Home ಬ್ರೇಕಿಂಗ್ ಸುದ್ದಿ ತುಮಕೂರು ವಿವಿ ಕುಲಸಚಿವರ ರಾಜೀನಾಮೆ ; ರಾಜೀನಾಮೆಗೆ ಕಾರಣವಾಯ್ತಾ ಆ ಒಂದು ವರದಿ?

ತುಮಕೂರು ವಿವಿ ಕುಲಸಚಿವರ ರಾಜೀನಾಮೆ ; ರಾಜೀನಾಮೆಗೆ ಕಾರಣವಾಯ್ತಾ ಆ ಒಂದು ವರದಿ?

0

ತುಮಕೂರು ವಿಶ್ವವಿದ್ಯಾಲಯದ ಕುಲಸಚಿವರಾದ ಪ್ರೊ.ಕೆ.ಶಿವಚಿತ್ತಪ್ಪ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜೀನಾಮೆಗೆ ಅನಾರೋಗ್ಯದ ಕಾರಣ ನೀಡಿದರೂ ವಿಶ್ವವಿದ್ಯಾಲಯದ ಅಡಿಯಲ್ಲಿ ಕಳೆದ ಎರಡು ದಿನಗಳಲ್ಲಿ ನಡೆದ ಕೆಲವು ಅಸಹಜ ಬೆಳವಣಿಗೆಯಿಂದ ಮನನೊಂದು ಈ ನಿರ್ಧಾರ ತಗೆದುಕೊಂಡಿದ್ದಾರೆ ಎಂದು ಕೆಲವರು ಮಾತನಾಡಿಕೊಂಡಿದ್ದಾರೆ.

ಗುರುವಾರದ ದಿನ ತುಮಕೂರು ವಿವಿ ಮತ್ತು ಮಾನವ ಕಳ್ಳಸಾಗಣೆ ವಿರೋಧಿ ಸಂಘ (Anti Human trafficking Club) ಆಯೋಜಿಸಿದ್ದ ‘ನನ್ನ ಸಾಹಿತ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಮತ್ತು ಮಾನವ ಹಕ್ಕುಗಳ ಜಿಜ್ಞಾಸೆ’ ವಿಷಯದ ಅಡಿಯಲ್ಲಿ ಉಪನ್ಯಾಸ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ಕುಲಸಚಿವರಾದ ಪ್ರೊ.ಕೆ.ಶಿವಚಿತ್ತಪ್ಪರವರು ಮಾತನಾಡಿದ್ದಾರೆ ಎನ್ನಲಾದ ಕೆಲವು ವಾಕ್ಯಗಳು ಶುಕ್ರವಾರ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹೆಚ್ಚು ಚರ್ಚಿತ ವಿಚಾರವಾಗಿದೆ.

ಸರ್ಕಾರದ ಅಡಿಯಲ್ಲಿ ಮುಂದಿನ ಕುಲಸಚಿವರ ಆಯ್ಕೆ ನಡೆದಿದ್ದು, ಆ ಹಿನ್ನೆಲೆಯಲ್ಲಿ ಇದು ನನ್ನ ಕೊನೆಯ ಉಪನ್ಯಾಸ ಭಾಷಣ ಎಂಬುದನ್ನು ಹೇಳಿದ ಕುಲಸಚಿವರು ನಂತರ ವಿಷಯದ ಅಡಿಯಲ್ಲಿ ಒಂದಷ್ಟು ಮಾತನಾಡಿದ್ದರು. ಉಪನ್ಯಾಸದ ಸಂದರ್ಭದಲ್ಲಿ ಪ್ಯೊ.ಕೆ.ಶಿವಚಿತ್ತಪ್ಪನವರು ಆ ಮಾತುಗಳ ಕೆಲವು ಅಂಶಗಳು ಕನ್ನಡ ದಿನಪತ್ರಿಕೆಯೊಂದರಲ್ಲಿ ‘ಕಾಲಂ ಸುದ್ದಿ’ಯಾಗಿತ್ತು. ಅದರಲ್ಲಿ ಪ್ರಮುಖವಾಗಿ ಲಿಂಗ ತಾರತಮ್ಯದ ಅಡಿಯಲ್ಲಿ ಆಡಿದ ಮಾತು ಸಧ್ಯ ಚರ್ಚಿತ ವಿಚಾರವಾಗಿದೆ.

ತಮ್ಮ ಉಪನ್ಯಾಸದ ಸಂದರ್ಭದಲ್ಲಿ ಪ್ರೊ.ಶಿವಚಿತ್ತಪ್ಪನವರು ‘ಹೆಣ್ಣಿಗೆ ಹೆಣ್ಣೇ ಶತ್ರು.. ಋಷಿ ಮೂಲ ನದಿ ಮೂಲ ಹುಡುಕಬಹುದು… ಹೆಣ್ಣಿನ ಮೂಲ ಹುಡುಕೋದು ಕಷ್ಟ..’ ಎಂಬಂತಹ ಮಾತುಗಳನ್ನು ಆಡಿದ್ದರು. ಇಂತಹ ಅಸೂಕ್ಷ್ಮ ವಿಚಾರಗಳು ಎಲ್ಲ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಎದುರೇ ಪ್ರಸ್ತಾಪಿಸಿದ್ದು ಎಷ್ಟರ ಮಟ್ಟಿಗೆ ಸರಿ? ಮುಂದಿನ ಪ್ರಜೆಗಳನ್ನು ರೂಪಿಸುವ ವಿಶ್ವವಿದ್ಯಾಲಯದ ಉಪನ್ಯಾಸ ಭಾಷಣದಲ್ಲಿಯೇ ಇಂತಹ ಮಾತುಗಳು ಬಂದರೆ ಅದ್ಯಾವ ನೈತಿಕ ಮೌಲ್ಯಗಳನ್ನು ಯೂನಿವರ್ಸಿಟಿ ದರ್ಜೆಯ ಪ್ರೊಫೆಸರ್ ಗಳು ಕೊಡುವುದು ಎಂಬುದು ಪ್ರಮುಖ ವಿಚಾರ.

ಇದರ ಜೊತೆಗೆ ಪ್ರೊ.ಶಿವಚಿತ್ತಪ್ಪನವರು ಮುಂದಿನ ಕುಲಸಚಿವರ ಬಗ್ಗೆ ಮತ್ತು ವಿಷಯದ ಅಡಿಯಲ್ಲಿ ಹೆಣ್ಣಿನ ಬಗ್ಗೆ ಆಡಿದ್ದಾರೆ ಎನ್ನಲಾದ ಕೆಲವು ಮಾತುಗಳ ಬಗ್ಗೆ ದಿನಪತ್ರಿಕೆ ವರದಿ ಹಿನ್ನೆಲೆಯಲ್ಲಿ ಶುಕ್ರವಾರ ವಿವಿ ಆಡಳಿತ ಮಂಡಳಿ ವ್ಯಾಪ್ತಿಯಲ್ಲಿ ಹೆಚ್ಚು ಚರ್ಚೆಗೆ ಬಂದಿತ್ತು.

