ದೆಹಲಿ: ಶಿಕ್ಷಣ ವ್ಯವಸ್ಥೆಯು ಸಂಪೂರ್ಣವಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ನಿಯಂತ್ರಣಕ್ಕೆ ಸಿಕ್ಕರೆ ದೇಶ ನಾಶವಾಗುತ್ತದೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಟೀಕಿಸಿದ್ದಾರೆ.
ಸೋಮವಾರ ದೆಹಲಿಯ ಜಂತರ್ ಮಂತರ್ನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯಲ್ಲಿ ರಾಹುಲ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಒಂದು ಸಂಘಟನೆಯು ದೇಶದ ಭವಿಷ್ಯ ಮತ್ತು ಅದರ ಶಿಕ್ಷಣ ವ್ಯವಸ್ಥೆಯನ್ನು ನಾಶಮಾಡಲು ಪ್ರಯತ್ನಿಸುತ್ತಿದೆ ಅದರ ಹೆಸರು ರಾಷ್ಟ್ರೀಯ ಸ್ವಯಂಸೇವಕ ಸಂಘ” ಎಂದು ಹೇಳಿದರು.
ಆ ಸಂಗಟನೆ ಪ್ರಸ್ತುತ ಶಿಕ್ಷಣ ವ್ಯವಸ್ಥೆಯ ಮೇಲೆ ನಿಧಾನವಾಗಿ ಹಿಡಿತ ಸಾಧಿಸುತ್ತಿದೆ. ಆರ್ಎಸ್ಎಸ್ ಶಿಕ್ಷಣವನ್ನು ಸಂಪೂರ್ಣವಾಗಿ ವಹಿಸಿಕೊಂಡರೆ, ಒಬ್ಬ ವ್ಯಕ್ತಿಗೂ ಉದ್ಯೋಗ ಸಿಗುವುದಿಲ್ಲ. ದೇಶ ನಾಶವಾಗುತ್ತದೆ. ದೇಶದಲ್ಲಿರುವ ಹೆಚ್ಚಿನ ವಿಶ್ವವಿದ್ಯಾಲಯಗಳ ಉಪಕುಲಪತಿಗಳು ಆರ್ಎಸ್ಎಸ್ನಿಂದ ಬಂದವರು ಎಂದು ಅವರು ಆರೋಪಿಸಿದರು.
ಮುಂದೆ, ರಾಜ್ಯ ವಿಶ್ವವಿದ್ಯಾಲಯಗಳಲ್ಲಿಯೂ ಸಹ, ಆರ್ಎಸ್ಎಸ್ನಿಂದ ನಾಮನಿರ್ದೇಶನಗೊಂಡವರನ್ನು ಮಾತ್ರ ಕುಲಪತಿಗಳಾಗಿ ನೇಮಿಸಲಾಗುತ್ತದೆ. ನಾವು ಇದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು. ಪ್ರಧಾನಿ ಮೋದಿ ನಿರುದ್ಯೋಗ ಮತ್ತು ಹಣದುಬ್ಬರದ ಬಗ್ಗೆ ಮಾತನಾಡುವುದಿಲ್ಲ. ದೇಶದ ಎಲ್ಲಾ ಸಂಪನ್ಮೂಲಗಳನ್ನು ಅಂಬಾನಿ, ಅದಾನಿ ಮತ್ತು ಆರ್ಎಸ್ಎಸ್ಗೆ ಹಸ್ತಾಂತರಿಸುವುದು ಅವರ ನೀತಿಯಾಗಿದೆ ಎಂದು ರಾಹುಲ್ ಟೀಕಿಸಿದರು.