Saturday, June 21, 2025

ಸತ್ಯ | ನ್ಯಾಯ |ಧರ್ಮ

ಸಿಕ್ಕಿಂ ಪ್ರವಾಹ.. 14 ಮಂದಿ ಸಾವು.. 102 ಮಂದಿ ನಾಪತ್ತೆ

ಗ್ಯಾಂಗ್ಟಕ್: ಸಿಕ್ಕಿಂ ಹಠಾತ್ ಪ್ರವಾಹಕ್ಕೆ ತುತ್ತಾಗಿದೆ. ಉತ್ತರ ಸಿಕ್ಕಿಂನ ಲೋನಕ್ ಸರೋವರದ ಪ್ರದೇಶದಲ್ಲಿ ಮಂಗಳವಾರ ಮಧ್ಯರಾತ್ರಿ ಮಳೆ ಸುರಿದಿದೆ.

ಈ ಮಳೆಯಿಂದಾಗಿ ಲೋಚೆನ್ ಕಣಿವೆಯ ತೀಸ್ತಾ ನದಿಗೆ ಭಾರೀ ಪ್ರಮಾಣದಲ್ಲಿ ಪ್ರವಾಹ ಉಂಟಾಗಿದೆ ಎಂದು ತಿಳಿದುಬಂದಿದೆ. ಇದುವರೆಗೆ 14 ಮಂದಿ ಸಾವನ್ನಪ್ಪಿದ್ದು, 102 ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಲ್ಲಿ 23 ಸೇನಾ ಸಿಬ್ಬಂದಿ ಸೇರಿದ್ದಾರೆ.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ಇದುವರೆಗೆ 26 ಮಂದಿ ಗಾಯಗೊಂಡಿದ್ದಾರೆ. 2,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. 11 ಸೇತುವೆಗಳು ಕೊಚ್ಚಿ ಹೋಗಿದ್ದು, 22,000ಕ್ಕೂ ಹೆಚ್ಚು ಜನರು ತೊಂದರೆಗೀಡಾಗಿದ್ದಾರೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಪೀಡಿತ ಪ್ರದೇಶಗಳಲ್ಲಿ ಸೇನೆ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ಪರಿಹಾರ ಕಾರ್ಯಾಚರಣೆ ನಡೆಸುತ್ತಿದೆ. ಭಾರತೀಯ ವಾಯುಸೇನೆಯೂ ಸಿದ್ಧವಾಗಿದೆ ಎಂದು ಅದು ಹೇಳಿದೆ.

ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಬಿ ಪಾಠಕ್ ಮಾತನಾಡಿ, ದೇಶದ ವಿವಿಧ ಭಾಗಗಳಿಂದ ಸುಮಾರು 3,000 ಪ್ರವಾಸಿಗರು ರಾಜ್ಯದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಚುಂಗ್‌ಥಾಂಗ್‌ನ ತೀಸ್ತಾ ಸ್ಟೇಜ್ 111 ಅಣೆಕಟ್ಟಿನಲ್ಲಿ ಕೆಲಸ ಮಾಡುತ್ತಿರುವ ಅನೇಕ ಕಾರ್ಮಿಕರು ಅಣೆಕಟ್ಟಿನ ಸುರಂಗಗಳಲ್ಲಿ ಸಿಲುಕಿಕೊಂಡಿದ್ದಾರೆ ಎಂದು ಹೇಳಿದ್ದಾರೆ.

ತೀಸ್ತಾ ನದಿಯ ಜಲಾನಯನ ಪ್ರದೇಶದ ದಿಕ್ಚು, ಸಿಂಗ್‌ಥಾಮ್ ಮತ್ತು ರಂಗ್‌ಪೋ ಪಟ್ಟಣಗಳ ತಗ್ಗು ಪ್ರದೇಶಗಳನ್ನು ಪ್ರವಾಹವು ಮುಳುಗಿಸಿತು. ಹಲವೆಡೆ ರಸ್ತೆಗಳು ಜಲಾವೃತವಾಗಿವೆ. ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ಅನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 10 ಹಲವೆಡೆ ಹಾನಿಯಾಗಿದೆ. ನೂರಾರು ಮನೆಗಳು ನಾಶವಾಗಿವೆ. ಸಿಕ್ಕಿಂನಿಂದ ಬಂಗಾಳಕ್ಕೆ ತೀಸ್ತಾ ನದಿ ಹರಿಯುತ್ತಿರುವುದರಿಂದ ರಾಜ್ಯದ ಗಡಿಯಲ್ಲಿನ ಮನೆಗಳಿಗೆ ಪ್ರವಾಹ ನುಗ್ಗಿದೆ. ಬಂಗಾಳದ ಕಾಲಿಂಪಾಂಗ್ ಜಿಲ್ಲೆಯಲ್ಲಿ ಹಲವು ಮರಗಳು ನೆಲಕ್ಕುರುಳಿವೆ. ಮನೆಗಳು ಕೊಚ್ಚಿ ಹೋಗಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page