Sunday, June 8, 2025

ಸತ್ಯ | ನ್ಯಾಯ |ಧರ್ಮ

ಕೃಷಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ರೈತ ಸಮುದಾಯದೊಂದಿಗೆ ಸಂಪರ್ಕ ಸಾಧಿಸಿ ಗ್ರಾಮೀಣ ಜೀವನಮಟ್ಟ ಸುಧಾರಿಸಬೇಕು: ಡಾ.ಚಿ.ಶ್ರೀನಿವಾಸ ರಾವ್

ಕೃಷಿ ಶಿಕ್ಷಣ ಕ್ಲಾಸ್ ರೂಮ್ ಹೊರಗೆ ನೀಡಬೆಕು. ಕೃಷಿ ವಿದ್ಯಾರ್ಥಿಗಳು, ಸಿಬ್ಬಂದಿಗಳು ರೈತರ ಬೇಡಿಕೆ ಮತ್ತು ಸವಾಲುಗಳನ್ನು ತಿಳಿದು. ಅವರೊಂದಿಗೆ ಬೆರೆತು ಗ್ರಾಮೀಣರ ಜೀವನಮಟ್ಟ ಸುಧಾರಣೆಗೆ ಕೂಡಿ ಕೆಲಸ ಮಾಡಬೇಕು. ಕ್ಲಾಸ್ ರೂಮ್ ಶಿಕ್ಷಣಕ್ಕೆ ಸಿಮಿತವಾಗಬಾರದು ಎಂದು ನವದೆಹಲಿ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕ ಹಾಗೂ ಕುಲಪತಿಗಳಾದ ಡಾ. ಚಿ.ಶ್ರೀನಿವಾಸ ರಾವ್ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ ವಿಶ್ವವಿದ್ಯಾಲಯ 38ನೇ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.

ಕರ್ನಾಟಕ ಕೃಷಿ ಕ್ಷೇತ್ರಕ್ಕೆ ಹವಾಮಾನ ವೈಪರಿತ್ಯ, ತಂತ್ರಜ್ಞಾನ ಮತ್ತು ನೀತಿಗಳು ಸವಾಲುಗಳಾಗಿವೆ. ಕರ್ನಾಟಕ ರಾಜ್ಯವು ಸರಿ ಸುಮಾರು 128 ಲಕ್ಷ ಹೆಕ್ಟೆರ್ ಕೃಷಿ ಭೂಮಿ ಹೊಂದಿದೆ. ಇದರಲ್ಲಿ ಸುಮಾರು 40 ಲಕ್ಷ ಹೆಕ್ಟೆರ್ ಭೂಮಿ ನೀರಾವರಿ, ಬಹು ಬೆಳೆ ಬೆಳೆಯುವ ಸುಮಾರು 21 ಲಕ್ಷ ಹೆಕ್ಟೆರ್ ಭೂಮಿ ಮುಖ್ಯವಾಗಿದೆ.

ಸುಮಾರು 80 ಲಕ್ಷ ಭೂ ಒಡೆಯರಾಗಿರುವವರು. ಅವರಲ್ಲಿ ಶೇ. 90 ರಷ್ಟು ಜನ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಾಗಿದ್ದಾರೆ ಎಂದು ಅವರು ಹೇಳಿದರು.

2024 ರಲ್ಲಿ ಕರ್ನಾಟಕವು ಉತ್ತಮ ಮಾನ್ಸೂನ ಮಳೆ ಪಡೆಯಿತು. 2022 ರಲ್ಲಿ 13.78 ಮಿಲಿಯನ್ ಟನ್ ಆಹಾರ ಉತ್ಪನ್ನವಾಗಿದ್ದರೆ. 2023 ರಲ್ಲಿ ಅದು 14.18 ಕ್ಕೆ ಗೋವಿನ ಜೋಳ, ಹೆಸರು, ಕಬ್ಬು, ಹತ್ತಿ ಸೇರಿದಂತೆ ಪ್ರಮುಖ ಬೆಳೆಗಳ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ ಎಂದು ಡಾ. ಶ್ರೀನಿವಾಸ ಅವರು ತಿಳಿಸಿದರು.
ಕರ್ನಾಟಕ ಸರಕಾರವು 2025-26 ನೇ ಸಾಲಿನಲ್ಲಿ ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವ ನೀಡಿದೆ. ಹಿಂದಿನ ವರ್ಷಗಳಿಗೆ ಹೊಸಿದಾಗ ಕೃಷಿ ಬೆಳವಣಿಗೆ ಕರ್ನಾಟಕದಲ್ಲಿ ಹೆಚ್ಚಾಗಿದೆ ಎಂದು ಅವರು ವಿವರಿಸಿದರು.

