ದೆಹಲಿ: ಅರುಣಾಚಲ ಪ್ರದೇಶದ ಬಿಜೆಪಿ ಮುಖ್ಯಮಂತ್ರಿ ಪೆಮಾ ಖಂಡು ಅವರು ತಮ್ಮ ಕುಟುಂಬ ಸದಸ್ಯರು ಮತ್ತು ಸಂಬಂಧಿಕರಿಗೆ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಗುತ್ತಿಗೆಗಳನ್ನು ನೀಡಿದ್ದಾರೆ ಎಂಬ ಆರೋಪದ ಮೇಲೆ ಸುಪ್ರೀಂ ಕೋರ್ಟ್ ಸೋಮವಾರ ಸಿಬಿಐ (CBI) ತನಿಖೆಗೆ ಆದೇಶಿಸಿದೆ.
ಸುಮಾರು 1,270 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಗಳನ್ನು ನಿಯಮಬಾಹಿರವಾಗಿ ತಮ್ಮವರಿಗೆ ಹಂಚಿಕೆ ಮಾಡಿದ್ದಾರೆ ಎಂಬ ದೂರಿನ ಅನ್ವಯ ನ್ಯಾಯಾಲಯ ಈ ಮಹತ್ವದ ನಿರ್ಧಾರ ಕೈಗೊಂಡಿದೆ.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ಪೀಠವು, 2015 ರಿಂದ 2025 ರ ನಡುವಿನ ಅವಧಿಯಲ್ಲಿ ನಡೆದ ಗುತ್ತಿಗೆ ಹಂಚಿಕೆಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸೂಚಿಸಿದೆ.
ಮುಖ್ಯಮಂತ್ರಿಯವರ ಪತ್ನಿ, ತಾಯಿ ಮತ್ತು ಇತರ ಸಂಬಂಧಿಕರಿಗೆ ಸೇರಿದ ಸಂಸ್ಥೆಗಳಿಗೆ ಟೆಂಡರ್ ಇಲ್ಲದೆಯೇ ಕೆಲಸಗಳನ್ನು ನೀಡಲಾಗಿದೆ ಎಂಬ ಅಂಶದ ಕುರಿತು 16 ವಾರಗಳಲ್ಲಿ ಸ್ಥಿತಿಗತಿ ವರದಿ ಸಲ್ಲಿಸುವಂತೆ ಸಿಬಿಐಗೆ ತಿಳಿಸಿದೆ. ಈ ತನಿಖೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಬೇಕು ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಅರ್ಜಿದಾರರ ಪರ ಹಾಜರಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಾದ ಮಂಡಿಸಿ, ಕಳೆದ 11 ವರ್ಷಗಳಿಂದ ರಾಜ್ಯದಲ್ಲಿ ಇಂತಹದ್ದೇ ಅಕ್ರಮಗಳು ನಡೆಯುತ್ತಿವೆ ಎಂದು ಆರೋಪಿಸಿದರು. ಮುಖ್ಯಮಂತ್ರಿಯವರ ಪತ್ನಿಗೆ ಸೇರಿದ ‘ಬ್ರಾಂಡ್ ಈಗಲ್ಸ್’ ಸೇರಿದಂತೆ ಇತರ ಸಂಬಂಧಿಕರ ಕಂಪನಿಗಳಿಗೆ 121 ಕೆಲಸಗಳನ್ನು ಟೆಂಡರ್ ಮೂಲಕ ಹಾಗೂ 322 ಕೆಲಸಗಳನ್ನು ಯಾವುದೇ ಟೆಂಡರ್ ಇಲ್ಲದೆಯೇ ನೀಡಲಾಗಿದೆ ಎಂದು ವಿವರಿಸಿದರು.
ರಾಜ್ಯದ ಒಟ್ಟು ಗುತ್ತಿಗೆಗಳಲ್ಲಿ ಶೇ. 3 ರಷ್ಟು ಕೇವಲ ಮುಖ್ಯಮಂತ್ರಿಯವರ ಕುಟುಂಬಕ್ಕೇ ದಕ್ಕಿದೆ ಎಂದು ಅವರು ದೂರಿದರು. ಫೆಬ್ರವರಿಯಲ್ಲೇ ವಾದ-ಪ್ರತಿವಾದ ಮುಗಿದಿದ್ದು, ಸೋಮವಾರ ಹೊರಬಿದ್ದ ಈ ತೀರ್ಪು ಅರುಣಾಚಲ ರಾಜಕಾರಣದಲ್ಲಿ ಭಾರಿ ಸಂಚಲನ ಮೂಡಿಸಿದೆ.
