Thursday, June 19, 2025

ಸತ್ಯ | ನ್ಯಾಯ |ಧರ್ಮ

ಸೇವಾಲಾಲ್‌ ಜನ್ಮಸ್ಥಳ ಭಾಯಾಘಡ್‌ ನಲ್ಲಿ ಬಂಜಾರ ಸ್ವಾಭಿಮಾನಿ ಸಮಾವೇಶ

ಹೊನ್ನಾಳಿ: ಬಂಜಾರ ಸಮುದಾಯದ ಸಾಂಸ್ಕೃತಿಕ ನಾಯಕ ಸೇವಾಲಾಲ್‌ ಅವರ ಜನ್ಮಸ್ಥಳವಾದ ಭಾಯಾಘಡ್‌ನಲ್ಲಿ (ಹೊನ್ನಾಳಿ ತಾಲ್ಲೂಕಿನಲ್ಲಿರುವ ಸೂರಗೊಂಡನ ಕೊಪ್ಪ) ರಾಷ್ಟ್ರೀಯ ಸ್ವಯಂ ಸೇವಕ ಸಂಘದ  ಶಿಬಿರಕ್ಕೆ ನೀಡಿರುವ ಅನುಮತಿ ವಿರೋಧಿಸಿ ಬಾಯಾಗಡ್‌ ಬಚಾವೋ ಬಂಜಾರರ ಸ್ವಾಭಿಮಾನಿ ಸಮಾವೇಶ ನಡೆಯಿತು.

21-08-2022 ರಂದು ನಡೆದ ಈ ಸಮಾವೇಶದಲ್ಲಿ ರಾಜ್ಯದ 53 ಬಂಜಾರ ಸಂಘಟನೆಗಳ ಪದಾಧಿಕಾರಿಗಳು ಭಾಗಿಯಾಗಿದ್ದರು. ಬಂಜಾರ ಸಮುದಾಯದ ಸಂಸ್ಕೃತಿ, ಸಾಮಾಜಿಕ ಸ್ಥಿತಿಗತಿಗಳ ಕುರಿತು ಚಿಂತಕರು ಮಾತನಾಡಿದರು. ಬಂಜಾರ ತಾಂಡ ಜನ ಸಂಸ್ಕೃತಿ ಕುರಿತು ಸಂಸ್ಕೃತಿ ಚಿಂತಕರಾದ ಡಾ.ಸಣ್ಣರಾಮ ಮಾತನಾಡಿ ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕೆಂದರೆ ತಳಸಮುದಾಯಗಳಲ್ಲಿ ಸಂಸ್ಕೃತಿ ಕೇಂದ್ರಿಕರಣಕ್ಕೆ ಹೆಚ್ಚಿನ ಅಧ್ಯತೆ ಕೊಡಬೇಕು ಎಂದರು.

ಬಂಜಾರರ ಆಸ್ಮಿತೆ ಮತ್ತು RSSನ ಚಾರಿತ್ರಿಕ ಎಡವಟ್ಟುಗಳ ಬಗ್ಗೆ ಹೈಕೋರ್ಟ್‌ ನ್ಯಾಯವಾದಿ ಎನ್‌. ಅನಂತನಾಯ್ಕ ವಿಷಯ ಮಂಡಿಸಿದರು. ಇದೇ ಸಂದರ್ಭದಲ್ಲಿ ಹೃದ್ರೋಗ ತಜ್ಞ ಡಾ. ಗಿರೀಶ್‌ ಮೂಡ್‌ ಮಾತನಾಡಿ RSS ನ ಸಂಕುಚಿತವಾದದ ಅಪಾಯಗಳನ್ನು ಜಾಗತಿಕ ದೃಷ್ಠಿಕೋನದಲ್ಲಿ ಗಮನಿಸಿ, ತಳಸಮುದಾಯಗಳ ಯುವಜನರು ಆ ಸಂಘದಿಂದ ದೂರ ಇರಬೇಕು ಎಂದರು. ಇದೇ ವಿಷಯದ ಕುರಿತು ಶಿಕಾರಿಪುರ ರಾಘವೇಂದ್ರ ನಾಯ್ಕ ಅವರು ಯುವಕರಿಗೆ RSS ಸಂಘಟನೆಯಿಂದ ಎಚ್ಚರವಹಿಸಬೇಕು ಎಂದು ಕರೆನೀಡಿದರು.

ಎಲ್ಲಾ ಸಂಘಟನೆಗಳ ಪ್ರತಿನಿಧಿಗಳು, ಸ್ವಾಮೀಜಿಗಳು, ಚಿಂತಕರು ಮಾತನಾಡಿ ಭಾಯಾಘಡ್ ಬಂಜಾರರ ಧಾರ್ಮಿಕ ಕೇಂದ್ರವಾಗಿ ಉಳಿಯಬೇಕು. ಇಲ್ಲಿ ಬಂಜಾರ ಸಮುದಾಯದ ಸಂಘಟನೆಗಳಿಗೆ ಮಾತ್ರ ಶಿಬಿರ, ಕಾರ್ಯಕ್ರಮ ಆಯೋಜಿಸಲು ಅವಕಾಶ ನೀಡಬೇಕು. RSS ಸೇರಿದಂತೆ ಅನ್ಯ ಸಮುದಾಯದ ಸಂಘಟನೆಗಳಿಗೆ ಎಂದಿಗೂ ಅವಕಾಶ ನೀಡಬಾರದು ಎಂದು ಹಕ್ಕೊತ್ತಾಯ ಮಾಡಿದರು.

