ಬೆಂಗಳೂರು: ಪೊಲೀಸ್ ಸಬ್ಇನ್ಸ್ಪೆಕ್ಟರ್ (ಪಿಎಸ್ಐ) ನೇಮಕಾತಿ ಪರೀಕ್ಷೆ ಹಗರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ಹೇಳಿಕೆಯಂತೆ ಹಗರಣದಲ್ಲಿ ಭಾಗಿಯಾಗಿರುವುದು ಯಾವ ಮಾಜಿ ಮುಖ್ಯಮಂತ್ರಿ ಮಗ ಎನ್ನುವುದು ಜನರಿಗೆ ತಿಳಿಯ ಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರು ಹೇಳಿರುವ ಹೇಳಿಕೆಯಂತೆ, ಹಗರಣದಲ್ಲಿ ಭಾಗಿಯಾಗಿರುವುದು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಅವರ ಮಗನಾ, ಸಿದ್ದರಾಮಯ್ಯ ಮಗನಾ ಅಥವ ದೇವೇಗೌಡರ ಮಗನಾ ಎಂದು ಜನರಿಗೆ ಸತ್ಯಾ ತಿಳಿಯಬೇಕು ಎಂದು ಹೇಳಿದರು.
ಹೀಗಾಗಲೇ ನೇಮಕಾತಿ ಹಗರಣದ ವಿಷಯದಲ್ಲಿ ನೇಮಕಾತಿ ವಿಭಾಗದ ಮುಖ್ಯಸ್ಥರಾದ ಅಮೃತ ಪೌಲ್ ಬಂಧನವಾಗಿದ್ದು, ಈ ಹಗರಣದಲ್ಲಿ ಇನ್ನು ಯಾರೇಲ್ಲಾ ಭಾಗಿಯಾಗಿದ್ದಾರೆ ಎಂದು ತಿಳಿಯಬೇಕಾದರೆ ಅಮೃತ ಪೌಲ್ ಅವರಿಗೆ ಮಂಪರು ಪರೀಕ್ಷೆ ನಡಿಸಬೇಕು. 346ರ ಅಡಿಯಲ್ಲಿ ಅವರ ಹೇಳಿಕೆ ದಾಖಲಿಸಬೇಕು. ಆಗ ಈ ಹಗರಣದಲ್ಲಿ ಯಾರೇಲ್ಲ ರಾಜಕಾರಣಿಗಳು ಭಾಗಿಯಾಗಿದ್ದಾರೆ ಎನ್ನುವುದು ತಿಳಿಯುತ್ತದೆ ಎಂದು ಸಿದ್ದರಾಮಯ್ಯ ಗುಡುಗಿದರು.