ಭಾರತದ ಕೃಷಿ ಹಸಿರುಕ್ರಾಂತಿ, ಶ್ವೇತಕ್ರಾಂತಿ, ಬಿಳಿಕ್ರಾಂತಿ ಮತ್ತು ಮ್ಯತ್ಸಕ್ರಾಂತಿಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿದೆ. ಈ ಕ್ರಾಂತಿಗಳಿಂದಾಗಿ ಆರ್ಥಿಕ, ಸಾಮಾಜಿಕ, ಜೌದ್ಯೋಗಿಕ ಮತ್ತು ಸಾಮಾಜಿಕ ಬದಲಾವಣೆಗಳಾಗಿವೆ ಎಂದು ಅವರು ತಿಳಿಸಿದರು.

ಕೃಷಿ ಬೆಳವಣಿಗೆಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೃಷಿ ವಿಜ್ಞಾನ ಕೇಂದ್ರಗಳು. ವಿಶ್ವವಿದ್ಯಾಲಯಗಳು ತೊಡಗಿಸಿಕೊಳ್ಳುವ ಅಗತ್ಯವಿದೆ ಎಂದು ಡಾ. ಚಿ. ಶ್ರೀನಿವಾಸ ರಾವ್ ಅವರು ಹೇಳಿದರು.

ಘಟಿಕೋತ್ಸವ ಅಧ್ಯಕ್ಷತೆ ವಹಿಸಿದ್ದ ವಿಶ್ವವಿದ್ಯಾಲಯದ ಕುಲಾಧಿಪತಿಗಳು ಆಗಿರುವ ರಾಜ್ಯಪಾಲರಾದ ಥಾವರ್‍ಚಂದ್ ಗೆಹ್ಲೋಟ್ ಅವರು ಮಾತನಾಡಿ, ಹವಾಮಾನದ ಬದಲಾವಣೆಯಿಂದ ಕೃಷಿ ಕ್ಷೇತ್ರದಲ್ಲಿ ಸಾಕಷ್ಟು ಹಿನ್ನಡೆ, ಹಾನಿ ಆಗುತ್ತಿದೆ. ಕೃಷಿ ಪದವಿಧರರು ಹೆಚ್ಚಿನ ಸಂಶೋಧನೆ ಹಾಗೂ ವಿನೂತನ ಪ್ರಯೋಗಗಳನ್ನು ಮಾಡುವ ಮೂಲಕ ಕೃಷಿ ಕಾರ್ಯಕ್ಕೆ ಬಲ ತುಂಬಬೇಕು ಎಂದು ತಿಳಿಸಿದರು.

ವಿಶ್ವಮಟ್ಟದಲ್ಲಿ ಭಾರತದ ಕೃಷಿ ಮತ್ತು ಕೃಷಿ ಕ್ಷೇತ್ರದ ಸಂಶೋಧನೆಗಳು, ಸಾಧನೆಗಳು ಹೆಮ್ಮೆ ಮೂಡಿಸುತ್ತವೆ. ಯುವ ಸಂಶೋಧಕರು ಪ್ರಸಕ್ತದಲ್ಲಿರುವ ಕೃಷಿ ಕ್ಷೇತ್ರದ ಸವಾಲುಗಳನ್ನು ಗಂಭೀರವಾಗಿ ಪರಿಗಣಿಸಿ, ಪರಿಹಾರ ಕಂಡುಹಿಡಿಯಬೇಕು ಎಂದು ಅವರು ತಿಳಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಮಾತನಾಡಿ, ದೇಶದ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯ ಅತ್ಯುತ್ತಮ ಸಂಸ್ಥೆಯಾಗಿದೆ. ರೈತರ ಅವಶ್ಯಕತೆಗಳಿಗೆ ಅನುಗುಣವಾಗಿ ಸಂಶೋಧನೆ, ಕೃಷಿ ತಂತ್ರಜ್ಞಾನದ ವರ್ಗಾವಣೆ, ಹೊಸ ತಳಿಗಳ ಪರಿಚಯಿಸುವಲ್ಲಿ ಈ ವಿಶ್ವವಿದ್ಯಾಲಯದ ಪಾತ್ರ ಮತ್ತು ಕೊಡುಗೆ ಅಪಾರವಾಗಿದೆ ಎಂದು ತಿಳಿಸಿದರು.

ಕರ್ನಾಟಕ ಸರಕಾರವು 2025-26 ನೇ ಸಾಲಿನ ರಾಜ್ಯ ಬಜೆಟನಲ್ಲಿ ಕೃಷಿಗೆ ಐವತ್ತು ಸಾವಿರ ಕೋಟಿಗೂ ಹೆಚ್ಚಿನ ಅನುದಾನ ನೀಡಿದೆ. ರೈತರ ಕಲ್ಯಾಣ ಮತ್ತು ಗ್ರಾಮೀಣಾಭಿವೃದ್ಧಿಗೆ ಒತ್ತು ನೀಡಿದೆ ಎಂದು ಅವರು ಹೇಳಿದರು.

