ಗಾಂಧಿ ಹಂತಕರಾದ ನಾಥೂರಾಮ್ ಗೋಡ್ಸೆ, ಗೋಪಾಲ್ ಗೋಡ್ಸೆ ಆರ್‌ಎಸ್‌ಎಸ್‌ನ ಸಕ್ರಿಯ ಸದಸ್ಯರಾಗಿದ್ದರು: ಸಾವರ್ಕರ್ ಮೊಮ್ಮಗ ಸತ್ಯಕಿ ಹೇಳಿಕೆ

ಪುಣೆ: ಮಹಾತ್ಮ ಗಾಂಧೀಜಿಯವರನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ಹಾಗೂ ಆತನ ಸೋದರ ಗೋಪಾಲ್ ಗೋಡ್ಸೆ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಸಕ್ರಿಯ ಸದಸ್ಯರಾಗಿದ್ದರು ಎಂದು ಹಿಂದುತ್ವ ಸಿದ್ಧಾಂತವಾದಿ ವಿನಾಯಕ ದಾಮೋದರ್ ಸಾವರ್ಕರ್ ಅವರ ಮೊಮ್ಮಗ (ಸಹೋದರನ ಮೊಮ್ಮಗ) ಸತ್ಯಕಿ ಸಾವರ್ಕರ್ ಪುಣೆ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.

ಕಾಂಗ್ರೆಸ್ ಸಂಸದ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆ ವೇಳೆ, ರಾಹುಲ್ ಗಾಂಧಿ ಪರ ವಕೀಲ ಮಿಲಿಂದ್ ಪವಾರ್ ನಡೆಸಿದ ಪಾಟಿ ಸವಾಲಿನಲ್ಲಿ ಸತ್ಯಕಿ ಈ ಅಂಶವನ್ನು ಒಪ್ಪಿಕೊಂಡಿದ್ದಾರೆ.

ತಮ್ಮ ತಾಯಿ ಹಿಮಾನಿ ಸಾವರ್ಕರ್ ಅವರು ಗೋಪಾಲ್ ಗೋಡ್ಸೆ ಅವರ ಪುತ್ರಿಯಾಗಿದ್ದು, ಗೋಡ್ಸೆ ಮತ್ತು ಸಾವರ್ಕರ್ ಕುಟುಂಬಗಳು ಪರಸ್ಪರ ರಕ್ತಸಂಬಂಧ ಹೊಂದಿವೆ ಎಂದು ಅವರು ದೃಢಪಡಿಸಿದರು. ಅಲ್ಲದೆ, ಗಾಂಧಿ ಹತ್ಯೆ ಪ್ರಕರಣದಲ್ಲಿ ವಿನಾಯಕ ಸಾವರ್ಕರ್ ಹಾಗೂ ಗೋಪಾಲ್ ಗೋಡ್ಸೆ ಆರೋಪಿಗಳಾಗಿದ್ದರು ಮತ್ತು ನಾಥೂರಾಮ್ ಗೋಡ್ಸೆ ಹಿಂದೂ ಮಹಾಸಭಾದ ಸದಸ್ಯರಾಗಿದ್ದರು ಎಂಬುದನ್ನೂ ಸತ್ಯಕಿ ಕೋರ್ಟ್‌ನಲ್ಲಿ ಸ್ಪಷ್ಟಪಡಿಸಿದರು.

ಇದೇ ವೇಳೆ, ಲಂಡನ್ ಭಾಷಣದ ಆಡಿಯೋ ತುಲನೆಗಾಗಿ ರಾಹುಲ್ ಗಾಂಧಿ ಅವರ ಧ್ವನಿ ಮಾದರಿಯನ್ನು (voice sample) ಸಂಗ್ರಹಿಸುವಂತೆ ಕೋರಿ ಸತ್ಯಕಿ ಪರ ವಕೀಲರು ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿದೆ.

Related Articles

ಇತ್ತೀಚಿನ ಸುದ್ದಿಗಳು