Home ಟ್ರೆಂಡಿಂಗ್ ಸುದ್ದಿ/ವೈರಲ್‌ ಸುದ್ದಿ ರವೀಶ್ ಕುಮಾರ್ ರಾಜೀನಾಮೆ ವದಂತಿಗೆ ಮಾರ್ಮಿಕ ಸ್ಪಷ್ಟನೆ

ರವೀಶ್ ಕುಮಾರ್ ರಾಜೀನಾಮೆ ವದಂತಿಗೆ ಮಾರ್ಮಿಕ ಸ್ಪಷ್ಟನೆ

0

ರಾಷ್ಟ್ರೀಯ ವಾಹಿನಿ ND TV ಯ ಶೇ.29.18 ರಷ್ಟು ಶೇರನ್ನು ಮೋದಿ ಅತ್ಯಾಪ್ತ ಉದ್ಯಮಿ ಗೌತಮ್ ಅದಾನಿ ಗ್ರೂಪ್ ಸ್ವಾಧೀನಪಡಿಸಿಕೊಂಡ ಸುದ್ದಿಯ ಬೆನ್ನಲ್ಲೇ ವಾಹಿನಿ ಮುಖ್ಯಸ್ಥ ರವೀಶ್ ಕುಮಾರ್ ಅವರ ರಾಜೀನಾಮೆ ಸುದ್ದಿಯೂ ನಿನ್ನೆಯಿಂದ ಹರಿದಾಡಿದೆ. ದೇಶದ ಸುದ್ದಿ ವಾಹಿನಿಗಳನ್ನು ಬಹುತೇಕ ಬಿಜೆಪಿ ಬೆಂಬಲಿತ ಬಲಪಂಥೀಯರು ವಶಪಡಿಸಿಕೊಳ್ಳುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಅದೇ ರೀತಿಯಲ್ಲಿ ಬಿಜೆಪಿ ಬೆಂಬಲಿತ ಹೊಸ ವಾಹಿನಿಗಳ ಸೃಷ್ಟಿ ಮಾಡುತ್ತಿರುವ ಹಿನ್ನೆಲೆಯಲ್ಲಿ ಮೋದಿ ಆಪ್ತ ಉದ್ಯಮಿ ಅದಾನಿ ಒಡೆತನದ ಸಂಸ್ಥೆ ND TV ಯ ಗರಿಷ್ಠ ಶೇರನ್ನು ವಶಪಡಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ND TV ಕೂಡಾ ಬಿಜೆಪಿ ಕಪಿಮುಷ್ಟಿಗೆ ಸಿಲುಕಿತಾ ಎಂಬ ಅನುಮಾನದ ಜೊತೆಗೆ ಅದರ ಮುಖ್ಯಸ್ಥರಾದ ರವೀಶ್ ಕುಮಾರ್ ರಾಜೀನಾಮೆ ಸುದ್ದಿ ಸಹ ನಿನ್ನೆಯಿಂದ ಹರಿದಾಡಿತ್ತು.

ಸಧ್ಯ ಈ ವದಂತಿಗೆ ಸ್ವತಃ ರವೀಶ್ ಕುಮಾರ್ ಮಾರ್ಮಿಕವಾಗಿ ಪ್ರತಿಕ್ರಯಿಸಿದ್ದಾರೆ. ಆ ಮೂಲಕ ತನ್ನ ರಾಜೀನಾಮೆ ಸುದ್ದಿ ಕೇವಲ ವದಂತಿ ಅಷ್ಟೆ, ಸತ್ಯ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ರವೀಶ್ ಕುಮಾರ್ “ದೇಶದ ಗೌರವಾನ್ವಿತ ಪ್ರಜೆಗಳೆ.. ಪ್ರಧಾನಿ ನರೇಂದ್ರ ಮೋದಿಯವರು ನನಗೆ ಸಂದರ್ಶನ ನೀಡಲು ಒಪ್ಪಿದ್ದಾರೆ ಮತ್ತು ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ಬಾಂಬೆ ಮಾವಿನ ಹಣ್ಣುಗಳೊಂದಿಗೆ ನನಗೆ ಗೇಟ್ ನಲ್ಲಿ ಕಾಯುತ್ತಿದ್ದಾರೆ ಎಂಬ ವದಂತಿಯಂತೆಯೇ ನನ್ನ ರಾಜೀನಾಮೆ ಅಂಶವಾಗಿದೆ. ಇಂತಿ ನಿಮ್ಮ ರವೀಶ್ ಕುಮಾರ್, ವಿಶ್ವದ ಮೊದಲ ಮತ್ತು ಅತ್ಯಂತ ದುಬಾರಿ ಶೂನ್ಯ TRP ಆಂಕರ್” ಎಂದು ಒಂದೇ ಕಲ್ಲೇಟಿಗೆ ಮೂರು ಹಕ್ಕಿಗಳನ್ನು ಬೀಳಿಸಿದ್ದಾರೆ.

