Home ಬೆಂಗಳೂರು ಸಂವಿಧಾನದ ಹೆಸರಲ್ಲಿ ಆಳುವವರು ಇಂದು ಮನುಸ್ಮತಿಯನ್ನು ಹೇರುತ್ತಿದ್ದಾರೆ : ಇಂದೂಧರ ಹೊನ್ನಾಪುರ

ಸಂವಿಧಾನದ ಹೆಸರಲ್ಲಿ ಆಳುವವರು ಇಂದು ಮನುಸ್ಮತಿಯನ್ನು ಹೇರುತ್ತಿದ್ದಾರೆ : ಇಂದೂಧರ ಹೊನ್ನಾಪುರ

0

ಬೆಂಗಳೂರು: ಅಂಬೇಡ್ಕರ್ ಅಂದು ಮನುಸ್ಮೃತಿಯನ್ನು ಸುಟ್ಟರು. ಆದರೆ ಸಂವಿಧಾನದ ಹೆಸರಲ್ಲಿ ಆಳುವವರು ಇಂದು ಮನುಸ್ಮತಿ ಮತ್ತು ಪಂಚಾಂಗವನ್ನು ಹೇರುತ್ತಿದ್ದಾರೆ ಎಂದು ಹಿರಿಯ ದಲಿತ ಹೋರಾಟಗಾರ ಇಂದೂಧರ ಹೊನ್ನಾಪುರ ಇಂದು ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ದಲಿತರ ಸಾಂಸ್ಕೃತಿಕ ಪ್ರತಿರೋಧ ಕಾರ್ಯಕ್ರಮದಲ್ಲಿ ಮಾತನಾಡಿ ತಮ್ಮ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.

ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ 66ನೇ ಪರಿನಿಬ್ಬಾಣ ದಿನದ ಅಂಗವಾಗಿ ಡಿಸೆಂಬರ್‌ 6, ಮಂಗಳವಾರದಂದು “ದಲಿತ ಸಂಘಟನೆಗಳ ಬೃಹತ್ ಐಕ್ಯತಾ ಸಮಾವೇಶ” ಹಮ್ಮಿಕೊಂಡಿದ್ದು, ಕಾರ್ಯಕ್ರಮದಲ್ಲಿ ಹಿರಿಯ ದಲಿತ ಹೋರಾಟಗಾರ ಇಂದೂಧರ ಹೊನ್ನಾಪುರ ಸಮುದಾಯದ ಒಗ್ಗಟಿನ ಬಗ್ಗೆ ಸಾರಿ ಹೇಳಿದ್ದಾರೆ.

ದಲಿತರ ಸಾಂಸ್ಕೃತಿಕ ಪ್ರತಿರೋಧ ಸಮಾವೇಶದ ಪ್ರಾಸ್ತವಿಕ ಮಾತುಗಳನ್ನಾಡಿದ ಅವರು, ʼಇಂದು ಬಾಬಾ ಸಾಹೇಬರ 66ನೇ ಪರಿನಿಬ್ಬಾಣದ ದಿನ. ಬಾಬಾ ಸಾಹೇಬರು, ಬುದ್ಧ, ಬಸವಣ್ಣರ ಆರಾಧಿಯಾಗಿ ದಲಿತ ಬಂಧುಗಳ ವಿಮುಕ್ತಗಾಗಿ ಪ್ರಾಣಾರ್ಪಣೆ ಮಾಡಿದವರಿಗೆ ಈ ಸಮಾವೇಶವನ್ನು ಅರ್ಪಿಸುತ್ತೇವೆ. ದಲಿತರೆಂದರೆ ಕೇವಲ ಅಸ್ಪಶ್ಯತೆರಲ್ಲ, ಈ ನಾಡಿನ ಎಲ್ಲಾ ನೊಂದವರು. ಎಲ್ಲ ನೊಂದವರ ಪರ ಡಿಎಸ್‌ಎಸ್‌ ಹೋರಾಟ ಮಾಡಿದೆ. ಹಿಂದುಳಿದ ವರ್ಗದ ಅನುಸೂಯಮ್ಮನವರ ಪರ ಹೋರಾಡಿತ್ತುʼ ಎಂದರು.

