Home ಇನ್ನಷ್ಟು ಕೋರ್ಟು - ಕಾನೂನು ಮತಾಂತರ ಪ್ರಕರಣ: ಟಿಸಿಎಸ್ ಉದ್ಯೋಗಿ ನಿದಾ ಖಾನ್‌ಗೆ ಜಾಮೀನು ಮಂಜೂರು, ಡ್ಯಾನಿಶ್ ಶೇಖ್ ಅರ್ಜಿ ವಜಾ

ಮತಾಂತರ ಪ್ರಕರಣ: ಟಿಸಿಎಸ್ ಉದ್ಯೋಗಿ ನಿದಾ ಖಾನ್‌ಗೆ ಜಾಮೀನು ಮಂಜೂರು, ಡ್ಯಾನಿಶ್ ಶೇಖ್ ಅರ್ಜಿ ವಜಾ

0

ನಾಸಿಕ್‌ನ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಅಂಗಸಂಸ್ಥೆಯಾದ ಬಿಪಿಒ (BPO) ಕೇಂದ್ರದಲ್ಲಿ ನಡೆದಿದೆ ಎನ್ನಲಾದ ಧಾರ್ಮಿಕ ಮತಾಂತರ ಯತ್ನ ಹಾಗೂ ಲೈಂಗಿಕ ಕಿರುಕುಳ ಪ್ರಕರಣದ ಪ್ರಮುಖ ಆರೋಪಿ ನಿದಾ ಖಾನ್‌ಗೆ ನಾಸಿಕ್ ನ್ಯಾಯಾಲಯವು ಸೋಮವಾರ ಜಾಮೀನು ಮಂಜೂರು ಮಾಡಿದೆ. ಬಂಧನಕ್ಕೊಳಗಾಗಿ ಸುಮಾರು ಎರಡು ತಿಂಗಳ ಕಾಲ ನ್ಯಾಯಾಂಗ ಬಂಧನದಲ್ಲಿದ್ದ ನಿದಾ ಖಾನ್‌ಗೆ ಕೊನೆಗೂ ಪರಿಹಾರ ಸಿಕ್ಕಿದೆ.

ನಾಸಿಕ್ ರೋಡ್ ನ್ಯಾಯಾಲಯದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಕೆ.ಜಿ. ಜೋಶಿ ಅವರು ನಿದಾ ಖಾನ್ ಹಾಗೂ ಮತ್ತೊಬ್ಬ ಸಹ ಆರೋಪಿ ತೌಸಿಫ್ ಅತ್ತಾರ್‌ಗೆ ಜಾಮೀನು ನೀಡಿದ್ದಾರೆ. ಆದರೆ, ಇದೇ ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಡ್ಯಾನಿಶ್ ಶೇಖ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ನ್ಯಾಯಾಲಯವು ವಜಾಗೊಳಿಸಿದೆ.

ಡ್ಯಾನಿಶ್ ಶೇಖ್ ವಿರುದ್ಧದ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಈ ಹಂತದಲ್ಲಿ ಆತನಿಗೆ ಜಾಮೀನು ನೀಡಿದರೆ ಸಾಕ್ಷ್ಯನಾಶ ಮಾಡುವ, ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಅಥವಾ ಕಾನೂನಿನಿಂದ ತಪ್ಪಿಸಿಕೊಳ್ಳುವ ಸಾಧ್ಯತೆ ಇರುವುದರಿಂದ ಜಾಮೀನು ನಿರಾಕರಿಸಲಾಗಿದೆ ಎಂದು ನ್ಯಾಯಾಧೀಶರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.

ಗರ್ಭಾವಸ್ಥೆಯ ಹಿನ್ನೆಲೆಯಲ್ಲಿ ಜಾಮೀನು ಕೋರಿದ್ದ ನಿದಾ ಖಾನ್

ಟಿಸಿಎಸ್ ಬಿಪಿಒ ಘಟಕದಲ್ಲಿ ಟೆಲಿಕಾಲರ್ ಆಗಿ ಕೆಲಸ ಮಾಡುತ್ತಿದ್ದ ನಿದಾ ಖಾನ್, ಪ್ರಕರಣ ದಾಖಲಾದ ಬಳಿಕ ಸುಮಾರು ಆರು ವಾರಗಳ ಕಾಲ ತಲೆಮರೆಸಿಕೊಂಡಿದ್ದು, ಮೇ ತಿಂಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು. ನಿದಾ ಖಾನ್ ಪರ ವಾದ ಮಂಡಿಸಿದ ವಕೀಲ ರಾಹುಲ್ ಕಸ್ಲಿವಾಲ್, ತಮ್ಮ ಕಕ್ಷಿದಾರರು ಗರ್ಭಿಣಿಯಾಗಿದ್ದು ಜೈಲಿನಲ್ಲಿ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂಬ ಪ್ರಮುಖ ಆಧಾರದ ಮೇಲೆ ಜಾಮೀನು ಕೋರಿದ್ದರು. ಈ ಹಿಂದೆ ನ್ಯಾಯಾಲಯವು ಜೈಲು ಅಧಿಕಾರಿಗಳಿಗೆ ಆಕೆಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವಂತೆ ಸೂಚಿಸಿತ್ತು.

