ಕಾವೇರಿ ವನ್ಯಜೀವಿ ಧಾಮದ ಆರು ಬೇಟೆ ನಿರೋಧಕ ಶಿಬಿರಗಳ ಧ್ವಂಸ: ಜಿಲೆಟಿನ್ ಕಡ್ಡಿ ಬಳಸಿ ಸ್ಫೋಟಿಸಿದ ದುಷ್ಕರ್ಮಿಗಳು

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಕಾವೇರಿ ವನ್ಯಜೀವಿ ಧಾಮದ ವ್ಯಾಪ್ತಿಯಲ್ಲಿದ್ದ ಆರು ಬೇಟೆ ವಿರೋಧಿ ಶಿಬಿರಗಳನ್ನು (ಆ್ಯಂಟಿ-ಪೋಚಿಂಗ್ ಕ್ಯಾಂಪ್) ಕಿಡಿಗೇಡಿಗಳು ಧ್ವಂಸಗೊಳಿಸಿರುವ ಘಟನೆ ಬೆಳಕಿಗೆ ಬಂದಿದೆ.

ಆಗಸ್ಟ್ 15 ರಂದು ಅರಣ್ಯ ಇಲಾಖೆ ಸಿಬ್ಬಂದಿ ಆತ್ಮರಕ್ಷಣೆಗಾಗಿ ಮೂವರು ಶಂಕಿತ ಬೇಟೆಗಾರರನ್ನು ಗುಂಡಿಕ್ಕಿ ಕೊಂದಿದ್ದಾರೆ ಎನ್ನಲಾದ ಘಟನೆ ನಡೆದ ಕೆಲವೇ ದಿನಗಳಲ್ಲಿ ಈ ಕೃತ್ಯ ನಡೆದಿದೆ. ಆದರೆ, ಮೃತಪಟ್ಟವರು ತಪ್ಪಿಸಿಕೊಂಡಿದ್ದ ಜಾನುವಾರುಗಳನ್ನು ಹುಡುಕಲು ಕಾಡಿಗೆ ಹೋಗಿದ್ದ ಮುಗ್ಧ ಗ್ರಾಮಸ್ಥರು ಎಂದು ಸ್ಥಳೀಯರು ಪ್ರತಿಪಾದಿಸುತ್ತಿದ್ದಾರೆ.

ಮಂಗಳವಾರ ಸಂಜೆ ಅರಣ್ಯಾಧಿಕಾರಿಗಳು ದಟ್ಟ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸಿದಾಗ ಶಿಬಿರಗಳ ನಾಶವಾಗಿರುವುದು ಬೆಳಕಿಗೆ ಬಂದಿದೆ. ಜಿಲೆಟಿನ್ ಕಡ್ಡಿಗಳನ್ನು ಬಳಸಿ ಈ ಶಿಬಿರಗಳನ್ನು ಸ್ಫೋಟಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ದಾಳಿಯ ಸಮಯದಲ್ಲಿ ಸ್ಥಳದಲ್ಲಿ ಯಾವುದೇ ಅರಣ್ಯ ಸಿಬ್ಬಂದಿ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಶಂಕಿತ ಬೇಟೆಗಾರರ ಸಾವಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರಬಹುದು ಎಂದು ಅರಣ್ಯಾಧಿಕಾರಿಗಳು ಶಂಕಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

Related Articles

ಇತ್ತೀಚಿನ ಸುದ್ದಿಗಳು