ಹಾವೇರಿ : ರಾಜ್ಯದ ರೈತರಿಗೆ (Farmers) ಸರ್ಕಾರ (Karnataka Government) ಸಿಹಿಸುದ್ದಿ ನೀಡಿದೆ. ‘ದಾಖಲೆ ತಿದ್ದುವ, ಕಳೆದು ಹೋಗುವ, ರೈತರ ಅನಗತ್ಯ ಅಲೆದಾಟಕ್ಕೆ ಬ್ರೇಕ್ ಹಾಕಲು ಭೂ ಸುರಕ್ಷಾ (Bhusuraksha scheme) ಯೋಜನೆಯೊಂದೇ ಪರಿಹಾರ’ ಎಂದು ಸಚಿವ ಕೃಷ್ಣ ಬೈರೇಗೌಡ (Krishna Byregowda) ಹೇಳಿದರು. ಆದ್ದರಿಂದ ಇನ್ಮುಂದೆ ರೈತರು ಇನ್ನು ಕಚೇರಿಗೆ ಅಲೆಯಬೇಕಿಲ್ಲ. ಮೊಬೈಲ್ ಸಹಾಯದಿಂದ ದಾಖಲೆ ಪಡೆಯಬಹುದು.
ಹಾವೇರಿಯಲ್ಲಿ ಮಾತಾಡಿದ ಕೃಷ್ಣ ಬೈರೇಗೌಡ ‘ಮೂಲ ದಾಖಲೆ ಸ್ಕ್ಯಾನ್ ಮಾಡುವ ಮೂಲಕ ಎಲ್ಲಾ ಸಮಸ್ಯೆಗೂ ಪರಿಹಾರ ಕಂಡುಕೊಳ್ಳಲಾಗಿದೆ. ಈಗಾಗಲೇ 100 ತಾಲೂಕಲ್ಲಿ ಸ್ಕ್ಯಾನಿಂಗ್ ಕೆಲಸ ಪೂರ್ಣಗೊಂಡಿದೆ. ಮುಂದಿನ ವರ್ಷ ರಿಜಿಸ್ಟರ್ ಕಚೇರಿಯೂ ಸೇರಿ ಎಲ್ಲಾ ದಾಖಲೆ ಸ್ಕ್ಯಾನ್ ಕೆಲಸ ಪೂರ್ಣಗೊಳ್ಳುತ್ತೆ. ರಾಜ್ಯಾದ್ಯಂತ ಮೂಲ ದಾಖಲೆಗಳ 100 ಕೋಟಿ ಪುಟಗಳ ಪೈಕಿ 67 ಕೋಟಿ ಪುಟ ಸ್ಕ್ಯಾನ್ ಆಗಿದೆ’ ಎಂದು ಹೇಳಿದರು.
‘ಮೊಬೈಲ್ ಮೂಲಕ ಬೆರಳ ತುದಿಯಲ್ಲೇ ದಾಖಲೆ ಸಿಗಲಿದೆ. ಇನ್ಮುಂದೆ ದಾಖಲೆಗಾಗಿ ಸರ್ಕಾರಿ ಕಚೇರಿಗೆ ಅಲೆಯಬೇಕಿಲ್ಲ. ಆನ್ ಲೈನ್ ನಲ್ಲೇ ಮನೆಯಲ್ಲೇ ಕುಳಿತು ದಾಖಲೆ ಪಡೆಯಿರಿ’ ಎಂದು ಸಚಿವರು ಮನವಿ ಮಾಡಿದರು.
ಶೀಘ್ರವೇ ಭೂರಹಿತರಿಗೆ ಹಕ್ಕುಪತ್ರ ಭಾಗ್ಯ ಅಂದು ಇಂದಿರಾ ಗಾಂಧಿಯವರು ಭೂಮಿ ನೀಡಿದ್ದರು, ಇಂದು ನಮ್ಮ ಸರ್ಕಾರ ಹಕ್ಕು ನೀಡುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಹಾವೇರಿಯಲ್ಲಿ ಮಾತಾಡಿದ ಕೃಷ್ಣ ಬೈರೇಗೌಡ ‘ರಾಜ್ಯಾದ್ಯಂತ ಬರೋಬ್ಬರಿ 6.5 ಸಾವಿರ ದಾಖಲೆ ರಹಿತ ವಸತಿ ಪ್ರದೇಶ ಇದ್ದು, ಅಲ್ಲಿ ವಾಸಿಸುವ ಎಲ್ಲಾ ಕುಟುಂಬಗಳಿಗೂ ಹಕ್ಕುಪತ್ರ ನೀಡುವ ಮಹತ್ವದ ಕೆಲಸಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ’ ಎಂದು ಹೇಳಿದರು.
