ಚಿಕ್ಕಬಳ್ಳಾಪುರ: ಇಂದು ಬೆಳ್ಳಂಬೆಳಗ್ಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ರಸ್ತೆ ಅಪಘಾತಕ್ಕೆ ಆರು ಮಂದಿ ಬಲಿಯಾಗಿದ್ದಾರೆ. ರಸ್ತೆಯಲ್ಲಿ ಕವಿದಿದ್ದ ದಟ್ಟ ಮಂಜು ಅಪಘಾತಕ್ಕೆ ಕಾರಣವಾಗಿದ್ದು, ವಾಹನ ಪೂರ್ತಿಯಾಗಿ ನುಜ್ಜುಗುಜ್ಜಾಗಿದೆ.
ಚಿಕ್ಕಬಳ್ಳಾಪುದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಚಿತ್ರಾವತಿ ಬಳಿ ಅಪಘಾತ ನಡೆದಿದೆ. ಅಪಘಾತಕ್ಕೀಡಾದ ವಾಹನದಲ್ಲಿ ಒಟ್ಟು 13 ಜನರಿದ್ದರು. ಅದರಲ್ಲಿ 6 ಜನರು ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೂ 7 ಜನರ ಪರಿಸ್ಥಿತಿ ಗಂಭೀರವಾಗಿದೆ.
ಬೆಳಗಿನ ಜಾವ ವಿಪರೀತ ಮಂಜು ಸುರಿದಿದ್ದು ಒಂದಡಿ ದೂರದ ವಸ್ತುಗಳು ಸಹ ಕಾಣದ ಪರಿಸ್ಥಿತಿ ಏರ್ಪಾಡಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ವಾಹನ ಓಡಿಸಬಾರದೆಂದು ಪೊಲೀಶ್ ಸೂಚನೆಯಿದ್ದರೂ ವಾಹನ ಚಲಾಯಿಸಿರುವುದು ಈ ದುರಂತಕ್ಕೆ ಕಾರಣವಾಗಿದೆ.
ವಾಹನವು ಆಂಧ್ರದಿಂದ ಕಾರ್ನಾಟಕದ ಕಡೆಗೆ ಬರುತ್ತಿತ್ತು. ಗಂಭೀರವಾಗಿ ಗಾಯಗೊಂಡಿರುವ ಉಳಿದ ಪ್ರಯಾಣಿಕರನ್ನು ಮುಂದಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸಾಗಿಸಲಾಗಿದೆ. ಮೃತರ ವಿವರಗಳು ಇನ್ನಷ್ಟೇ ಪತ್ತೆಯಾಗಬೇಕಿದ್ದು, ಚಿಕ್ಕಬಳ್ಳಾಪುರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.