ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಭಾನುವಾರ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಟು ವಾಗ್ದಾಳಿ ನಡೆಸಿದ್ದಾರೆ. ಜುಲೈ 20 ರಂದು ದೆಹಲಿಯಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯ ವೇಳೆ ವಿದ್ಯಾರ್ಥಿಗಳ ಮೇಲೆ ನಡೆದ ಪೋಲಿಸ್ ದೌರ್ಜನ್ಯಕ್ಕಾಗಿ ಕ್ಷಮೆ ಯಾಚಿಸುವ ಬದಲು, ಅವರು “ಕ್ಷಮಾದಾನ ಹಂಚುತ್ತಿದ್ದಾರೆ” ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಪ್ರಯಾಗ್ರಾಜ್ನಲ್ಲಿ ನಡೆದ ‘ಛಾತ್ರೋಂ ಕೀ ಗೂಂಜ್’ (ವಿದ್ಯಾರ್ಥಿಗಳ ಧ್ವನಿ) ಕಾರ್ಯಕ್ರಮದ ಮರುದಿನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿರುವ ರಾಹುಲ್ ಗಾಂಧಿ, ವಿದ್ಯಾರ್ಥಿಗಳು ದೇಶದ ಬೆಳಕು ಹಾಗೂ ತಾವು “ಸಂಪೂರ್ಣ ಶಕ್ತಿಯೊಂದಿಗೆ” ಅವರ ಪರವಾಗಿ ನಿಲ್ಲುವುದಾಗಿ ಹೇಳಿದ್ದಾರೆ.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಎಕ್ಸ್ (X) ನಲ್ಲಿ, ” ‘ಈಗ ನನ್ನ ಬಳಿ ಯಾವುದೇ ದಾರಿಯಿಲ್ಲ’ – ನಿನ್ನೆ ಪ್ರಯಾಗ್ರಾಜ್ನಲ್ಲಿ ವಿದ್ಯಾರ್ಥಿಯೊಬ್ಬ ನನಗೆ ಹೇಳಿದ ಮಾತಿದು. ವರ್ಷಗಳ ಶ್ರಮದ ತಯಾರಿ, ಮನೆ-ಜಮೀನು ಮಾರಾಟ ಮಾಡಿ ತಂದ ಹಣ, ತಂದೆ-ತಾಯಿಯ ಸಾಲ… ಇಷ್ಟೆಲ್ಲಾ ಆದ ಮೇಲೆಯೂ ಕೈಯಲ್ಲಿ ಏನೂ ಇಲ್ಲ. ಇದು ಆ ವಿದ್ಯಾರ್ಥಿಯ ಸೋಲಲ್ಲ, ಆತನ ಕಠಿಣ ಶ್ರಮಕ್ಕೆ ಬೆಲೆ ನೀಡಲು ನಿರಾಕರಿಸಿದ ಆಡಳಿತ ವ್ಯವಸ್ಥೆಯ ಸೋಲು” ಎಂದು ಬರೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಮುಂದುವರಿದು, “ಘಟನೆ ನಡೆದು ಹದಿಮೂರು ದಿನಗಳು ಕಳೆದಿವೆ. ಗೃಹ ಸಚಿವ ಅಮಿತ್ ಶಾ ಅವರಿಂದ ಒಂದೇ ಒಂದು ಮಾತು ಹೊರಬಂದಿಲ್ಲ. ಮೋದಿಯವರು ಕ್ಷಮೆ ಕೇಳುವ ಬದಲು ಕ್ಷಮಾದಾನವನ್ನು ಹಂಚುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ.
“ಅಮಿತ್ ಶಾ ಅವರೇ, ನಾವು ಪ್ರಶ್ನಿಸುವುದನ್ನು ನಿಲ್ಲಿಸುತ್ತೇವೆ ಎಂದು ಭಾವಿಸಬೇಡಿ. ರಾಜಧಾನಿಯ ರಸ್ತೆಗಳಲ್ಲಿ ಮಕ್ಕಳ ಮೇಲೆ ಲಾಠಿ ಮತ್ತು ಪೆಲೆಟ್ಗಳನ್ನು ಬಳಸಲಾಯಿತು, ಆದರೂ ನೀವು ಒಂದೇ ಒಂದು ಮಾತಾಡಲಿಲ್ಲ. ಇಂದು ಇಲ್ಲವೇ ನಾಳೆ, ಇದಕ್ಕೆ ಸಂಬಂಧಿಸಿದಂತೆ ನೀವು ಉತ್ತರಿಸಲೇಬೇಕಾಗುತ್ತದೆ. ವಿದ್ಯಾರ್ಥಿಗಳು ದೇಶದ ಬೆಳಕು, ಮತ್ತು ನಾನು ಅವರ ಸಂಪೂರ್ಣ ಶಕ್ತಿಯಾಗಿ ಜೊತೆಗಿರುತ್ತೇನೆ” ಎಂದು ಗಾಂಧಿ ಎಚ್ಚರಿಸಿದ್ದಾರೆ.
ಇದಕ್ಕೂ ಮುನ್ನ ಶನಿವಾರ ಪ್ರಯಾಗ್ರಾಜ್ನಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ, ದೇಶದ ಯುವಜನತೆ ‘ಚಕ್ರವ್ಯೂಹ’ದಲ್ಲಿ ಸಿಲುಕುತ್ತಿದ್ದಾರೆ. ಉದ್ಯೋಗದ ಯಾವುದೇ ಗ್ಯಾರಂಟಿ ನೀಡದ ಶೈಕ್ಷಣಿಕ ಪ್ರಮಾಣಪತ್ರಗಳಿಗಾಗಿ ಯುವಕರು ಲಕ್ಷಾಂತರ ಕೋಟಿ ರೂಪಾಯಿಗಳನ್ನು ವೆಚ್ಚ ಮಾಡುತ್ತಿದ್ದಾರೆ ಎಂದು ಹೇಳಿದ್ದರು. “ಇಂದು ಭಾರತದಲ್ಲಿ ಶೈಕ್ಷಣಿಕ ಪ್ರಮಾಣಪತ್ರಗಳಿಗೆ ಯಾವುದೇ ಮೌಲ್ಯವಿಲ್ಲ, ಏಕೆಂದರೆ ಅವು ನಿಮಗೆ ಕೆಲಸ ಕೊಡಿಸಲು ಸಾಧ್ಯವಿಲ್ಲ” ಎಂದು ಕಾಂಗ್ರೆಸ್ ನಾಯಕ ಟೀಕಿಸಿದ್ದರು.
ಪ್ರಯಾಗ್ರಾಜ್ನ ಕೆ. ಪಿ. ಕಾಲೇಜು ಮೈದಾನದಲ್ಲಿ ನಡೆದ ‘ಛಾತ್ರೋಂ ಕೀ ಗೂಂಜ್’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್, ಇನ್ಸ್ಟಾಗ್ರಾಮ್ ರೀಲ್ಸ್ ಮಾಡುವ “ಚಟ”ಕ್ಕೆ ಸಿಲುಕದಂತೆ ಯುವಕರಿಗೆ ಎಚ್ಚರಿಕೆ ನೀಡಿದ್ದರು. ಉದ್ಯೋಗಗಳು ಮತ್ತು ಅವಕಾಶಗಳು ಕಡಿಮೆಯಾಗುತ್ತಿರುವುದರಿಂದ, ಯುವಕರನ್ನು ತೊಡಗಿಸಿಕೊಳ್ಳಲು ಸೋಶಿಯಲ್ ಮೀಡಿಯಾವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.
“ಈ ದೇಶದಲ್ಲಿ ನಿಮಗಾಗಿ ಯಾವುದೇ ಉದ್ಯೋಗಗಳಿಲ್ಲದ ಕಾರಣ ನೀವು ರೀಲ್ಸ್ಗಳನ್ನು ಮಾಡುತ್ತೀರಿ ಮತ್ತು ಬ್ಲಿಂಕಿಟ್ನಂತಹ ಪ್ಲಾಟ್ಫಾರ್ಮ್ಗಳಲ್ಲಿ ಕೆಲಸ ಮಾಡುತ್ತೀರಿ,” ಎಂದ ರಾಹುಲ್ ಗಾಂಧಿ, ಈ ಪ್ರವೃತ್ತಿಯನ್ನು “ಭಯಾನಕ ಚಟ” ಎಂದು ಬಣ್ಣಿಸಿದರು ಮತ್ತು ಯುವಕರು “ಬಂಧಿತ ಕಾರ್ಮಿಕರು” ಆಗುತ್ತಿದ್ದಾರೆ ಎಂದು ಎಚ್ಚರಿಸಿದರು.
ಭಾವನೆ ಮತ್ತು ಕಾರ್ಪೊರೇಟ್ ಮನೆತನಗಳು ಎಐ (AI) ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸುತ್ತಿರುವುದರಿಂದ ಉತ್ಪಾದನೆ, ಉದ್ಯಮಶೀಲತೆ, ಸಾರ್ವಜನಿಕ ಮತ್ತು ಖಾಸಗಿ ವಲಯದ ಉದ್ಯೋಗಗಳು, ಕಾರ್ಪೊರೇಟ್, ಐಟಿ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಕುಗ್ಗುತ್ತಿವೆ ಎಂದು ಕಾಂಗ್ರೆಸ್ ನಾಯಕ ಹೇಳಿದರು. ಆರ್ಎಸ್ಎಸ್ ಸಿದ್ಧಾಂತಕ್ಕೆ ಸೇರಿದ ವ್ಯಕ್ತಿಗಳನ್ನು ವಿವಿಧ ಸಂಸ್ಥೆಗಳ ಪ್ರಮುಖ ಹುದ್ದೆಗಳಿಗೆ ನೇಮಿಸಲಾಗಿದ್ದು, ಇಡೀ ವ್ಯವಸ್ಥೆಯ ಮೇಲೆಯೇ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದರು.
