ರೂಹ್ ಅಫ್ಜಾ ವಿವಾದ: ಬಾಬಾ ರಾಮದೇವಗೆ ದೆಹಲಿ ಹೈಕೋರ್ಟ್ ತರಾಟೆ

ಯೋಗ ಗುರು ಮತ್ತು ಪತಂಜಲಿ ಸಂಸ್ಥಾಪಕ ಬಾಬಾ ರಾಮದೇವ್ ಅವರಿಗೆ ದೆಹಲಿ ಹೈಕೋರ್ಟ್ ಮಂಗಳವಾರ ತೀವ್ರ ತರಾಟೆಗೆ ಒಳಪಡಿಸಿದೆ.

ಹಮ್‌ದರ್ದ್‌ ಸಂಸ್ಥೆಯ ಜನಪ್ರಿಯ ಪಾನೀಯ ರೂಹ್ ಅಫ್ಜಾವನ್ನು ‘ಶರಬತ್ ಜಿಹಾದ್’ ಎಂದು ಕರೆದು ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕೆ ನ್ಯಾಯಮೂರ್ತಿ ಅಮಿತ್ ಬನ್ಸಲ್ ಅವರ ನೇತೃತ್ವದ ಪೀಠವು ಆಕ್ಷೇಪ ವ್ಯಕ್ತಪಡಿಸಿತು. ಇದೊಂದು “ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತವುಂಟುಮಾಡುವ” ಮತ್ತು “ರಕ್ಷಣೆಗೆ ಯೋಗ್ಯವಲ್ಲದ” ಹೇಳಿಕೆ ಎಂದು ನ್ಯಾಯಾಲಯ ತಿಳಿಸಿತು.

ರಾಮದೇವ್ ಅವರು ಏಪ್ರಿಲ್ 3ರಂದು ಪತಂಜಲಿಯ ಗುಲಾಬ್ ಶರಬತ್‌ನ ಪ್ರಚಾರದ ವೇಳೆ, ರೂಹ್ ಅಫ್ಜಾದ ಆದಾಯವನ್ನು ಮಸೀದಿಗಳು ಮತ್ತು ಮದರಸಾಗಳ ನಿರ್ಮಾಣಕ್ಕೆ ಬಳಸಲಾಗುತ್ತದೆ ಎಂದು ಆರೋಪಿಸಿದ್ದರು.

ಹಮ್‌ದರ್ದ್‌ ಲ್ಯಾಬೋರೇಟರೀಸ್ ಈ ಹೇಳಿಕೆಯನ್ನು ಧರ್ಮ ವಿರೋಧಿ ಮತ್ತು ಸಾಮುದಾಯಿಕ ವಿಭಜನೆಗೆ ಕಾರಣವಾಗುವ “ದ್ವೇಷದ ಭಾಷಣ” ಎಂದು ಟೀಕಿಸಿ, ದೆಹಲಿ ಹೈಕೋರ್ಟ್‌ಗೆ ಮೊರೆ ಹೋಯಿತು. ಹಂಡರ್ಡ್‌ನ ಪರ ವಕೀಲ ಮುಕುಲ್ ರೋಹಟಗಿ, ಈ ಹೇಳಿಕೆ ಕೇವಲ ಉತ್ಪನ್ನದ ಕೆಡುಕನ್ನು ಮೀರಿ, ಸಾಮುದಾಯಿಕ ವಿಭಜನೆಯನ್ನು ಉತ್ತೇಜಿಸುತ್ತದೆ ಎಂದು ವಾದಿಸಿದರು.

ನ್ಯಾಯಾಲಯದ ತೀವ್ರ ಆಕ್ಷೇಪದ ಬಳಿಕ, ರಾಮದೇವ್ ಅವರ ವಕೀಲ ರಾಜೀವ್ ನಯ್ಯರ್, ವಿವಾದಾತ್ಮಕ ವೀಡಿಯೊಗಳು ಮತ್ತು ಸಾಮಾಜಿಕ ಜಾಲತಾಣದ ಪೋಸ್ಟ್‌ಗಳನ್ನು ತಕ್ಷಣ ತೆಗೆದುಹಾಕುವುದಾಗಿ ಭರವಸೆ ನೀಡಿದರು.

ರಾಮದೇವ್ ಭವಿಷ್ಯದಲ್ಲಿ ಇಂತಹ ಹೇಳಿಕೆಗಳನ್ನು ನೀಡುವುದಿಲ್ಲ ಎಂದು ಐದು ದಿನಗಳ ಒಳಗೆ ಒಪ್ಪಿಗೆ ಪತ್ರ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತು.

ಈ ಘಟನೆಯಿಂದ ರಾಮದೇವ್ ಮತ್ತು ಪತಂಜಲಿಗೆ ಮತ್ತೊಂದು ಕಾನೂನು ಸಂಕಷ್ಟ ಎದುರಾಗಿದ್ದು, ಈ ಹಿಂದೆ ಸುಪ್ರೀಂ ಕೋರ್ಟ್‌ನಲ್ಲಿ ತಪ್ಪುದಾರಿಗೆಳೆಯುವ ಜಾಹೀರಾತುಗಳಿಗೆ ಸಂಬಂಧಿಸಿದಂತೆ ರಾಮದೇವ್ ಕ್ಷಮೆಯಾಚಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು