ಪತ್ರಕರ್ತ ಕರಣ್ ಥಾಪರ್ ಜೊತೆಗಿನ ಸಂದರ್ಶನದಲ್ಲಿ ಪುಲ್ವಾಮಾ ದುರ್ಘಟನೆಗೆ ಸಂಬಂಧಿಸಿದಂತೆ ಸ್ಪೋಟಕ ಮಾಹಿತಿ ನೀಡಿದ್ದ ಜಮ್ಮು ಕಾಶ್ಮೀರದ ಮಾಜಿ ರಾಜ್ಯಪಾಲ ಸತ್ಯಪಾಲ್ ಮಲಿಕ್ ಮತ್ತೊಂದು ಸ್ಪೋಟಕ ಹೇಳಿಕೆ ನೀಡಿ ಸುದ್ದಿಗೆ ಬಂದಿದ್ದಾರೆ. ಈ ಬಾರಿ 2024 ರ ಚುನಾವಣಾ ಹಿನ್ನೆಲೆಯಲ್ಲಿ ನೀಡಿದ ಹೇಳಿಕೆ, ಬಿಜೆಪಿ ಪಕ್ಷಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಒಂದು ಕಾಲದಲ್ಲಿ ನರೇಂದ್ರ ಮೋದಿ ಆಪ್ತ ವಲಯದಲ್ಲಿ ಒಬ್ಬರಾಗಿದ್ದ ಸತ್ಯಪಾಲ್ ಮಲಿಕ್ ಸಂದರ್ಶನವೊಂದರಲ್ಲಿ ನೀಡಿದ ಹೇಳಿಕೆ ಅಷ್ಟೆ ಆಘಾತಕಾರಿಯಾಗಿದೆ. “ಬಿಜೆಪಿ ಪಕ್ಷದವರು 2024 ಕ್ಕೆ ರಾಮಮಂದಿರ ಸ್ಪೋಟ ಅಥವಾ ಬಿಜೆಪಿ ಪಕ್ಷದ್ದೇ ಪ್ರಭಾವಿ ನಾಯಕರೊಬ್ಬರ ಹತ್ಯೆ ಮಾಡಿಯಾದರೂ ಅಧಿಕಾರ ಪಡೆಯಲು ಹಿಂದೇಟು ಹಾಕುವುದಿಲ್ಲ” ಎಂಬ ಹೇಳಿಕೆ ಅತ್ಯಂತ ಕಳವಳಕಾರಿಯಾಗಿದೆ. “ಪುಲ್ವಾಮಾ ದಾಳಿ ಮಾಡಿಸಿದವರು ಯಾವ ಮಟ್ಟಕ್ಕೆ ಬೇಕಾದರೂ ಇಳಿಯಬಹುದು” ಎಂದು ಸತ್ಯಪಾಲ್ ಮಲಿಕ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ಈ ಹಿಂದೆ ಪುಲ್ವಾಮಾ ದಾಳಿಯ ಹಿಂದೆ ಬಿಜೆಪಿ ಕೈವಾಡದ ಬಗ್ಗೆ ಹೇಳಿಕೆ ನೀಡಿದ್ದ ಸತ್ಯಪಾಲ್ ಮಲಿಕ್, ಆ ಸಂದರ್ಶನದ ನಂತರ ಸತ್ಯಪಾಲ್ ಮಲಿಕ್ ಮತ್ತು ಅವರ ಆಪ್ತ ಸಹಾಯಕರ ಮೇಲೆ ಸಿಬಿಐ ದಾಳಿ ನಡೆದಿತ್ತು. ಆ ನಂತರ ಮಣಿಪುರ ಗಲಭೆಗಳ ಬಗ್ಗೆ ಮೋದಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ್ದರು.
ಇನ್ನು “ದೆಹಲಿಯಲ್ಲಿ ನಡೆದ ರೈತ ಪ್ರತಿಭಟನೆಯಲ್ಲಿ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಅರ್ಪಿಸಿ ಎಂದು ನಾನು ಮೋದಿ ಅವರಿಗೆ ಸಲಹೆ ನೀಡಿದರೆ, ಅವರು ನನಗಾಗಿ ಸತ್ತರೇ? ನಾನ್ಯಾಕೆ ಶ್ರದ್ಧಾಂಜಲಿ ಸಲ್ಲಿಸಲಿ ಎಂದು ಮೋದಿ ಹೇಳಿದ್ದರು” ಎಂದು ಸತ್ಯಪಾಲ್ ಮಲಿಕ್ ಅವರು ನೀಡಿದ ಹೇಳಿಕೆ ರಾಷ್ಟ್ರಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು.
ಇಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸತ್ಯಪಾಲ್ ಮಲಿಕ್ ನೀಡಿರುವ ಹೇಳಿಕೆ, ಯಾವ ಮಾಧ್ಯಮದ ಸಂದರ್ಶನ ಎಂಬುದು ತಿಳಿದು ಬಂದಿಲ್ಲ.