೆ. ಮನುಸ್ಮೃತಿ ಇದನ್ನು ಶಾಸನ ಮಾಡಿತು. ಇದರ ಹಿಂದೆ ಸನಾತನ ಧರ್ಮವಿದೆ. ಇದೇ ಮನುಸ್ಮೃತಿಯನ್ನು ಸುಡಲು ಅಂಬೇಡ್ಕರ್ ಹೇಳಿದರು.

ಈ ಮನುಸ್ಮೃತಿಯ ಹಿಂದಿರುವ ಸನಾತನಧರ್ಮವನ್ನು ವಿರೋಧಿಸುವುದೆಂದರೆ ಬ್ರಾಹ್ಮಣ ಜಾತಿಯ ಮೇಲುಗೈಯನ್ನು ವಿರೋಧಿಸುವುದು ಮತ್ತು ಸಮಾಜದ ಎಲ್ಲ ಜಾತಿಗಳ ಸಮಗ್ರ ಅಭಿವೃದ್ಧಿಗೆ ಹಾತೊರೆಯುವುದು ಎಂಬುದು ತಮಿಳುನಾಡಿನಲ್ಲಿ ಪೆರಿಯಾರ್ ವಂಶಸ್ಥರು ಎಂದು ಹೇಳಿಕೊಳ್ಳುವವರ ವಾದವಾಗಿದೆ. ಈಗ ಉದಯನಿಧಿ ಸ್ಟಾಲಿನ್ ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲು ಹೇಳಿದ್ದು ಜಾತಿ ವ್ಯವಸ್ಥೆಗೆ ವಿರುದ್ಧವಾಗಿ. ತಮಿಳುನಾಡಿನಲ್ಲಿ ಸನಾತನ ಧರ್ಮವು ಜಾತಿ ವ್ಯವಸ್ಥೆಯನ್ನು ಎತ್ತಿಹಿಡಿಯುವ ಧರ್ಮವಾಗಿದೆ, ಆದ್ದರಿಂದ ಸನಾತನ ಧರ್ಮವನ್ನು ವಿರೋಧಿಸುವುದು ಎಂದರೆ ಜಾತಿಯ ಆಧಾರದ ಮೇಲೆ ನಡೆಯುವ ಎಲ್ಲಾ ರೀತಿಯ ಶೋಷಣೆಯನ್ನು ವಿರೋಧಿಸುವುದು.

ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವುದು ಎಂದರ್ಥ. ಇದೇ ನನ್ನ ಉದ್ದೇಶ ಎನ್ನುತ್ತಾರೆ ಉದಯನಿಧಿ ಸ್ಟಾಲಿನ್. ತಮಿಳಿನ ಸ್ವಾಭಿಮಾನದ ಹೋರಾಟದ ಹಿಂದೆ ಪೆರಿಯಾರ್‌ ಅವರಿಂದ ಕರುಣಾನಿಧಿಯವರೆಗೆ ಸಾಮಾಜಿಕ-ಸಾಂಸ್ಕೃತಿಕ ಚಳವಳಿಗಳ ಹಿನ್ನೆಲೆ ಇದೆ. ಈ ಹಿನ್ನೆಲೆಯ ಉತ್ತರಾಧಿಕಾರಿಯಾಗಿ ಉದಯನಿಧಿ ಸ್ಟಾಲಿನ್ ಅವರನ್ನು ನೋಡಬೇಕು. ಕಾಂಗ್ರೆಸ್ ಸಂಸದ ಕಾರ್ತಿ ಚಿದಂಬರಂ ಕೂಡ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅದನ್ನೇ ಒತ್ತಿ ಹೇಳಿದರು.

ಆದರೆ ಉದಯನಿಧಿ ಸ್ಟಾಲಿನ್ ಅವರ ಈ ಕಾಮೆಂಟ್ ಬಿಜೆಪಿ ಮತ್ತು ಅದರ ಹಿಂದಿರುವ ಇತರ ಹಿಂದುತ್ವ ಶಕ್ತಿಗಳಿಗೆ ದೊಡ್ಡ ಅಸ್ತ್ರವಾಗಿದೆ, ಅವರು ಹೊಸದಾಗಿ ಒಗ್ಗೂಡಿರುವ ವಿರೋಧ ಪಕ್ಷಕ್ಕೆ ತಗುಲಿ ಹಾಕಲು ಉತ್ಸುಕರಾಗಿದ್ದಾರೆ. ಸಾವಿರಾರು ವರ್ಷಗಳಿಂದ ದೇಶದಲ್ಲಿ ಅಸ್ತಿತ್ವದಲ್ಲಿದ್ದ ಸಾಂಪ್ರದಾಯಿಕ ಧರ್ಮವನ್ನು ಅಳಿಸಿಹಾಕಲು ಮತ್ತು ಭಾರತೀಯರ ಸಂಸ್ಕೃತಿಯನ್ನು ನಾಶಮಾಡಲು ಯೋಚಿಸುತ್ತಿರುವ ಎಲ್ಲಾ ಶಕ್ತಿಗಳು ಈಗ ಪ್ರತಿಪಕ್ಷವಾಗಿ ರೂಪುಗೊಂಡಿವೆ ಎಂದು ಗೃಹ ಸಚಿವ ಅಮಿತ್ ಶಾ ಸೇರಿದಂತೆ ಅನೇಕ ಬಿಜೆಪಿ ನಾಯಕರು ಸಾಮೂಹಿಕ ವಾಗ್ದಾಳಿ ನಡೆಸಿದ್ದಾರೆ. ಇದು ಮುಂದೆ ರಾಜಕೀಯ ಹೋರಾಟದ ಬದಲು ಸಾಂಸ್ಕೃತಿಕ ಹೋರಾಟವಾಗಿ ಮಾರ್ಪಡುವ ಅಪಾಯವಿದೆ.

