ಬೆಂಗಳೂರು: ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಎರಡು ದಿನಗಳ ನಂತರ ಬಿಜೆಪಿ ಪಾಳಯದಲ್ಲಿ ಬೆಂಗಳೂರು ಉತ್ತರ ಲೋಕಸಭಾ ಸ್ಥಾನಕ್ಕಾಗಿ ಲಾಬಿ ಶುರುವಾಗಿದೆ. ರಾಜ್ಯ ರಾಜಧಾನಿಯಲ್ಲಿ ಪಕ್ಷದ ಭದ್ರಕೋಟೆಯ ಮೇಲೆ ಕನಿಷ್ಠ ಐವರು ಪಕ್ಷದ ನಾಯಕರು ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.
ಸದಾನಂದಗೌಡ ನವೆಂಬರ್ 8ರಂದು ಹಾಸನದಲ್ಲಿ ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದರು. ಅಂದಿನಿಂದ ಸದಾನಂದಗೌಡ ಅವರು ಎರಡನೇ ಬಾರಿ ಪ್ರತಿನಿಧಿಸುತ್ತಿರುವ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಛೆಯನ್ನು ಹಲವು ಬಿಜೆಪಿ ನಾಯಕರು ಆಂತರಿಕವಾಗಿ ವ್ಯಕ್ತಪಡಿಸಿದ್ದಾರೆ.
ಈ ಲೋಕಸಭಾ ಕ್ಷೇತ್ರವು ಎಂಟು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. 2004ರಿಂದ ಈ ಕ್ಷೇತ್ರ ಬಿಜೆಪಿ ಕೋಟೆಯಂತೆ ಉಳಿದುಕೊಂಡಿದೆ. ಸದಾನಂದಗೌಡ ಈ ಕ್ಷೇತ್ರದಿಂದ ಸತತ ಎರಡು ಬಾರಿ ಆಯ್ಕೆಯಾಗಿದ್ದರು. ಕ್ಷೇತ್ರದಲ್ಲಿ ಒಕ್ಕಲಿಗರ ಪ್ರಾಬಲ್ಯವಿದ್ದು, ಸಮುದಾಯಕ್ಕೆ ಸೇರಿದ ಹಲವು ಪಕ್ಷದ ಮುಖಂಡರು ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಆಕಾಂಕ್ಷಿಗಳಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವರಾದ ಸಿ ಟಿ ರವಿ, ಡಾ ಕೆ ಸುಧಾಕರ್, ಸಂಸದರಾದ ಸುಮಲತಾ, ಪ್ರತಾಪ್ ಸಿಂಹ ಸೇರಿದಂತೆ ಹಲವರು ಇದ್ದಾರೆ.
ಪ್ರಸ್ತುತ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಪ್ರಸಕ್ತ ಚುನಾವಣೆಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ಮತ್ತು ಹಿರಿಯ ರಾಜಕಾರಣಿ ಕಾಂಗ್ರೆಸ್ ಪಕ್ಷಕ್ಕೆ ಮರಳುವುದು ಬಹುತೇಕ ಖಾತರಿಯಾಗಿರುವ ಹಿನ್ನೆಲೆಯಲ್ಲಿ ಪಕ್ಷ ಬದಲಿಸುವ ಚಿಂತನೆಯಲ್ಲಿದ್ದಾರೆ ಎನ್ನಲಾಗುತ್ತಿದೆ. ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೋಭಾ ಕರಂದ್ಲಾಜೆ ವಿರುದ್ಧ ಮತದಾರರ ಮನಸ್ಸಿನಲ್ಲಿ ಅಸಮಾಧಾನವಿರುವುದೂ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇವರು ಈ ಹಿಂದೆ ಯಶವಂತಪುರ ಕ್ಷೇತ್ರದಿಂದ ಶಾಸಕಿಯಾಗಿಯೂ ಆಯ್ಕೆಯಾಗಿರುವ ಕಾರಣ ಇಲ್ಲಿನ ಮತದಾರರಿಗೆ ಪರಿಚಿತ ಮುಖವೂ ಹೌದು.
