ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಇದೀಗ ಬಿಜೆಪಿಯ ಕೇಂದ್ರ ಶಿಸ್ತು ಸಮಿತಿಯು 6 ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟಿಸಿ ಆದೇಶ ಹೊರಡಿಸಿದೆ. ನಿರಂತರವಾಗಿ ಪಕ್ಷದ ನಾಯಕರನ್ನು ಬಹಿರಂಗವಾಗಿ ಟೀಕಿಸಿದ ಪರಿಣಾಮ ಈಗ ಯತ್ನಾಳ್ ಉಚ್ಛಾಟನೆ ವರೆಗೂ ಬಂದು ನಿಂತಿದೆ.
ಪದೇ ಪದೇ ಸ್ವಪಕ್ಷದ ನಾಯಕರ ವಿರುದ್ಧವೇ ಬಹಿರಂಗ ವಾಗ್ದಾಳಿ ನಡೆಸುತ್ತಿದ್ದ ಯತ್ನಾಳ್ ಇತ್ತೀಚಿನ ದಿನಗಳಲ್ಲಿ ಬಿಜೆಪಿ ಪಕ್ಷದಲ್ಲೇ ಪ್ರತ್ಯೇಕ ಬಣ ರಾಜಕೀಯಕ್ಕೂ ಕಾರಣರಾಗಿದ್ದರು. ಸುಮಾರು ಹತ್ತಕ್ಕೂ ಹೆಚ್ಚು ಶಾಸಕರು ಯತ್ನಾಳ್ ಬಣದ ಜೊತೆಗೆ ಗುರುತಿಸಿಕೊಂಡು, ರಾಜ್ಯಾಧ್ಯಕ್ಷ ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಇದೀಗ ಬಿಜೆಪಿ ರಾಷ್ಟ್ರೀಯ ಶಿಸ್ತು ಸಮಿತಿಯಿಂದ ಅವರನ್ನು ಉಚ್ಚಾಟಿಸಿ ಬಿಜೆಪಿ ಕೇಂದ್ರೀಯ ಶಿಸ್ತು ಸಮಿತಿ ಆದೇಶ ಹೊರಡಿಸಿ ಅಚ್ಚರಿ ಮೂಡಿಸಿದೆ. ರಾಜ್ಯ ಬಿಜೆಪಿ ನಾಯಕರ ವಿರುದ್ಧ ಗಂಭೀರವಾದ ಆರೋಪಗಳನ್ನು ಮಾಡುತ್ತಲೇ ಬಂದಿದ್ದ ಯತ್ನಾಳ್ ಅವರಿಗೆ ಈಗಾಗಲೇ ಹಲವಾರು ಬಾರಿ ಶಿಸ್ತು ಸಮಿತಿಯು ನೋಟಿಸ್ ನೀಡಿತ್ತು. ಆದರೆ ಇದೀಗ ಕೇಂದ್ರೀಯ ಬಿಜೆಪಿ ಶಿಸ್ತು ಸಮಿತಿಯು ಪಕ್ಷದಿಂದ ಅವರನ್ನು 6 ವರ್ಷಗಳ ಕಾಲ ಉಚ್ಛಾಟಿಸಿ ಆದೇಶಿಸಿದೆ.