ಬೆಂಗಳೂರು: ಅಖಿಲ ಕರ್ನಾಟಕ ಮಹಮದೀಯರ ಕನ್ನಡ ವೇದಿಕೆಯ ರಾಜ್ಯಾಧ್ಯಕ್ಷ, ಕನ್ನಡ ಹೋರಾಟಗಾರ ಸಮೀವುಲ್ಲಾ ಖಾನ್ ಅವರಿಗೆ ಕನ್ನಡ ಸಂಘರ್ಷ ಸಮಿತಿ ನೀಡುವ ಕನ್ನಡ ಕಟ್ಟಾಳು ಪ್ರಶಸ್ತಿ ಘೋಷಿಸಲಾಗಿದೆ.
ಕನ್ನಡ ಸಂಘರ್ಷ ಸಮಿತಿಯ 44ನೇ ಸಂಸ್ಥಾಪನಾ ದಿನಾಚರಣೆ ಅಂಗವಾಗಿ, ದಿ.ರಹಮಾನ್ ಖಾನ್ ಸ್ಮಾರಕ ಕನ್ನಡ ಕಟ್ಟಾಳು ಮತ್ತು ನಿಸ್ಸೀಮ ಕನ್ನಡತಿ ಪ್ರಶಸ್ತಿಗಳನ್ನು ಅಕ್ಟೋಬರ್ 30 ರಂದು ನಡೆಯುವ ಸಮಾರಂಭದಲ್ಲಿ ನೀಡಲಾಗುವುದು.
ಈ ಕಾರ್ಯಕ್ರಮವು ಚಾಮರಾಜಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ನಡೆಯಲಿದೆ.
ನಿಡುಮಾಮುಡಿ ಜಗದ್ಗುರು ಮಠದ ವೀರಭದ್ರಚನ್ನಮಲ್ಲದ ಕೇಂದ್ರ ಮಹಾಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ.
ಪ್ರಶಸ್ತಿ ಪ್ರಧಾನ ಕಾರ್ಯಕ್ರಮವನ್ನುಕವಿ, ಪ್ರಗತಿಪರ ಚಿಂತಕರಾದ ಪ್ರೊ.ಬರಗೂರು ರಾಮಚಂದ್ರಪ್ಪರವರು ಅಧ್ಯಕ್ಷತೆ ವಹಿಸಲಿದ್ದು, ಸಾಹಿತಿ ಎಂ.ಎಸ್. ಶಶಿಕಲಾಗೌಡ ಮತ್ತು ಕನ್ನಡ ಸಂಘರ್ಷ ಸಮಿತಿಯ ಅಧ್ಯಕ್ಷರಾದ ಎ.ಎಸ್.ನಾಗರಾಜಸ್ವಾಮಿ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ.
ಈ ಬಾರಿಯ ಕನ್ನಡ ಕಟ್ಟಾಳು ಪ್ರಶಸ್ತಿಯನ್ನು ಸಮೀವುಲ್ಲಾ ಖಾನ್ ಅವರಿಗೆ ಮತ್ತು ನಿಸ್ಸೀಮ ಕನ್ನಡತಿ ಪ್ರಶಸ್ತಿಯನ್ನು ಡಾ.ರಾಧಿಕಾ ರಂಜಿನಿಯವರಿಗೆ ನೀಡಲಾಗುತ್ತದೆ ಎಂದು ಘೋಷಿಸಿದ್ದಾರೆ.