ಹಾಸನ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಬೆಳಿಗ್ಗೆ 11 ಗಂಟೆಗೆ ಆರಂಭವಾದ ಪ್ರಜಾ ಸೇವೆ ಆಂದೋಲನ ಸಭೆ ಸತತ 10 ಗಂಟೆಗಳ ಕಾಲ ನಡೆಯಿತು. ಸಭೆಯ ಬಳಿಕ ಅಬಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ ಮಾತನಾಡಿ, ಸಾರ್ವಜನಿಕರಿಂದ ಒಟ್ಟು 1,076 ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 62 ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಿದರು.
ಉಳಿದ ಅರ್ಜಿಗಳನ್ನು ಎರಡು ತಿಂಗಳೊಳಗೆ ಬಗೆಹರಿಸುವಂತೆ ಅಧಿಕಾರಿಗಳಿಗೆ ಸಚಿವರು ತಾಕೀತು ಮಾಡಿದರು. ಸಮಸ್ಯೆಗಳನ್ನು ಪರಿಹರಿಸದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಬಗೆಹರಿಸಲಾಗದ ಅರ್ಜಿಗಳ ಪಟ್ಟಿಯನ್ನು ತಮ್ಮೊಂದಿಗೆ, ಸಂಸದರು ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸುವಂತೆ ಸೂಚಿಸಿದರು. ಸಭೆಯಲ್ಲಿ ಹಾಸನ ಜಿಲ್ಲೆಯ ಬಾರ್ಗಳು ಬೆಳಗಿನ ಜಾವವೇ ತೆರೆಯುತ್ತಿರುವ ಬಗ್ಗೆ ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು, ಯುವಕರು ಮದ್ಯ ಸೇವನೆ ಮಾಡುತ್ತಿದ್ದಾರೆ ಎಂದು ದೂರಿದರು.ಇದಕ್ಕೆ ಸ್ಪಂದಿಸಿದ ಸಚಿವ ಕೆ.ಎಂ. ಶಿವಲಿಂಗೇಗೌಡ, “ಅಬಕಾರಿ ನಿಯಮದಂತೆ ಬೆಳಗ್ಗೆ 10.30ಕ್ಕೆ ಬಾರ್ ತೆರೆಯಬೇಕು. ರಾತ್ರಿ 10.30ಕ್ಕೆ ಬಂದ್ ಮಾಡಬೇಕು” ಎಂದು ಸ್ಪಷ್ಟಪಡಿಸಿದರು.
ನಾಳೆಯಿಂದ ಹಾಸನ ಜಿಲ್ಲೆಯಲ್ಲಿ ಯಾವುದೇ ಬಾರ್ ಬೆಳಗ್ಗೆ 10.30ಕ್ಕೂ ಮುನ್ನ ತೆರೆಯಬಾರದು. ಸಮಯಕ್ಕಿಂತ ಮುಂಚೆ ಬಾರ್ ತೆರೆದಿರುವುದು ಕಂಡುಬಂದರೆ ಕ್ರಮ ಖಚಿತ. ಅಬಕಾರಿ ಅಧಿಕಾರಿಗಳು ಸಡಿಲಿಕೆ ನೀಡಿ ಬಾರ್ಗಳನ್ನು ಮುಂಚಿತವಾಗಿ ತೆರೆಯಲು ಅವಕಾಶ ನೀಡಿರುವುದು ಗೊತ್ತಾದರೆ ಸ್ಥಳದಲ್ಲೇ ಅಮಾನತು ಮಾಡಲಾಗುವುದು ಎಂದು ಸಚಿವರು ಖಡಕ್ ಎಚ್ಚರಿಕೆ ನೀಡಿದರು.
