Home ದೇಶ ನೀಟ್ ಅಕ್ರಮ ಕುರಿತು ಪ್ರತ್ಯೇಕ ಚರ್ಚೆಗೆ ಪಟ್ಟು: ವಿಪಕ್ಷಗಳಿಂದ ಸಭಾತ್ಯಾಗ

ನೀಟ್ ಅಕ್ರಮ ಕುರಿತು ಪ್ರತ್ಯೇಕ ಚರ್ಚೆಗೆ ಪಟ್ಟು: ವಿಪಕ್ಷಗಳಿಂದ ಸಭಾತ್ಯಾಗ

0

ನವದೆಹಲಿ: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಒಂದು ದಿನ ಪೂರ್ತಿ ಚರ್ಚಿಸಬೇಕು ಎಂದು ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಸೋಮವಾರ ಒತ್ತಾಯಿಸಿದವು. ಇದಕ್ಕೆ ಸ್ಪೀಕರ್ ಅನುಮತಿ ನೀಡದ ಕಾರಣ ಪ್ರತಿಭಟನೆ ನಡೆಸಿ ಸಭಾತ್ಯಾಗ ಮಾಡಿವೆ.

ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆ ನೀಟ್ ಅಕ್ರಮ ಕುರಿತ ಚರ್ಚೆಗೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಒತ್ತಾಯಿಸಿದರು. ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆ ಮುಗಿಯುವವರೆಗೂ ಪ್ರತ್ಯೇಕ ಚರ್ಚೆ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.

‘ನೀಟ್ ಪ್ರಶ್ನೆ ಪತ್ರಿಕೆಗಳು 70 ಕಡೆ ಸೋರಿಕೆಯಾಗಿವೆ. ಈ ಅಕ್ರಮದ ಬಗ್ಗೆ ಒಂದು ದಿನ ಪ್ರತ್ಯೇಕ ಚರ್ಚೆಯನ್ನು ನಾವು ಬಯಸುತ್ತಿದ್ದೇವೆ. 2 ಕೋಟಿಗೂ ಅಧಿಕ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಈ ಬಗ್ಗೆ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡಿದರೆ ನಮಗೆ ಅತ್ಯಂತ ಸಂತಸವಾಗುತ್ತದೆ’ ಎಂದು ರಾಹುಲ್ ಗಾಂಧಿ ಕೇಳಿಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕಸಭೆ ಉಪನಾಯಕ ಸಿಂಗ್, ʼಸದನದಲ್ಲಿ ಚರ್ಚೆಗೆ ಕೆಲವು ನೀತಿ ನಿಯಮಗಳಿವೆ. ಅವುಗಳೇ ಸದನವನ್ನು ಗಟ್ಟಿಗೊಳಿಸಿವೆ.ನನ್ನ ದಶಕಗಳ ಅನುಭವದಲ್ಲಿ ವಂದನಾ ನಿರ್ಣಯದ ಚರ್ಚೆ ವೇಳೆ ಬೇರೆ ಯಾವುದೇ ವಿಷಯವನ್ನು ಚರ್ಚೆಗೆ ತೆಗೆದುಕೊಂಡಿಲ್ಲ. ಈ ಚರ್ಚೆ ಮುಗಿದ ಬಳಿಕವೇ ಉಳಿದ ವಿಷಯಗಳ ಚರ್ಚೆ ನಡೆಯುತ್ತದೆ’ ಎಂದು ಹೇಳಿದರು.

ವಂದನಾ ನಿರ್ಣಯದ ಮೇಲಿನ ಚರ್ಚೆ ಬಳಿಕ ನೀಟ್ ಕುರಿತ ಚರ್ಚೆಗೆ ಅವಕಾಶ ನೀಡುವ ಬಗ್ಗೆ ಸ್ಪಷ್ಟ ಭರವಸೆ ನೀಡುವಂತೆ ರಾಹುಲ್ ಮತ್ತು ವಿಪಕ್ಷಗಳ ಸದಸ್ಯರು ಒತ್ತಾಯಿಸಿದರು.

ವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಬೇರೆ ಯಾವುದೇ ಚರ್ಚೆಯನ್ನು ತೆಗೆದುಕೊಳ್ಳುವ ಸಂಪ್ರದಾಯವಿಲ್ಲ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಆದರೆ,ನೀಟ್ ಕುರಿತು ಪ್ರತ್ಯೇಕ ಚರ್ಚೆ ನಡೆಸುವ ಕುರಿತು ಸರ್ಕಾರದಿಂದ ಸ್ಪಷ್ಟ ಭರವಸೆಯಾದರೂ ಸಿಗಲಿ ಎಂದು ಪ್ರತಿಪಕ್ಷದ ಸದಸ್ಯರು ಪಟ್ಟು ಹಿಡಿದು, ಸಭಾತ್ಯಾಗ ಮಾಡಿದರು.

You cannot copy content of this page

Exit mobile version