‘ಫೆಬ್ರವರಿ 14 ರಂದು ಹಾವೇರಿಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ 1 ಲಕ್ಷದ 10 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡುತ್ತೇವೆ. ಕಳೆದ ವರ್ಷದ ಏಪ್ರಿಲ್ ನಲ್ಲಿ 1 ಲಕ್ಷದ 11 ಸಾವಿರ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗಿತ್ತು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
‘ಸಮಾಜದ ಬಡವರ್ಗದ, ಸ್ವಂತ ಜಾಗ ಇಲ್ಲದ ಜನರಿಗೆ, ಅತಂತ್ರದಲ್ಲೇ ಬದುಕುತ್ತಿದ್ದವರಿಗೆ ಶಾಶ್ವತ ಪರಿಹಾರ ಕೊಡುತ್ತಿದ್ದೇವೆ’ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಮೃತ ವ್ಯಕ್ತಿಗಳ ಹೆಸರಿನಲ್ಲಿರುವ ಕೃಷಿ ಜಮೀನುಗಳನ್ನು ಅವರ ವಾರಸುದಾರರಿಗೆ ಪೌತಿಖಾತೆ ಮಾಡಿಕೊಡುವ ರಾಜ್ಯ ಸರ್ಕಾರದ ಅಭಿಯಾನಕ್ಕೆ, ಹೆಣ್ಣುಮಕ್ಕಳಿಗೆ ಪಾಲು ನೀಡಲೊಪ್ಪದ ಗಂಡುಮಕ್ಕಳ ಅಸಹಕಾರದಿಂದ ತೊಡಕಾಗಿದೆ ಎಂದು ಕೃಷ್ಣ ಬೈರೇಗೌಡೆ ಹೇಳಿದ್ದಾರೆ.
‘ಕರ್ನಾಟಕದಲ್ಲಿ 4.1 ಕೋಟಿ ಕೃಷಿ ಜಮೀನುಗಳಿವೆ. ನಮ್ಮ ಸರ್ಕಾರ ಬಂದ ನಂತರ ಕೃಷಿ ಜಮೀನಿನ ದಾಖಲೆಗಳಿಗೆ ಆಧಾರ್ ಜೋಡಣೆ ಕಾರ್ಯ ಆರಂಭಿಸಲಾಯಿತು. ಆಗ 49.06 ಲಕ್ಷ ಕೃಷಿ ಜಮೀನುಗಳು ಇನ್ನೂ ಮೃತಪಟ್ಟ ವ್ಯಕ್ತಿಗಳ ಹೆಸರಿನಲ್ಲಿ ಇರುವುದು ಪತ್ತೆಯಾಯಿತು. ಅದನ್ನು ನೈಜ ವಾರಸುದಾರರಿಗೆ ವರ್ಗಾಯಿಸುವ ಸಲುವಾಗಿ ಸರ್ಕಾರದ ವತಿಯಿಂದಲೇ ಪೌತಿ ಖಾತೆ ಮಾಡಿಕೊಡುವ ಅಭಿಯಾನ ಆರಂಭಿಸಿದೆವು. ಆದರೆ ಈಗ ಅದಕ್ಕೆ ತೊಡಕು ಎದುರಾಗಿದೆ’ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದ್ದಾರೆ.
‘ಮೃತರ ಹೆಸರಿನಲ್ಲೇ ಖಾತೆ ಇದ್ದರೆ ಜಮೀನಿನ ಮೇಲೆ ಸಾಲ ಮತ್ತು ಸರ್ಕಾರಿ ಸವಲತ್ತು ಸಿಗುವುದಿಲ್ಲ. ಹೀಗಿದ್ದೂ ಹಲವು ಕುಟುಂಬಗಳು ಪೌತಿ ಖಾತೆಗೆ ಒಲವು ತೋರುತ್ತಿಲ್ಲ’ ಎಂದು ಸಚಿವರು ಹೇಳಿದ್ದಾರೆ