ಕೃಷಿ ನವೋದ್ಯಮಗಳಿಗೆ ಉತ್ತೇಜನ, ನಮ್ಮ ಸಿರಿಧಾನ್ಯ ಕಾರ್ಯಕ್ರಮ ಮೂಲಕ ಸಂಸ್ಕರಿಸಿದ ಸಿರಿಧಾನ್ಯಗಳನ್ನು ಮತ್ತು ಮೌಲ್ಯವರ್ಧಿತ ಸಿರಿಧಾನ್ಯಗಳನ್ನು ಕಡಿಮೆ ಬೆಲೆಗೆ ಗ್ರಾಹಕರಿಗೆ ತಲುಪಿಸುವುದು. ಆಹಾರ ಉತ್ಪಾದನೆ ಹೆಚ್ಚಿಸುವದಕ್ಕಾಗಿ ಹನಿ ನೀರಾವರಿ ಯೋಜನೆಗಳಿಗೆ ಪ್ರೋತ್ಸಾಹ, ಕೃಷಿ ಯಾಂತ್ರೀಕರಣಕ್ಕೆ ಆಧ್ಯತೆ, ಕೊಯ್ಲೋತ್ತರ ತಂತ್ರಜ್ಞಾನಗಳ ಬಳಕೆಗೆ ಹಾರ್ವೆಸ್ಟರ್ ಹಬ್ ಯೋಜನೆ ಜಾರಿ ಸೇರಿದಂತೆ ಅನೇಕ ರೀತಿಯ ಕೃಷಿ ಪ್ರೋತ್ಸಾಹದಾಯಕ ಕ್ರಮಗಳನ್ನು ಕರ್ನಾಟಕ ರಾಜ್ಯ ಸರಕಾರ ಜಾರಿಗೊಳಿಸಿದೆ ಎಂದು ಸಚಿವ ಎನ್.ಚಲುವರಾಯಸ್ವಾಮಿ ಅವರು ತಿಳಿಸಿದರು.

ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಸ್ವಾಗತಿಸಿ, ಧಾರವಾಡ ಕೃಷಿ ವಿಶ್ವವಿದ್ಯಾಲಯದ ಸಾಧನೆಗಳನ್ನು ಪ್ರಸ್ತುತಪಡಿಸಿದರು.

ಸಮಾರಂಭದಲ್ಲಿ ಕೃಷಿ ಕ್ಷೇತ್ರದ ಸಾಧಕರಾದ ಮುತ್ತಣ್ಣ ಭೀರಪ್ಪ ಪೂಜಾರ, ದ್ಯಾಮನಗೌಡ ತಿಮ್ಮನಗೌಡ ಪಾಟೀಲ ಮತ್ತು ಶಂಕರ ಹನಮಂತ ಲಂಗಟಿ ಅವರಿಗೆ ರಾಜ್ಯಪಾಲರು ಗೌರವ ಡಾಕ್ಟರೇಟ್ ಪ್ರಧಾನ ಮಾಡಿ ಗೌರವಿಸಿದರು.

ಇಂದು ಜರುಗಿದ ಕೃಷಿ ವಿಶ್ವವಿದ್ಯಾಲಯದ 38ನೇ ಘಟಿಕೋತ್ಸವ ಸಮಾರಂಭದಲ್ಲಿ 41 ಪಿ.ಎಚ್.ಡಿ, 197 ಸ್ನಾತಕೋತ್ತರ, 625 ಸ್ನಾತಕ ಪದವಿಗಳು ಒಳಗೊಂಡಂತೆ ಒಟ್ಟು 863 ಅಭ್ಯರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು. ಇದರಲ್ಲಿ 701 ಅಭ್ಯರ್ಥಿಗಳು ಹಾಜರಾತಿಯಲ್ಲಿಯೂ ಹಾಗೂ 162 ಅಭ್ಯರ್ಥಿಗಳು ಗೈರು ಹಾಜರಾತಿಯಲ್ಲಿ ತಮ್ಮ ಪದವಿಗಳನ್ನು ಸ್ವೀಕರಿಸಿದರು.

ಕೃಷಿ ಪದವಿ ವಿದ್ಯಾರ್ಥಿ ಕಾರ್ತಿಕ ಚಿಗರಿ ಹಾಗೂ ವಿದ್ಯಾರ್ಥಿನಿ ಐಶ್ವರ್ಯ ಬೆಟಗೇರಿ ಅವರು ಹೆಚ್ಚು ಚಿನ್ನದ ಪದಕಗಳೊಂದಿಗೆ ಪ್ರಸಕ್ತ ಸಾಲಿಗೆ ಕೃಷಿ ವಿಶ್ವವಿದ್ಯಾಲಯದ ಚಿನ್ನದ ಹುಡುಗ ಮತ್ತು ಚಿನ್ನದ ಹುಡಗಿ ಎಂಬ ಬಿರುದಿಗೆ ಭಾಜನರಾದರು.

ಸಮಾರಂಭದಲ್ಲಿ ಧಾರವಾಡ ಕೃಷಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿ ಸದಸ್ಯರು, ವಿದ್ಯಾ ವಿಷಯಕ ಪರಿಷತ್ತಿನ ಸದಸ್ಯರು, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಸಿಬ್ಬಂದಿಗಳು, ವಿದ್ಯಾರ್ಥಿಗಳು, ಪಾಲಕರು ಭಾಗವಹಿಸಿದ್ದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page