ದಲಿತ ಚಳವಳಿ ನಮ್ಮ ಕಾಲಮಾನದಲ್ಲಿ ದೊಡ್ಡ ಸಾಧನೆಗಳನ್ನು ಮಾಡಿದೆ. ನಾವು ಹೋರಾಟಗಳ ಮೂಲಕ ಕಟ್ಟಿಕೊಟ್ಟಂತಹ ವಿಚಾರಗಳು ಲಕ್ಷಾಂತರ ದಲಿತರ ಹೃದಯದಲ್ಲಿ ಸ್ವಾಭಿಮಾನಿದ ಕಿಚ್ಚು ಹತ್ತಿಸಿದೆ. DSS ಬೀದಿಯಲ್ಲಿ ಕೂಗಿದ ಘೋಷಣೆಗಳು ಇಂದು ಸರ್ಕಾರದ ಕಾರ್ಯಕ್ರಮವಾಗಿವೆ ಎಂದು ತಿಳಿಸಿದರು.

ದಲಿತ ಚಳವಳಿ ಆರಂಭವಾಗಿ ಐವತ್ತು ವರ್ಷಗಳಾಗಿವೆ. ದಲಿತರು ಕೂಗುತ್ತಿರುವ ಘೋಷಣೆಗಳು ಕಾರ್ಯಕ್ರಮಗಳಾಗಿವೆ. ಇವೆಲ್ಲವೂ ನಮ್ಮ ಹೆಮ್ಮೆ. ದಲಿತ ಸಂಘಟನೆ ವಿಘಟನೆಯಾಗಿವೆ, ಆಯಾಸವಾಗಿದೆ ಎಂದು ಹೇಳುತ್ತಿದ್ದಾರೆ. ಆದರೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಸೇರಿರುವ ಜನಸ್ತೋಮ ನಮ್ಮ ಒಗ್ಗಟ್ಟನ್ನು ಸಾರಿ ಹೇಳಿದೆ ಎಂದು ಕೂಗಿ ಹೇಳಿದರು.

ಹಂಚಿಕೊಂಡು ತಿಂದು ಬೆಳೆದ ದೇಶವಿದು. ಈ ದೇಶ ಯಾವ ಸ್ಥಿತಿ ಹೋಗಿದೆ ನೋಡುತ್ತಿದ್ದೇವೆ. ನಮ್ಮ ಸಂಸ್ಕೃತಿ, ಆಹಾರ, ಉದ್ಯೋಗ, ಉಡುಗೆ ತೊಡುಗೆಯನ್ನು ಕಿತ್ತುಕೊಂಡಿದ್ದಾರೆ. ನಮ್ಮ ದೇಶ ಅಕ್ಕಪಕ್ಕದ ದೇಶಕ್ಕಿಂತ ಕೆಳಗೆ ಇಳಿಯುತ್ತಿದೆ. ಸಂವಿಧಾನದ ಹೆಸರಲ್ಲಿ ವಂಚನೆ ಮಾಡುತ್ತಿದ್ದಾರೆ. ಸ್ಕಾಲರ್‌ಶಿಪ್ ನಿಲ್ಲಿಸಿ, ಲಕ್ಷಾಂತರ ರೂಪಾಯಿ ಕಾರ್ಪೊರೇಟರ್‌ಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ಅಂಕಿ- ಅಂಶಗಳನ್ನು ತಡೆದು ಬಡತನ ಇಲ್ಲ ಎನ್ನುತ್ತಿದ್ದಾರೆ ಎಂದು ಆಕ್ರೋಶ  ವ್ಯಕ್ತ ಪಡಿಸಿದರು.

ಅಂಬೇಡ್ಕರ್ ಅಂದು ಮನುಸ್ಮೃತಿಯನ್ನು ಸುಟ್ಟರು. ಆದರೆ ಸಂವಿಧಾನದ ಹೆಸರಲ್ಲಿ ಆಳುವವರು ಇಂದು ಮನುಸ್ಮತಿ ಮತ್ತು ಪಂಚಾಂಗವನ್ನು ಹೇರುತ್ತಿದ್ದಾರೆ. ಅದರ ವಿರುದ್ಧ ದಲಿತರು ಇವತ್ತು ಬೀದಿಗಿಳಿದಿದ್ದಾರೆ. ಸಂಘಟನೆಗಳು ಒಂದಾಗಿದ್ದಾರೆ. ಇದಕ್ಕೆ ಕಾರಣವಾದ ಸರ್ಕಾರಕ್ಕೆ ಧನ್ಯವಾದ ಹೇಳಬೇಕು ಎಂದು ಕಾರ್ಯಕ್ರಮದಲ್ಲಿ ಮಾತನಾಡಿದರು.

You cannot copy content of this page

Exit mobile version