ಮುಂಬೈ: ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಅಧ್ಯಕ್ಷ ಅಭಿಜಿತ್ ದೀಪ್ಕೆ ಅವರ ಕುಟುಂಬದ ಆಸ್ತಿಪಾಸ್ತಿಗಳ ಕುರಿತು ತನಿಖೆ ನಡೆಸಬೇಕೆಂದು ಸೂರತ್ ಮೂಲದ ಆರ್ಟಿಐ ಹೋರಾಟಗಾರ ಅಮಿತ್ ತಿವಾರಿ ಒತ್ತಾಯಿಸಿದ್ದಾರೆ.
ಈ ಕುರಿತು ಅವರು ರವಿವಾರ ಮಹಾರಾಷ್ಟ್ರ ಸರ್ಕಾರದ ಜೊತೆಗೆ ಭಾರತೀಯ ಚುನಾವಣಾ ಆಯೋಗ ಹಾಗೂ ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸುಂಕ ಮಂಡಳಿಗೆ ದೂರು ಸಲ್ಲಿಸಿದ್ದಾರೆ. ಅಭಿಜಿತ್ ದೀಪ್ಕೆ ಅಮೆರಿಕದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಷ್ಟೊಂದು ಹಣ ಎಲ್ಲಿಂದ ಬಂತು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಅಮಿತ್ ಆಗ್ರಹಿಸಿದ್ದಾರೆ.
ಅಭಿಜಿತ್ ಅವರ ತಂದೆ ಭಗವಾನ್ ರಾವ್ ದೀಪ್ಕೆ ಅವರು ಮಹಾರಾಷ್ಟ್ರ ಕೈಗಾರಿಕಾ ಅಭಿವೃದ್ಧಿ ಮಂಡಳಿಯಲ್ಲಿ (ಎಮ್ಐಡಿಸಿ) ಕಿರಿಯ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು ಎಂದಿರುವ ಅಮಿತ್, ಅವರಿಗೆ ತಿಂಗಳಿಗೆ 60,000 ದಿಂದ 65,000 ರೂಪಾಯಿ ಮಾತ್ರವೇ ವೇತನ ಬರುತ್ತಿತ್ತು ಎಂದಿದ್ದಾರೆ. ಅಷ್ಟೇ ಸಂಬಳದಲ್ಲಿ ತಮ್ಮ ಮಕ್ಕಳನ್ನು ಅಮೆರಿಕಕ್ಕೆ ಕಳುಹಿಸಿ ಹೇಗೆ ಓದಿಸಿದರು ಎಂಬುದರ ಕುರಿತು ಸಂಬಂಧಪಟ್ಟ ಅಧಿಕಾರಿಗಳು ತನಿಖೆ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ಸಿಜೆಪಿಯು ನೋಂದಣಿಯಾಗದ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದ್ದು, ಹಣ ಸಂಗ್ರಹಿಸುತ್ತಿದೆ ಎಂದು ಆರೋಪಿಸಿರುವ ಅವರು, ಸಿಜೆಪಿ ಕಲೆಹಾಕುವ ಹಣವನ್ನು ಅಧಿಕೃತವಾಗಿ ದಾಖಲಿಸುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