ಸಧ್ಯ ಈ ಟ್ವಿಟ್ ಎಲ್ಲೆಡೆ ವ್ಯಾಪಕವಾಗಿ ವೈರಲ್ ಆಗುತ್ತಿದ್ದು ಕೇವಲ ಎರಡು ಗಂಟೆಗಳಲ್ಲಿ 42 ಸಾವಿರಕ್ಕೂ ಹೆಚ್ಚು ಲೈಕುಗಳು, 9,600 ಕ್ಕೂ ಹೆಚ್ಚು ಮರು ಟ್ವಿಟ್ ಗಳಾಗಿವೆ.

ಸುಮಾರು 10 ವರ್ಷಗಳಿಗೂ ಹೆಚ್ಚು ಸಮಯದಿಂದ ಪ್ರಧಾನಿ ನರೇಂದ್ರ ಮೋದಿ ಇಲ್ಲಿಯವರೆಗೂ ಯಾವುದೇ ಒಂದು ಪತ್ರಿಕಾಗೋಷ್ಠಿ ಎದುರಿಸಿಲ್ಲ. ಒಂದಷ್ಟು Scripted ಸಂದರ್ಶನಗಳನ್ನು ಹೊರತುಪಡಿಸಿ ನರೇಂದ್ರ ಮೋದಿ ನೇರಾನೇರ ಯಾವ ಪತ್ರಕರ್ತರನ್ನೂ ಹತ್ತಿರ ಬಿಟ್ಟುಕೊಳ್ಳದಷ್ಟು ದೂರವಿರಿಸಿದ್ದಾರೆ. ಅಂತಹ ಕೆಲವೇ ಯೋಜಿತ ಸಂದರ್ಶನಗಳಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನ ಕೂಡಾ ಒಂದು. ಅದರಲ್ಲಿ ಅಂತಹ ಯಾವುದೇ ಗಂಭೀರ ವಿಚಾರಗಳ ಚರ್ಚೆ ನಡೆಸದೇ, ಮೋದಿಯವರ ಇಷ್ಟ, ಕಷ್ಟಗಳ ವಿಚಾರ, ಬಾಲ್ಯದ ದಿನಗಳ ಮೆಲುಕು, ಅವರ ತಿಂಡಿ ತಿನಿಸುಗಳ ಸೇವನೆಯಂತಹ ಕ್ಷುಲ್ಲಕ ವಿಷಯಗಳ ಬಗ್ಗೆ ಚರ್ಚಿಸಿದ್ದರು. ಅದರಲ್ಲಿ ಮೋದಿಯವರು ಬಾಲ್ಯದಲ್ಲಿ ಮಾವಿನ ಹಣ್ಣು ತಿಂದ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು.

ಈ ಎಲ್ಲಾ ಅಂಶಗಳನ್ನು ಎತ್ತಿ ಪತ್ರಕರ್ತ ರವೀಶ್ ಕುಮಾರ್ ಮಾರ್ಮಿಕವಾಗಿ ಪ್ರತಿಕ್ರಯಿಸಿದ್ದಾರೆ. ಇದೊಂದು ಟ್ವೀಟ್ ಮೋದಿಯವರ ಬಳಿಯೂ ತಲುಪುತ್ತಾ, ತಲುಪಿದರೂ ಇದನ್ನೂ “ಮಾವಿನ ಹಣ್ಣಿನ” ಸಂದರ್ಶನದಷ್ಟೇ ಗಂಭೀರ ಉತ್ತರ ಸಿಗಬಹುದಾ ಎಂಬುದು ಸಧ್ಯದ ಯಕ್ಷಪ್ರಶ್ನೆ.

You cannot copy content of this page

Exit mobile version