ಬೆಂಗಳೂರು: ರಾಜ್ಯದ ರಾಜಧಾನಿಯಲ್ಲಿ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುವುದು ರಸ್ತೆಗಳು ಜಾಲಾವೃತವಾಗುವುದುನ್ನು ತಪ್ಪಿಸಬೇಕಾದರೆ ರಾಜಕಾಲುವೆಗಳನ್ನು ತೆರೆವುಗೊಳಿಸಬೇಕು ಮತ್ತು ಚಿಕ್ಕದಾಗಿರುವ ರಾಜಕಾಲುವೆಗಳನ್ನು ವಿಸ್ತಾರಗೊಳಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆ ಅಧಿವೇಶನದಲ್ಲಿ ತಿಳಿಸಿದರು.
ಈ ಕುರಿತು ಮಾತನಾಡಿದ ಅವರು, ನಾನು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಬೆಂಗಳೂರು ನಗರದಲ್ಲಿರುವ ರಾಜಕಾಲುವೆಗಳ ಸಮೀಕ್ಷೆ ಮಾಡಿಸಿದ್ದೆ, ಆಗ 1953 ರಾಜಕಾಲುವೆಗಳು ಒತ್ತುವರಿಯಾಗಿದ್ದವು. ಅಧಿಕಾರ ಮುಗಿಯುವುದರೊಳಗೆ 1300 ಒತ್ತುವರೆಗಳನ್ನು ತೆರೆವುಗೊಳಿಸಿದ್ದೆ ಇನ್ನು 653 ಒತ್ತುವರೆಗಳು ಹಾಗೆ ಉಳಿದಿದ್ದಾವೆ. ಅವುಗಳನ್ನೇಲ್ಲ ತೆರವುಗೊಳಿಸಿದ್ದರೆ ಬೆಂಗಳೂರಿನಲ್ಲಿ ಇಷ್ಟು ಪ್ರಮಾಣದ ಹಾನಿ ಆಗುತ್ತಿರಲಿಲ್ಲ ಎಂದರು.
ಒಂದು ಕೆರೆಯಿಂದ ಇನ್ನೊಂದು ಕೆರೆಗೆ ಸಂಪರ್ಕವಿಲ್ಲ ಮತ್ತು ಅವುಗಳು ಹೂಳು ತುಂಬಿಕೊಂಡಿವೆ. ಇದರಿಂದಾಗಿ ಕೆರೆಗಳು ಬೇಗ ತುಂಬಿಕೊಳ್ಳುತ್ತವೆ, ಹಾಗಾಗಿ ನೀರು ಅಪಾರ ಪ್ರಮಾಣದಲ್ಲಿ ಗ್ರಾಮಗಳಿಗೆ, ರಸ್ತೆಗಳಿಗೆ ನುಗ್ಗಿ ಜನರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸರ್ಕಾರ ಆದಷ್ಟು ಬೇಗ ಉಳಿದಿರುವ ರಾಜಕಾಲುವೆಗಳನ್ನು ತೆರವುಗೊಳಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು.