ತೆಲುಗು ಸಿನಿಮಾ ಕಲಾವಿದರಿಗೆ ನೀಡುತ್ತಿದ್ದ ‘ನಂದಿ ಪ್ರಶಸ್ತಿ’ ಬದಲು ‘ಗದ್ದರ್ ಅವಾರ್ಡ್’ ನೀಡಲಾಗುವುದು ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಘೋಷಣೆ ಮಾಡಿದ್ದಾರೆ.
ಹೈದರಾಬಾದ್ನ ರವೀಂದ್ರ ಭಾರತಿಯಲ್ಲಿ ಆಯೋಜಿಸಿದ್ದ ಗದ್ದರ್ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ರೇವಂತ್ ರೆಡ್ಡಿ ಚಲನಚಿತ್ರ ಕಲಾವಿದರಿಗೆ ನಂದಿ ಪ್ರಶಸ್ತಿಯನ್ನು ತೆಲಂಗಾಣ ಸರ್ಕಾರ ಪುನಃ ಪ್ರಾರಂಭಿಸಬೇಕೆಂದು ಕೇಳಿಕೊಂಡ ಹಿನ್ನಲೆಯಲ್ಲಿ, ನಂದಿ ಪ್ರಶಸ್ತಿಯ ಹೆಸರನ್ನು ಗದ್ದರ್ ಪ್ರಶಸ್ತಿ ಎಂದು ಬದಲಾಯಿಸಿ ನೀಡಲಾಗುವುದು ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದಲ್ಲಿ ತೆಲಂಗಾಣ ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಉಪಸ್ಥಿತರಿದ್ದರು.
“ತನ್ನ ಮಾತೇ ಸರ್ಕಾರದ ಆದೇಶ. ಆದಷ್ಟು ಬೇಗ ಈ ಕುರಿತಂತೆ ಸರ್ಕಾರದಿಂದ ಅಧಿಕೃತ ಅದೇಶ ಹೊರಡಿಸಲಾಗುವುದು. ಮುಂದಿನ ವರ್ಷದಿಂದ ಗದ್ದರ್ ಜಯಂತಿಯಂದು ಈ ಪ್ರಶಸ್ತಿಗಳನ್ನು ನೀಡಲಾಗುವುದು. ರಾಜ್ಯ ಸರ್ಕಾರದ ವತಿಯಿಂದ ಕವಿಗಳು, ಕಲಾವಿದರು ಹಾಗೂ ಚಿತ್ರರಂಗದ ಕಲಾವಿದರಿಗೆ ಗದ್ದರ್ ಪ್ರಶಸ್ತಿ ಪ್ರದಾನ ಮಾಡಲಾಗುವುದು,” ಎಂದು ಹೇಳಿದ್ದಾರೆ.
“ತೆಲಂಗಾಣ ರಾಜ್ಯಕ್ಕಾಗಿ ಚಳವಳಿ ಆರಂಭಿಸಿದ ವ್ಯಕ್ತಿ ಗದ್ದರ್ ಸಮಾಜವನ್ನು ಜಾಗೃತಗೊಳಿಸಲು ಧ್ವನಿ ಎತ್ತಿದ ಮಹಾನ್ ವ್ಯಕ್ತಿ, ಜನಪರ ಸರ್ಕಾರ ರಚಿಸುವ ಗದ್ದರಣ್ಣನವರ ಮಾತು ನಮಗೆ ಸ್ಪೂರ್ತಿ ನೀಡಿದೆ,” ಎಂದು ಹೇಳಿದ್ದಾರೆ.
ಗದ್ದರ್ ಪ್ರತಿಮೆ ನಿರ್ಮಾಣಕ್ಕೆ ಹಸಿರು ನಿಶಾನೆ
ಸಾರ್ವಜನಿಕ ಯುದ್ಧನೌಕೆ, ಕ್ರಾಂತಿಕಾರಿ ಕವಿ, ಸಾರ್ವಜನಿಕ ಗಾಯಕ ಗದ್ದರ್ ಪ್ರತಿಮೆ ಸ್ಥಾಪಿಸಲು ಸಿಎಂ ರೇವಂತ್ ರೆಡ್ಡಿ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಗದ್ದರ್ ಪ್ರತಿಮೆ ಸ್ಥಾಪಿಸುವುದಾಗಿ ಚುನಾವಣಾ ಸಂದರ್ಭದಲ್ಲಿ ರೇವಂತ್ ರೆಡ್ಡಿ ಭರವಸೆ ನೀಡಿದ್ದರು. ಇದಕ್ಕಾಗಿ ಸಂಗಾರೆಡ್ಡಿ ಜಿಲ್ಲೆಯ ತೇಲಾಪುರ್ ಪುರಸಭೆಯ ನಿರ್ಣಯವನ್ನು ಸರ್ಕಾರ ಅನುಮೋದಿಸಿದ್ದು, ಮೂರ್ತಿ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳ ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಈ ನಿರ್ಧಾರಕ್ಕೆ ರಾಜ್ಯದ ಪ್ರಗತಿಪರ ದಲಿತ ಪರ ಸಂಘಟನೆಗಳು ಸಂತಸವನ್ನು ವ್ಯಕ್ತಪಡಿಸಿವೆ.