ಉಡುಪಿ: ನಗರದಲ್ಲಿ ನಡೆಯಲಿರುವ ಶೌರ್ಯ ಜಾಗರಣಾ ಯಾತ್ರೆಯಲ್ಲಿ ಭಾಗವಹಿಸದಂತೆ ಶರಣ್ ಪಂಪ್ವೆಲ್ ಅವರಿಗೆ ಉಡುಪಿ ಜಿಲ್ಲಾ ಪೊಲೀಸ್ ನಿಷೇಧ ಹೇರಿದೆ.
ಇತ್ತೀಚೆಗೆ ಕಾಲೇಜೊಂದರಲ್ಲಿ ನಡೆದ ಘಟನೆಯ ಹಿನ್ನೆಲೆಯಲ್ಲಿ ಶರಣ್ ಪಂಪ್ ವೆಲ್ ಉಡುಪಿಯಲ್ಲಿ ಕೋಮು ಸೌಹಾರ್ದತೆ ಕದಡುವಂತೆ ಉದ್ರೇಕಕಾರಿ ಭಾಷಣ ಮಾಡಿದ್ದರು. ಈ ಕುರಿತು ಉಡುಪಿ ಜಿಲ್ಲಾ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ಶರಣ್ ವಿರುದ್ದ ದಾಖಲಿಸಿದ್ದರು. ಅನಂತರ ನ್ಯಾಯಾಲಯವು ಅವರಿಗೆ ಶರತ್ತು ಬದ್ಧ ಜಾಮೀನನ್ನು ಅಂಗೀಕರಿಸಿತ್ತು. ಪ್ರಸ್ತುತ ಜಾಮೀನು ನಿಯಮ ಉಲ್ಲಂಘನೆ ಆರೋಪದಡಿ ಶರಣ್ ಅವರಿಗೆ ಉಡುಪಿ ಪ್ರವೇಶಿಸದಂತೆ ಪೊಲೀಸರಿಂದ ತಡೆ ನೀಡಲಾಗಿದೆ ಎಂದು ಉಡುಪಿ ಜಿಲ್ಲಾ ಎಸ್ಪಿ ಡಾ| ಅರುಣ್ ಕೆ. ಮಾಹಿತಿ ನೀಡಿದ್ದಾರೆ.
ವಿಶ್ವ ಹಿಂದೂ ಪರಿಷತ್ ಸಂಘಟನೆಗೆ 60 ವರ್ಷ ಪೂರ್ತಿಯಾಗುತ್ತಿರುವ ಸಂದರ್ಭದಲ್ಲಿ ರಾಜ್ಯದಾದ್ಯಂತ ಸಂಚರಿಸಿದ ಶೌರ್ಯ ಜಾಗರಣ ಯಾತ್ರೆ ಉಡುಪಿಯಲ್ಲಿ ಸಮಾರೋಪಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಅಲ್ಲಿ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿತ್ತು. ಸದರಿ ಸಂಘಟನೆಯ ಸದಸ್ಯನಾಗಿರುವ ಶರಣ್ ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಈಗ ಪೊಲೀಸರು ಅವರನ್ನು ತಡೆದಿದ್ದಾರೆ.