ಇದು ಸಾಂಸ್ಕೃತಿಕ ಹೋರಾಟವಾಗಿ ಬದಲಾದರೆ ಭಾರತೀಯರ ಧಾರ್ಮಿಕ ಭಾವನೆಗಳನ್ನು ಕೆರಳಿಸಿ, ವಿರೋಧ ಪಕ್ಷಗಳ ಒಗ್ಗಟ್ಟನ್ನು ಕೆಡಿಸಿ ಚುನಾವಣೆಯಲ್ಲಿ ಹೆಚ್ಚುವರಿ ಲಾಭ ಪಡೆಯಬಹುದೆಂದು ಆಡಳಿತಾರೂಢ ಬಿಜೆಪಿ ಯೋಚಿಸುತ್ತಿರುವಂತಿದೆ. ಅದರ ಪರ್ಯಾವಸಾನ ಮತ್ತು ಪರಿಣಾಮಗಳು ಹೇಗಿರುತ್ತದೆನ್ನುವುದು ತಿಳಿದಿಲ್ಲ. ಆದರೆ ಅದೆಷ್ಟೋ ಸಮಸ್ಯೆಗಳಿಂದ ನಲುಗಿ ಹೋಗಿರುವ ದೇಶ ಈಗ ಎಲ್ಲೋ ತಮಿಳುನಾಡಿನಲ್ಲಿ ಒಬ್ಬ ಯುವ ನಾಯಕ ನೀಡಿದ ಸಾಂಸ್ಕೃತಿಕ ವಿಚಾರಧಾರೆಯ ಸಣ್ಣದೊಂದು ಹೇಳಿಕೆ ಇಡೀ ಚುನಾವಣೆಯ ದಿಕ್ಕನ್ನು ಬದಲಾಯಿಸುತ್ತದೆಯೆಂದು ನಂಬಲು ಅವರು ರಾಜಕೀಯವಾಗಿ ಮುಗ್ಧರಾಗಿರಬೇಕಷ್ಟೇ.

ಮತ್ತು ಬಿಜೆಪಿ ಈ ಕುತಂತ್ರವನ್ನು ಎಷ್ಟರಮಟ್ಟಿಗೆ ಬೆಳೆಸುತ್ತದೆ, ಪ್ರತಿಪಕ್ಷಗಳು ಇದನ್ನು ಹೇಗೆ ಎದುರಿಸುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ. ಕಾಂಗ್ರೆಸ್ ಪಕ್ಷದ ನಾಯಕರು ಮತ್ತು ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಉದಯನಿಧಿ ಸ್ಟಾಲಿನ್ ಮಾಡಿರುವ ಕಾಮೆಂಟ್‌ಗಳು ಅವರ ವೈಯಕ್ತಿಕ ಮತ್ತು ಅದಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಈಗಾಗಲೇ ಹೇಳುತ್ತಿದ್ದಾರೆ. ಬಿಜೆಪಿ ಈ ಹೇಳಿಕೆಯನ್ನು ಇಟ್ಟುಕೊಂಡು ಬಹಳ ದೂರ ಹೋದರೆ ಬೆಟ್ಟ ನೆಕ್ಕಲು ಹೋಗಿ ಇದ್ದ ನಾಲಿಗೆಯನ್ನೂ ಕಳೆದುಕೊಂಡರಂತಡ ಎನ್ನುವ ಗಾದೆಯಂತಾಗಬಹುದು ಅದರ ಸ್ಥಿತಿ.

ತೆಲುಗು ಮೂಲ: ಡಾ. ವಿ ಪ್ರಸಾದ್‌ ಮೂರ್ತಿ

Related Articles

ಇತ್ತೀಚಿನ ಸುದ್ದಿಗಳು

You cannot copy content of this page