ಸಮಾವೇಶದ ವೇದಿಕೆಯ ಮೇಲೆ ಬಂಜಾರ ಸಂಸ್ಕೃತಿಯ ಶ್ರೀ ಸೇವಾಲಾಲ್‌ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಇಡಲಾಗಿತ್ತು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಕೊಟ್ರಪ್ಪ ಹೀರೆಮಾಗಡಿ, ವಿಜಯ್‌ ಜಾದವ್‌, ಡಿ.ಆರ್‌ ಗಿರೀಶ ಮತ್ತು ಡಾ. ಹರೀಶ್‌ ನಾಯ್ಕ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಹಿರಿಯ ನ್ಯಾಯವಾದಿ ಜಯದೇವ ನಾಯ್ಕ ಅವರು ಭಾರತದ ಸಂವಿದಾನದ ಪ್ರಸ್ತವನೆ ಪ್ರತಿಜ್ಞೆಯನ್ನು ಭೋಧಿಸಿದರು.

ಬಂಜಾರರ ಅಭಿವೃದ್ಧಿ ಸಾಂವಿಧಾನಿಕ ಅವಕಾಶಗಳಿಂದ ಮಾತ್ರ ಸಾಧ್ಯ. ನಾವು ಸೇವಾಲಾಲ್, ನಾಲ್ವಡಿ ಕೃಷ್ಣರಾಜ ಒಡೆಯರ್, ಡಾ ಅಂಬೇಡ್ಕರ್ ಅವರ ದಾರಿಯಲ್ಲಿ ಸಾಗೋಣ. ಸಂಘಪರಿವಾದ ಕಾರ್ಯಕ್ರಮಗಳನ್ನು ಬಹಿಷ್ಕರಿಸೋಣ ಎಂದು ಯುವ ಚಿಂತಕ ರುದ್ರು ಪುನೀತ್ ಮಾತನಾಡಿದರು.

ಈ ಸಮಾವೇಶದಲ್ಲಿ ಸರ್ವಾನುಮತದಿಂದ ಕೆಲವು ನಿರ್ಣಯಗಳನ್ನು ಕೈಗೊಳ್ಳಲಾಯಿತು.

ಸಮಾವೇಶದ ನಿರ್ಣಯಗಳು:

೧. ಬಾಯಾಗಡ್ ಕ್ಷೇತ್ರದಲ್ಲಿ ಸೇವಾಲಾಲ್ -ಮರಿಯಮ್ಮಾ ಅವರ ಬಿಳಿಕೆಂಪು ಧ್ವಜ ಮತ್ತು ನಮ್ಮ ರಾಷ್ಟ್ರೀಯ ಧ್ವಜ ಮಾತ್ರ ಹಾರಾಡಬೇಕು. ಇನ್ಯಾವುದೇ ಧ್ವಜ ಹಾರಾಟಕ್ಕೆ ಅವಕಾಶ ಇರಬಾರದು.

೨. ಮಹಾಮಠ ಸಮಿತಿಯ ಪರವಾನಿಗೆ ಇಲ್ಲದೇ ಕರಪತ್ರ ಮುದ್ರಿಸಿ ಪ್ರಚಾರ ಮಾಡಿದ ತಪ್ಪಿಗಾಗಿ RSS ಬಂಜಾರ ಸಮುದಾಯದ ಕ್ಷಮೆ ಯಾಚಿಸಬೇಕು. ಶಿಬಿರ ನಡೆಸಲು ಅವಕಾಶ ಕೋರಿ RSS ನೀಡಿರುವ ಪತ್ರವನ್ನು ತಿರಸ್ಕರಿಸಬೇಕು.

೩. ಸಂತ ಸೇವಾಲಾಲ್ ಅವರ ಜನ್ಮಸ್ಥಳ ಭಾಯಾಗಡ ಅನ್ನು ಪಕ್ಷ ರಾಜಕೀಯದಿಂದ ಮುಕ್ತಗೊಳಿಸಬೇಕು. ರಾಜಕೀಯ ಪಕ್ಷಗಳ ಮುಖಂಡರು ಅಲ್ಲಿಗೆ ಕೇವಲ ಭಕ್ತರಾಗಿ ಆಗಮಿಸಿ ಪ್ರಾರ್ಥನೆ ಮತ್ತು ಸೇವೆ ಸಲ್ಲಿಸಿ ಹೋಗುವಂತೆ ನಿಯಮ ರೂಪಿಸಬೇಕು.

