ಸಿಕ್ಕಿಂ,ಅಕ್ಟೋಬರ್.07: ಉತ್ತರ ಸಿಕ್ಕಿಂನ ಲಾಚೆನ್ ಕಣಿವೆಯಲ್ಲಿ ಬುಧವಾರ ಮುಂಜಾನೆ ಹಿಮ ಸರೋವರ ಸ್ಫೋಟಗೊಂಡು ಉಂಟಾದ ಪ್ರವಾಹ 25,000 ಕ್ಕೂ ಹೆಚ್ಚು ಜನರ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, 1,200 ಕ್ಕೂ ಹೆಚ್ಚು ಮನೆಗಳು ಹಾನಿಗೊಂಡಿವೆ ಮತ್ತು 13 ಸೇತುವೆಗಳನ್ನು ಕೊಚ್ಚಿಹೋಗಿವೆ.
ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಬಿ ಪಾಠಕ್, ಭಾರೀ ಮಳೆಯ ನಂತರ ಲ್ಹೋನಕ್ ಸರೋವರದ ದಂಡೆ ಒಡೆದು ತೀಸ್ತಾ ನದಿಗೆ ಹೆಚ್ಚಿನ ಪ್ರಮಾಣದ ನೀರನ್ನು ಹರಿದು, ನೀರಿನ ಮಟ್ಟ ಹೆಚ್ಚಿದೆ ಎಂದು ಹೇಳಿದ್ದಾರೆ.
ಈಗಾಗಲೇ 2,413 ಜನರನ್ನು ರಕ್ಷಿಸಲಾಗಿದ್ದು, ಸಿಕ್ಕಿಂ ರಾಜ್ಯಾದ್ಯಂತ ಸ್ಥಾಪಿಸಲಾದ 22 ಪರಿಹಾರ ಶಿಬಿರಗಳಲ್ಲಿ 6,875 ಜನರು ಆಶ್ರಯ ಪಡೆದಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಪ್ರವಾಹಕ್ಕೆ ರಾಜ್ಯದ ಅತಿದೊಡ್ಡ ಜಲವಿದ್ಯುತ್ ಯೋಜನೆಯಾದ ಸಿಕ್ಕಿಂ ಉರ್ಜಾ ಕೂಡಾ ಕೊಚ್ಚಿಕೊಂಡು ಹೋಗಿದೆ. ಜೊತೆಗೆ 200 ಮೀಟರ್ ಸೇತುವೆಯನ್ನು ಅದರ ಪವರ್ ಹೌಸ್ಗೆ ತಂದು ನಿಲ್ಲಿಸಿದೆ.
ಹಠಾತ್ ಉಂಟಾದ ಪ್ರವಾಹಕ್ಕೆ ಭಾರತೀಯ ಸೇನೆಯ ಕಟ್ಟಡಗಳೂ ಕೊಚ್ಚಿಕೊಂಡು ಹೋಗಿವೆ. ಸಿಕ್ಕಿಂ ಸರ್ಕಾರವು ತೀಸ್ತಾ ನದಿಯ ದಡದಲ್ಲಿರುವ ಸ್ಥಳೀಯರಿಗೆ ದಡದಲ್ಲಿ ಯಾವುದೇ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಅಥವಾ ಸ್ಫೋಟಕಗಳು ಕಂಡುಬಂದರೆ ಅವನ್ನು ಮುಟ್ಟದಂತೆ ಗುರುವಾರ ಸಲಹೆ ನೀಡಿತ್ತು. ಉತ್ತರ ಬಂಗಾಳದ ಜಲ್ಪೈಗುರಿ ಜಿಲ್ಲೆಯ ಪೊಲೀಸರು ಕೂಡ ಇದೇ ರೀತಿಯ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಎಚ್ಚರಿಕೆಯ ಹೊರತಾಗಿಯೂ ಪ.ಬಂಗಾಳದ ಜಲ್ಪೈಗುರಿಯಲ್ಲಿ ಮಾರ್ಟರ್ ಶೆಲ್ ಸ್ಫೋಟಗೊಂಡ ನಂತರ ಏಳು ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಮತ್ತು ಐವರು ಗಾಯಗೊಂಡಿದ್ದಾರೆ ಎಂದು ಈಸ್ಟ್ ಮೋಜೋ ವರದಿ ಮಾಡಿದೆ.
ಶನಿವಾರ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು ಮೃತರ ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರ ಮತ್ತು ಪರಿಹಾರ ಶಿಬಿರಗಳಲ್ಲಿ ಆಶ್ರಯ ಪಡೆದವರಿಗೆ ತಲಾ 2,000 ರೂಪಾಯಿಗಳ ತಕ್ಷಣದ ಪರಿಹಾರವನ್ನು ಘೋಷಿಸಿದ್ದಾರೆ.
ಸಾವಿರಾರು ಕೋಟಿ ರೂಪಾಯಿ ಹಾನಿಯಾಗಿದೆ ಎಂದು ಪಿಟಿಐಗೆ ತಿಳಿಸಿರುವ ತಮಾಂಗ್. “ನಾವು ಹಾನಿಯ ಬಗ್ಗೆ ನಿಖರವಾದ ವಿವರಗಳನ್ನು ನೀಡಲು ಸಾಧ್ಯವಿಲ್ಲ. ಸಮಿತಿ ರಚನೆ ಮಾಡಿ ವಿಶ್ಲೇಷಣೆಯನ್ನು ಪೂರ್ಣಗೊಳಿಸಿದ ನಂತರ ಅದರ ಬಗ್ಗೆ ಬಹಿರಂಗ ಪಡಿಸುತ್ತೇವೆ. ಪ್ರವಾಹದಲ್ಲಿ ಸಿಲುಕಿದವರನ್ನು ರಕ್ಷಿಸುವುದು ಮತ್ತು ಅವರಿಗೆ ತಕ್ಷಣದ ಪರಿಹಾರ ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ,” ಎಂದು ಹೇಳಿದ್ದಾರೆ.
ಸಿಕ್ಕಿಂನ ವಿಪತ್ತು ಪೀಡಿತ ಪ್ರದೇಶಗಳಿಗೆ ರಾಜ್ಯ ಸರ್ಕಾರ ಮತ್ತು ಸಿಕ್ಕಿಂ ಉರ್ಜಾ ಲಿಮಿಟೆಡ್ ಆರ್ಥಿಕ ಪರಿಹಾರ ಪ್ಯಾಕೇಜ್ ಅನ್ನು ಬಿಡುಗಡೆ ಮಾಡಲಿದೆ ಎಂದು ಮುಖ್ಯಮಂತ್ರಿ ಶುಕ್ರವಾರ ಘೋಷಿಸಿದ್ದರು. “ನಾವು ಮಂಗನ್ ಜಿಲ್ಲೆಗೆ 25 ಕೋಟಿ ರೂಪಾಯಿ ಮತ್ತು ಗ್ಯಾಂಗ್ಟಾಕ್, ಪಾಕ್ಯೋಂಗ್ ಮತ್ತು ನಾಮ್ಚಿ ಜಿಲ್ಲೆಗಳಿಗೆ ತಲಾ 15 ಕೋಟಿ ರೂಪಾಯಿಗಳ ಪರಿಹಾರ ಪ್ಯಾಕೇಜ್ ಅನ್ನು ಮಂಜೂರು ಮಾಡಿದ್ದೇವೆ.” ಎಂದು ತಮಂಗ್ ಟ್ವೀಟ್ ನಲ್ಲಿ ತಿಳಿಸಿದ್ದಾರೆ.