ಸಹೋದ್ಯೋಗಿ ಮಹಿಳೆಯರ ದೂರಿನಿಂದ ಬೆಳಕಿಗೆ ಬಂದ ಜಾಲ

ನಾಸಿಕ್‌ನ ಟಿಸಿಎಸ್ ಬಿಪಿಒ ಕೇಂದ್ರದ ಕೆಲವು ಉದ್ಯೋಗಿಗಳು ಮತ್ತು ಮೇಲ್ವಿಚಾರಕರು ತಮಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಹಾಗೂ ಬಲವಂತವಾಗಿ ಮತಾಂತರಕ್ಕೆ ಯತ್ನಿಸುತ್ತಿದ್ದಾರೆ ಎಂದು ಸಹೋದ್ಯೋಗಿ ಮಹಿಳೆಯರು ನೀಡಿದ ದೂರಿನ ಮೇರೆಗೆ ಈ ವರ್ಷದ ಆರಂಭದಲ್ಲಿ ಪ್ರಕರಣ ದಾಖಲಾಗಿತ್ತು. ಇದರ ಗಂಭೀರತೆ ಪರಿಗಣಿಸಿ ನಾಸಿಕ್ ಪೊಲೀಸರು ವಿಶೇಷ ತನಿಖಾ ತಂಡವನ್ನು (SIT) ರಚಿಸಿದ್ದರು.

ತನಿಖೆಯ ಪ್ರಕಾರ, ನಿದಾ ಖಾನ್ ದೂರುದಾರೆಗೆ ಇಸ್ಲಾಮಿಕ್ ಧಾರ್ಮಿಕ ಪುಸ್ತಕಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುವ ಮೂಲಕ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಮತ್ತು ಆಕೆಯ ನಂಬಿಕೆಯನ್ನು ಬದಲಾಯಿಸಲು ಯತ್ನಿಸಿದ್ದರು ಎಂಬ ಆರೋಪವಿದೆ. ಅಲ್ಲದೆ, ದೂರುದಾರ ಮಹಿಳೆಗೆ ಮಲೇಷ್ಯಾದಲ್ಲಿ ಕೆಲಸ ಕೊಡಿಸುವ ಆಮಿಷವನ್ನೂ ಒಡ್ಡಲಾಗಿತ್ತು ಎಂದು ಎಸ್‌ಐಟಿ ತನಿಖೆ ನಡೆಸುತ್ತಿದೆ.

ಜಾಮೀನಿಗೆ ಪ್ರಾಸಿಕ್ಯೂಷನ್ ತೀವ್ರ ವಿರೋಧ

ಆರೋಪಿಗಳ ಜಾಮೀನು ಅರ್ಜಿಗೆ ಸರ್ಕಾರಿ ಅಭಿಯೋಜಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪ್ರಮುಖ ಆರೋಪಿ ಡ್ಯಾನಿಶ್ ಶೇಖ್, ಪರಿಶಿಷ್ಟ ಜಾತಿಗೆ (SC) ಸೇರಿದ ದೂರುದಾರೆಗೆ ಮದುವೆಯಾಗುವುದಾಗಿ ನಂಬಿಸಿ ಲೈಂಗಿಕವಾಗಿ ಶೋಷಿಸಿದ್ದಾನೆ ಹಾಗೂ ಆಕೆಗೆ ಬುರ್ಖಾ ಮತ್ತು ಧಾರ್ಮಿಕ ಪುಸ್ತಕಗಳನ್ನು ನೀಡಿ ಮತಾಂತರಕ್ಕೆ ಪ್ರಚೋದಿಸಿದ್ದಾನೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.

ಅಲ್ಲದೆ, ಆರೋಪಿಗಳು ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ, ಜಾತಿ ನಿಂದನೆ ಮಾಡಿದ್ದಾರೆ ಮತ್ತು ಸಂಚು ರೂಪಿಸಿ ದೂರುದಾರೆಯ ವೈಯಕ್ತಿಕ ದಾಖಲೆಗಳನ್ನು ಪಡೆದು ಹೆಸರು ಬದಲಾಯಿಸಲು ಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ. ಸದ್ಯ ಈ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಲೈಂಗಿಕ ಶೋಷಣೆ, ಮತಾಂತರ ಯತ್ನ ಹಾಗೂ ಕಿರುಕುಳಕ್ಕೆ ಸಂಬಂಧಿಸಿದಂತೆ ಒಟ್ಟು 9 ಪ್ರಕರಣಗಳನ್ನು ಎಸ್‌ಐಟಿ ತನಿಖೆ ನಡೆಸುತ್ತಿದೆ.

You cannot copy content of this page

Exit mobile version