ಮಂಡ್ಯದ ಸ್ವತಂತ್ರ ಸಂಸದೆ ಸುಮಲತಾ ಅವರು ಬಿಜೆಪಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ ಆದರೆ ತಾಂತ್ರಿಕ ಕಾರಣಗಳಿಂದ ಪಕ್ಷಕ್ಕೆ ಇನ್ನೂ ಸೇರ್ಪಡೆಗೊಂಡಿಲ್ಲ. ಜೆಡಿಎಸ್ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ ಸೇರ್ಪಡೆಗೊಂಡಿರುವುದರಿಂದ ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆ ಹೆಚ್ಚಿದೆ. ಒಂದು ವೇಳೆ ಸುಮಲತಾ ಅವರು ಅಧಿಕೃತವಾಗಿ ಬಿಜೆಪಿ ಸೇರಲು ನಿರ್ಧರಿಸಿದರೆ, ಪಕ್ಷವು ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದಿಂದ ಅವಕಾಶ ನೀಡಬಹುದು. ಆದರೆ ತಾನು ಯಾವುದೇ ಕಾರಣಕ್ಕೂ ಮಂಡ್ಯ ಕ್ಷೇತ್ರ ಬಿಟ್ಟುಕೊಡುವುದಿಲ್ಲವೆಂದು ಸುಮಲತಾ ಇತ್ತೀಚೆಗೆ ಖಡಾಖಂಡಿತವಾಗಿ ಹೇಳಿದ್ದರು. ಆದರೆ ಮಂಡ್ಯದಲ್ಲಿ ಒಂದು ವೇಳೆ ಅವರಿಗೆ ಟಿಕೆಟ್ ದೊರೆತರೆ ಜೆಡಿಎಸ್ ಕಾರ್ಯಕರ್ತರು ಅವರ ಪರವಾಗಿ ಕೆಲಸ ಮಾಡುವುದು ಅನುಮಾನ ಎನ್ನುತ್ತಾರೆ ಸ್ಥಳೀಯರು.
ಹಿಂದಿನ ಬಿಜೆಪಿ ಸರ್ಕಾರದ ಮಾಜಿ ಸಚಿವ ಸಿ.ಟಿ.ರವಿ ಮತ್ತು ಡಾ.ಕೆ.ಸುಧಾಕರ್ ಕೂಡ ಬೆಂಗಳೂರು ಉತ್ತರದಿಂದ ಟಿಕೆಟ್ಗಾಗಿ ಲಾಬಿ ನಡೆಸುತ್ತಿದ್ದಾರೆ ಎನ್ನಲಾಗಿದೆ. ಚಿಕ್ಕಮಗಳೂರಿನಿಂದ ಸಿ.ಟಿ.ರವಿ ಹಾಗೂ ಚಿಕ್ಕಬಳ್ಳಾಪುರದಿಂದ ಸುಧಾಕರ್ ಸೋತಿದ್ದರು. ಆದರೆ ಇವರಿಬ್ಬರಿಗೆ ಇಲ್ಲಿ ಜಾತಿಯ ಹೊರತಾದ ಯಾವ ಐಡೆಂಟಿಟಿಯೂ ಇಲ್ಲ ಎನ್ನುವುದು ಗಮನಾರ್ಹ ಮತ್ತು ತಮ್ಮ ತವರು ಕ್ಷೇತ್ರಗಳಲ್ಲೇ ಮಣ್ಣು ಮುಕ್ಕಿರುವುದರಿಂದ ಟಿಕೆಟ್ ಅನುಮಾನ ಎನ್ನಲಾಗುತ್ತಿದೆ.
ರಾಜ್ಯ ಚುನಾವಣೆಯಲ್ಲಿ ಮಾಡಿದಂತೆ ಹೊಸ ಮುಖಗಳಿಗೆ ಮಣೆ ಹಾಕುವ ಪ್ರಯೋಗವನ್ನು ಬಿಜೆಪಿ ಲೋಕಸಭಾ ಚುನಾವಣೆಯಲ್ಲೂ ಪ್ರಯತ್ನಿಸಲು ಯೋಚಿಸಿದ್ದು, ಈ ನಿಟ್ಟಿನಲ್ಲಿ ಈ ಬಾರಿ ಹಲವು ಹಾಲಿ ಸಂಸದರು ಟಿಕೆಟ್ ಕಳೆದುಕೊಳ್ಳುವ ನಿರೀಕ್ಷೆಯಿದೆ ಎಂದು ಪಕ್ಷದ ಮೂಲಗಳು ಮಾತನಾಡಿಕೊಳ್ಳುತ್ತಿವೆ. ಹೀಗೆ ಟಿಕೆಟ್ ತಪ್ಪಿಸಿಕೊಳ್ಳಲಿರುವವರ ಪಟ್ಟಿಯಲ್ಲಿ ಸದಾನಂದ ಗೌಡ, ಶೋಭಾ ಕರಂದ್ಲಾಜೆ ಮತ್ತು ಪ್ರತಾಪ ಸಿಂಹ ಅವರುಗಳ ಹೆಸರು ಓಡಾಡುತ್ತಿದ್ದವು ಎನ್ನುವುದು ಗಮನಾರ್ಹ.