೪. ಭಾಯಾಘಡ್ ವಿಶ್ವ ಬಂಜಾರರ ಪರಮೋಚ್ಚ ಧಾರ್ಮಿಕ  ಕೇಂದ್ರ. ಇದರ ಜೊತೆಗೆ ಸರ್ಕಾರದ ಯಾವುದೇ ಇಲಾಖೆ, ತಾಂಡ ಅಭಿವೃದ್ಧಿ ನಿಗಮ, ಬಂಜಾರ ಅಕಾಡೆಮಿ ಸೇರಿದಂತೆ ಯಾವುದೇ ಸಂಸ್ಥೆಗಳು ಲಿಖಿತ ಪತ್ರ, ಆದೇಶಗಳು ಮೂಲಕ ಮಹಾಮಠ ಸಮಿತಿಯ ಜೊತೆಗೆ ವ್ಯವಹರಿಸುವಂತಹ ನಿಯಮ ರೂಪಿಸಬೇಕು. ಮೌಖಿಕ ಅಥವಾ ಬೈಪಾಸ್ ಮಾಡಿ ಚಟುವಟಿಕೆಗಳನ್ನು ಸಂಘಟಿಸುವ ಪರಿಪಾಠಗಳು ನಿಲ್ಲಬೇಕು.

೫. ಬಂಜಾರ ಸಂಸ್ಕೃತಿ, ಪರಂಪರೆಯ ಸಂರಕ್ಷಣೆ, ಬಂಜಾರರು ಮತ್ತು ತಾಂಡಗಳ ಸಮಗ್ರ ಅಭಿವೃದ್ಧಿಗಾಗಿ  ಭಾಯಾಘಡ್ ಮಹಾಮಠ ಸಮಿತಿ, ಪ್ರತಿಷ್ಠಾನ ಕಾರ್ಯನಿರ್ವಹಿಸುವಂತಾಗಬೇಕು.

೬. ಭಾಯಾಘಡ್ ಮಹಾಮಠ ಸಮಿತಿ ಮತ್ತು ಪ್ರತಿಷ್ಠಾನಕ್ಕೆ ರಾಜ್ಯದ ಎಲ್ಲಾ ಬಂಜಾರ ಸಂಘಟನೆಗಳ ಮುಖಂಡರು, ಸಮಾಜದ ಸ್ವಾಮೀಜಿಯವರು, ಎಲ್ಲಾ ತಾಂಡಗಳ ನಾಯಕ್, ಡಾವೊ, ಕಾರಬಾರಿ, ನಸಾಬಿ ಸೇರಿದಂತೆ ಎಲ್ಲಾ ಆಸಕ್ತರಿಗೆ ಮುಕ್ತವಾಗಿ ಸದಸ್ಯತ್ವ ನೀಡಬೇಕು. ಪ್ರಜಾಸತ್ತಾತ್ಮಕವಾಗಿ ಎಲ್ಲಾ ಹಂತದ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ, ಜವಾಬ್ದಾರಿ ನೀಡುವಂತಾಗಬೇಕು.

೭. ಭಾಯಾಘಡ್ ಮಹಾಮಠ ಸಮಿತಿ ಮತ್ತು ಪ್ರತಿಷ್ಠಾನದ ಆದಾಯ, ಖರ್ಚು, ಉಳಿತಾಯ, ಮತ್ತು ಸಾಲದ ವಿವರಗಳು ಪ್ರತಿಯೊಬ್ಬ ಬಂಜಾರರಿಗೆ ತಿಳಿಯಬೇಕಿದೆ. ಹೀಗಾಗಿ ಕಾಲಕಾಲಕ್ಕೆ ಲೆಕ್ಕಪತ್ರದ ಶ್ವೇತಪತ್ರವನ್ನು ಬಹಿರಂಗಗೊಳಿಸಬೇಕು.

ಇದರೊಂದಿಗೆ ಭಾಯಾಘಡ್ ನಲ್ಲಿ RSS ಶಿಬಿರ ವಿರೋಧಿಸಿ ಅಯ್ದ ಜಿಲ್ಲೆಗಳಲ್ಲಿ ಜಾಗೃತಿ ಸಭೆಗಳನ್ನು ಆಯೋಜಿಸಲು ನಿರ್ಧರಿಸಲಾಯಿತಲ್ಲದೆ ಸೆಪ್ಟೆಂಬರ್ 10 ರಿಂದ ಭಾಯಾಗಡ್ ನಲ್ಲಿ ಕಾರ್ಯಕ್ರಮ ಆಯೋಜಿಸಲು ಎಲ್ಲಾ ಸಂಘಟನೆಗಳ ಪದಾಧಿಕಾರಿಗಳು ತಯಾರಿ ಸಿದ್ದತೆ ಮಾಡಿಕೊಳ್ಳಬೇಕು ಎಂದೂ ತೀರ್ಮಾನಿಸಲಾಯಿತು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page