ಕೆಲವು ಮಹಿಳಾ ಸಹೋದ್ಯೋಗಿಗಳು ಮತ್ತು ವಿಶೇಷ ಉಪನ್ಯಾಸದ ಸಂಪನ್ಮೂಲ ವ್ಯಕ್ತಿ ಅವರ ಅಭಿಪ್ರಾಯದಂತೆ ಪ್ರೊ.ಶಿವಚಿತ್ತಪ್ಪನವರ ಮಾತುಗಳು ಪತ್ರಿಕೆಯಲ್ಲಿ ಬಂದಷ್ಟು ಅಸೂಕ್ಷ್ಮವಾಗಿ ಇರಲಿಲ್ಲ. ಪತ್ರಿಕೆ ಇದನ್ನು ತಿರುಚಿ ವರದಿ ಮಾಡಿದೆ. ವಿಷಯದ ಅಡಿಯಲ್ಲಿ ಅವರು ಆಡಿದ ಮಾತುಗಳು ತಿರುಚಲ್ಪಟ್ಟಿವೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಇವರೆಲ್ಲ ಶಿವಚಿತ್ತಪ್ಪನವರ ಮಾತುಗಳು ಅ-ಸೂಕ್ಷ್ಮವಾಗಿಲ್ಲ ಎಂದು ಹೇಳಿದ್ದರೂ, ಸರಕಾರವೇ ಕೆಎಎಸ್ /ಐಎಎಸ್ ಅಧಿಕಾರಿಗಳನ್ನು  ವಿವಿ ಕುಲಸಚಿವರನ್ನಾಗಿ ನೇಮಕ ಮಾಡುವ ನಿರ್ಧಾರ ಕೈಗೊಂಡಿರುವಾಗ ಸರಕಾರದಿಂದ ನಿಯೋಜಿತರಾದ ಒಬ್ಬ ಅಧಿಕಾರಿ ಸರಕಾರದ ತೀರ್ಮಾನವನ್ನು ವ್ಯಂಗ್ಯ ಮಾಡಿದ್ದು ಅನುಚಿತವಾದುದಾಗಿತ್ತು ಎಂಬ ಮಾತುಗಳು ಕೆಲ ಪ್ರತ್ಯಕ್ಷದರ್ಶಿಗಳಿಂದ ಕೇಳಿ ಬರುತ್ತಿವೆ.

ಸರಕಾರ ಕೊರಟಗೆರೆ ತಹಸೀಲ್ದಾರ್ ನಾಹಿದಾ ಜಮ್ ಜಮ್ ಅವರನ್ನು ಪದೋನ್ನತಿಗೊಳಿಸಿ ತುಮಕೂರು ವಿವಿ ಆಡಳಿತ ಕ್ಕೆ ವರ್ಗಾವಣೆ ಮಾಡಿದೆ.‌ ಅವರು ಬಂದು ಕುಲಪತಿ ಮತ್ತು ಕುಲಸಚಿವ ರನ್ನು ಭೇಟಿ ಮಾಡಿ ಜನವರಿಯಲ್ಲಿ ಅಧಿಕಾರ ಸ್ವೀಕರಿಸುವುದಾಗಿಯೂ ಹೇಳಿದ್ದರು. ಇಷ್ಟಾಗಿಯೂ ಶಿವಚಿತ್ತಪ್ಪ ಅವರು ತಹಸೀಲ್ದಾರ್ ಒಬ್ಬರನ್ನು ಸರಕಾರ ನೇಮಕಮಾಡಿದೆ. ಇನ್ನು ಅವರು ಬಂದು ಇಲ್ಲಿ ಪಹಣಿ ಪಟ್ಟೆ ಮಾಡಿಕೊಡುತ್ತಾರೋ ಎಂದು ಅವರ ಹೆಸರನ್ನು ಉಲ್ಲೇಖಿಸದೇ  ಹೇಳಿದ್ದರೆಂಬುದಾಗಿ ತಿಳಿದು ಬರುತ್ತದೆ.

ಆದರೆ ಕನ್ನಡದ ದಿನಪತ್ರಿಕೆಯಲ್ಲಿ ಬಂದ ವರದಿ ಹಿನ್ನೆಲೆಯಲ್ಲಿ ಬೇಸತ್ತು ಪ್ರೊ.ಶಿವಚಿತ್ತಪ್ಪನವರು ರಾಜೀನಾಮೆ ನೀಡಿದ್ದಾರೆ ಎಂಬುದು ಸಧ್ಯ ತುಮಕೂರು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಹೆಚ್ಚು ಚರ್ಚೆಯ ವಿಚಾರವಾಗಿದೆ.

You cannot copy content of this page

Exit mobile version